-ವೀರೇಂದ್ರ ರಾವಿಹಾಳ್
ನಿಷ್ಠೆ
ಯಾರೋ ಹೇಳಿದರು
ಪ್ರೀತಿ ಮಾತಿನಲ್ಲಿ ಹುಟ್ಟುತ್ತದೆ
ನಾನು ನಕ್ಕೆ.
ನನ್ನ ಮನೆಯ ಬಾಗಿಲ ಬಳಿ
ಒಂದು ಜೀವ ಪ್ರತಿದಿನ
ಮಾತಿಲ್ಲದೆ
ಪ್ರೀತಿಯ ಅರ್ಥವನ್ನು ಬರೆಯುತ್ತಿತ್ತು.
ಅದರ ಕಣ್ಣುಗಳಲಿ
ಆಕಾಶ ತೊಳೆದ ಬೆಳಕು;
ಬಾಲದಲಿ
ವಸಂತದ ಗಾಳಿ.
ದಣಿದು ಬಂದ ಸಂಜೆಗಳಲಿ
ಅದು ನನ್ನ ನೆರಳನೇ ತಬ್ಬುತ್ತಿತ್ತು;
ನಾನು ನಗುವ ಮುಂಚೆಯೇ
ಅದರ ಕಣ್ಣುಗಳು ಅರಳುತ್ತಿದ್ದವು.
ಒಂದು ಮುಷ್ಟಿ ಅನ್ನ
ಒಂದು ಸ್ಪರ್ಶ—
ಅಷ್ಟೇ ಸಾಕು.
ಉಳಿದಂತೆಲ್ಲ
ಆಜೀವ ನಿಷ್ಠೆಯಿಂದ
ನನ್ನ ಹೆಜ್ಜೆಗಳ ಜೊತೆ ಹೆಜ್ಜೆ ಹಾಕಿ ನಡೆದಿತ್ತು
ಮನುಷ್ಯರ ನಡುವೆ
ವಂಚನೆ ಕಲಿತ ಈ ಲೋಕದಲ್ಲಿ
ಇನ್ನೂ ಸತ್ಯ ಉಳಿದಿದ್ದರೆ,
ಅದು-
ಗುಡಿ ಗೋಪುರದಲಿ
ಮಸೀದಿಯ ಮಿನಾರಿನಲಿ
ಇಗರ್ಜಿಯ ಶಿಲುಬೆಯಲಿ
ಗ್ರಂಥಗಳ ಪುಟಗಳಲಿ ಇಲ್ಲ.
ಸಂಜೆ
ನನ್ನ ಬರುವಿಕೆಯನ್ನೇ ಕಾಯುತ್ತಾ
ಬಾಗಿಲ ಬಳಿಯೇ ಮಲಗಿರುವ
ಆ ಮೌನದ ನಾಯಿಯ
ಉಸಿರಿನೊಳಗಿದೆ.






0 Comments