-ಉದಯಕುಮಾರ ಹಬ್ಬು
ಅಮ್ಮ ಹಂಗಿನರಮನೆಯ ಪಂಜರದ ಪಕ್ಷಿ
ಯಾಗಲೊಲ್ಲೆ ಎಂದು
ಕರುಳ ಬಳ್ಳಿಯ ಬೇರು ಕಡಿದು
ಹೋಗುವಷ್ಟು ನಿಷ್ಕರುಣಿಯಲ್ಲ
ನಮ್ಮಮ್ಮ ಕರ್ಣನ ಬಲಿ ಕೊಟ್ಟ
ಕುಂತಿಯಾಗಲಿಲ್ಲ
ಗಾಂಧಾರಿಯಂತೆ ಕೃಷ್ಣನಿಗೆ
ಶಾಪ ಕೊಡಲಿಲ್ಲ
ನಮ್ಮಮ್ಮ ಮಮತೆಯ ಪಾರಿಜಾತ
ತನ್ನ ತೆಕ್ಕೆಗೆ ತೆಗೆದುಕೊಂಡು
ಸುತ್ತ ಆವರಿಸಿ
ಪರಿಮಳ ಬೀರುವ ಪರಿಮಳ
ನಮಗಷ್ಟೇ ಅಲ್ಲ ಬಂದುಹೋಗುವವರಿಗೂ ಅನ್ನಪೂರ್ಣೆ
ಸದಾ ಸುಖಿ
ಮೌನದಿ ಕೂತರೆ ಕೆಲವೊಮ್ಮೆ ಜ್ವಾಲಾಮುಖಿ
ಗೂಡು ಗಾಳಿಗೆ ಸಿಕ್ಕಿ ಹಾದಿಪಾಲಾದಾಗ
ಗೀಜಗನ ಹಕ್ಕಿಯಂತೆ ಅಮ್ಮ
ಸಲಹುವಳು
ಮರಿಗಳು ಸುರಕ್ಷಿತವಾಗಿ ಬೆಚ್ಚಗಿರಲೆಂದು
ಅಮ್ಮನಾಗುವುದೆಂದರೆ
ಸುಮ್ಮನೆಯಲ್ಲ
ಮಮತೆಯ ವಿಶ್ವಮಾತೆಯಾಗುವುದೆಂದರೆ
ಯಾಣದ ಶಿಲಾಕಲೆಗಳಾದ
ತಣ್ಣಗಾದ ಜ್ವಾಲಾಮುಖಿ
ಕುದಿ ಕುದಿದು ತಣ್ಣಗಾದ ಬಿಸಿನೀರಿನಂತೆ
ಅಮ್ಮ ಎಂದರೆ ಅಮ್ಮನೆ
ನದಿಯೆಂದರೆ ನದಿಯೆ






0 Comments