-ದಸ್ತಗೀರಸಾಬ್ ದಿನ್ನಿ
ಬದುಕಿನ ಹಾಡು
ಆಕಾಶಕ್ಕೆ ಯಾರೋ
ಬಣ್ಣ ಚೆಲ್ಲಿದ್ದಾರೆ.
ಮರವೇ ಹಸಿರು ಮರೆತು
ಮನದ ಬಡತನಕೆ
ಕೇಡಿನ ಕೈಗೆ ಬಲಿಯಾಗಿ
ಕಲಾಕೃತಿಯಾಗಿ ಅರಳಿ ಧ್ಯಾನದಲ್ಲಿದೆ .
ಮಳೆ ಇಲ್ಲದೆ ಕಾಳಜಿ ಕಾಣದೆ
ಒಣ ಮಾತಿನಂತೆ
ಎಲೆ ಹೂ ಕಾಯಿ ಕಳೆದು
ಭಣಗುಟ್ಟುತಿದೆ.
ಹಸಿರುಟ್ಟು ನಲಿಯದ ಕಾಡು
ಸಿಳ್ಳೆ ಹಾಕದ ಒಣಗಾಳಿ
ಕಳೆದು ಹೋದ ಸಂಜೆಹಾಡು
ಕಾಣದ ಮೊಲ್ಲೆಯ ಘಮಲು
ಬೆಳದಿಂಗಳ ನಗುವಿಗೂ ಬರ
ಕವಿತೆಯ ಸಾಲು
ಎಲ್ಲೋ ಕಳೆದು ಹೋಗಿದೆ.
ಹೂ ಮನದ ಮಗನ ಎತ್ತಿ
ನಗಿಸಲು ಯತ್ನಿಸುತ್ತಿದ್ದಾಳೆ ತಾಯಿ.
ನಾಳೆ
ಸಸಿ ನೆಡುವೆ.ಹಸಿರು ಹಬ್ಬಿಸುವೆ
ಟೊಂಗೆಗೆ ಜೋಕಾಲಿ ಕಟ್ಟುವೆ
ಲಾಲಿ ಹಾಡಿ ಮಲಗಿಸುವೆ
ಹಸಿರ ತಬ್ಬಿ ಉಸಿರು ತುಂಬುವೆ
ಖುಷಿಯ ಬೀಜ ಬಿತ್ತುತ್ತಾಳೆ.
ಕಣ್ಣರಳಿಸಿ ಮೆಲ್ಲನೆ ನಕ್ಕ ಮಗುವಿನ ನಗುವಲಿ
ಬದುಕಿನ ಭರವಸೆಯ ಹಾಡು.






0 Comments