ನೂತನ ದೋಶೆಟ್ಟಿ
ಬಿಟ್ಟು ಬಿಡಲೊಲ್ಲರು ಯಾರೂ
ಪ್ರೀತಿಗೆ ದ್ವೇಷವನ್ನು
ನಿರಾಕಾರಕ್ಕೆ ಆಕಾರವನ್ನು
ಸತ್ಯಕ್ಕೆ ಅಸತ್ಯವನ್ನು
ಪೋಣಿಸಿ ಹೆಣೆಯುತ್ತಾರೆ
ಬಿಡಲೊಲ್ಲರು
ನೋವು ನಲಿವಾಗಲು
ಭಯ ಅಭಯವಾಗಲು
ಸೋಲು ಗೆಲುವಾಗಲು
ಚಾಚಿದ ಕೈಗೆ ಆಸರೆಯಾಗಲು
ಬಿಡುತ್ತಾರೆ
ಗಾಯ ವ್ರಣವಾಗಲು
ಬದುಕು ಭಾರವಾಗುತ್ತದೆ
ನಸುನಗು ನುಲಿಯಲು
ಸುಡು ಸುಡುವ ಹಗೆಯ ಧಗೆ
ಸದಾ ಉರಿಯಲು
ಕೇಳುತ್ತಾರೆ
ಊಟ, ಉಪಚಾರ, ಪ್ರವರ
ಊರು, ಕುಲ, ಗೋತ್ರ
ಮನೆ- ಮಾರು ಆಸ್ತಿ ವಿವರ
ಹುಡುಕಿಕೊಳ್ಳುತ್ತಾರೆ
ಸವಾರಿ ಮಾಡುವ ಸೂತ್ರ
ಆಡಿಕೊಳ್ಳುತ್ತಾರೆ
ಕೊಂಕಿಸಿ ಕುಟುಕುತ್ತಾರೆ
ಎದೆ ಮೂಲೆಯ ಬೆಚ್ಚಗಿನ
ನಂಬಿಕೆಯ ನಂಟು ಬಿಡಿಸುತ್ತಾರೆ
ಸಾವಂಥ ಬದುಕ ಜೀಕು ಜೋಕಾಲಿಯ
ತೂಗಿ ನಗುತ್ತಾರೆ
ಸಂತೆಯಲಿ ನೇಯ್ದ ಮೂರು ಮೊಳದ
ಅಳತೆಯೇ ದಕ್ಕಿಲ್ಲದವರು
ದಿಕ್ಕಿಲ್ಲದವರಿವರು
ಚುಕ್ಕಾಣಿ ಹಿಡಿದು ಹೊರಟವರು
ನಾಲಿಗೆಯ ಮಸೆಮಸೆದು
ಎದೆ ಕಿಚ್ಚ ಉರಿದುರಿಸಿ
ಮಾನವೀಯತೆಯ ಮಥಿಸುವವರು
ಎಚ್ಚರ!!
ನಗೆಯ ಹಿಂದಿನ ಹಗೆಯಲ್ಲೋ
ಮೆಲುಮಾತ ಮರೆಯ ಕ್ರೌರ್ಯದಲ್ಲೋ
ಸಾಂಗತ್ಯದ ಸೋಗಿನಲ್ಲೋ
ಸುಳಿಯುತ್ತಾರೆ ಸುತ್ತಲು
ಸದ್ದಿಲ್ಲದೆ ನುಸುಳುತ್ತಾರೆ
ಹೊಂಚಿ ಕೆಡವುತ್ತಾರೆ
ಕನಸ ಗೋಪುರವ
ಕಾಯುತ್ತಿರಬೇಕು
ನನ್ನಂಥ ನಿನಗಾಗಿ
ನಮ್ಮಂಥ ಅವರಿಗಾಗಿ
ಬರುವಿಕೆಯ ನಂಬಿಕೆಯ
ನೆರಳು ಕಾಯಲಿ
ಬದುಕ ಹಾದಿಯಲಿ.
ನಂಬಿಕೆ, ಪ್ರೀತಿ, ವಿಶ್ವಾಸ, ನೆಮ್ಮದಿಯ ಜೀವನದ ಆಧಾರ.
ಈ ಕವಿತೆ ಬದುಕಿನ ಆಯಾಮಗಳನ್ನು ಬಿಚ್ಚಿಟ್ಟಿದೆ. ನೀವು ಬರೆದ ಭಿನ್ನ ಕವಿತೆ ಇದು. ತುಂಬಾ ತಾತ್ವಿಕವಾಗಿ, ಮನುಷ್ಯರ ವಂಚನೆಯನ್ನು ತೆರೆದಿಡುತ್ತದೆ.
ಕಾಯುತ್ತಿರಬೇಕು
ನನ್ನಂಥ ನಿನಗಾಗಿ
ನಮ್ಮಂಥ ಅವರಿಗಾಗಿ
ಬರುವಿಕೆಯ ನಂಬಿಕೆಯ
ನೆರಳು ಕಾಯಲಿ
ಬದುಕ ಹಾದಿಯಲಿ….
ಈ ಸಾಲುಗಳು ಆಶಾವಾದವನ್ನು ಬಿತ್ತುತ್ತವೆ.. ಕವಿತೆಯ ಕ್ರಿಯೆಯೂ ಅದೇ..ನೋವಿನ ನಡುವೆ ನಗುವ ಹುಡುಕಬೇಕು. ವಿಷಾಧದ ನಡುವೆ ಆಶಾವಾದ ಹುಟ್ಟಬೇಕು. ಆ ಕ್ರಿಯೆ ಈ ಕವಿತೆಯ ಕೊನೆಯ ಪ್ಯಾರಾದಲ್ಲಾಗಿದೆ…
ಒಳ್ಳೆಯ ಕವಿತೆ ಬರೆದ ನಿಮಗೆ ಅಭಿನಂದನೆ…
ಧನ್ಯವಾದಗಳು ನಾಗರಾಜ್
Thumba chennagide.
Every one’s experience
Padagalu ayda
mutthugalannu
Ponisidantive……
.
ಧನ್ಯವಾದಗಳು ಚೇತನ
ಪ್ರತಿಯೊಂದು ಸಾಲು ವರ್ತಮಾನಕ್ಕೆ ಕನ್ನಡಿ ಹಿಡಿದ ಹಾಗಿವೆ.. ಮೇಡಂ.. ಧನ್ಯವಾದಗಳು
ಧನ್ಯವಾದಗಳು ಆಂಜನಪ್ಪ ಅವರೆ