ಸಾಹೇಬ
ಪ್ರಕಾಶ್ ಕೊಡಗನೂರ್
ಅಲಲಲಾ ಸಾಹೇಬ
ಆದೆ ನೀ ಪ್ರಭುದೇವ!
ಅದೇನು ಪರಾಕು
ಅದೆಂಥ ಘನತೆ
ಕೂತಲ್ಲಿ ನಿಂತಲ್ಲಿ
ನಿನ್ನದೇ ಜನತೆ
ಅಧಿಕಾರಿಗಳೇ
ಅರ್ಚಕರು ನಿನಗಾದರೆ
ಬಡಜನರೇ
ಭಕ್ತರು ನಿನ್ನಯ ಸೇವೆಗೆ
ಎಲ್ಲೆಲ್ಲಿ ಓದಿದ್ಯೋ
ಏನೆಲ್ಲಾ ಬರೆದಿದ್ಯೋ;
ಹಗಲು ಇರುಳೆನ್ನದೆ
ಹೇಗೆಲ್ಲಾ ಶ್ರಮಿಸಿದ್ಯೋ?
ಯಾರ್ಯಾರ ಕೈ ಕಾಲ್ಹಿಡಿದು
ರೆಕಮೆಂಡು ಮಾಡ್ಸಿದ್ಯೋ;
ಕಪ್ಪಕಾಣಿಕೆಗೂ ಒಪ್ಪಿ
ಎಷ್ಟೆಷ್ಟು ಹಂಚಿದ್ಯೋ?
ಅಂತೂ ಆದೆ ನೀ ಸಾಹೇಬ
ದೈವಕಳೆಯಲಿ ಮಿಂದೆ ಅಬ್ಬಬ್ಬಾ!!
ಅತ್ಲಾಗ ಇತ್ಲಾಗ
ಓಣ್ಯಾಗ ಊರಾಗ
ಎಲ್ಲೆಲ್ಲೂ ಹವಾ
ನಿಂದೇ ಕಣೋ
ಹೋದಲ್ಲಿ ಬಂದಲ್ಲಿ
ಅವರಿವರ ಮನೆಯಲ್ಲಿ
ಝಗಮಗಿಸುವ ನೀ
‘ಇಂದ್ರ-ಚಂದ್ರ’ ಅಣೋ
ರಂಭೆ ಊರ್ವಶಿಯರು
ನಿನ್ನೆಡಬಲಗಳಲ್ಲಿ
ಸುರಸುಂದರಾಗಿಯರು
ನೀ ಹೆಣೆವ ಬಲೆಯಲ್ಲಿ!
ಹೂಸಿದರೂ ನೀ ಮೂಸುವರು
ಹುಸಿನಗೆಯ ಚೆಲ್ಲುವರು
ದುರ್ಗಂಧಕೂ ಸುಗಂಧದ
ಬಿರುದು ದಯಪಾಲಿಸುವರು
ಏನು ಮಹಿಮೆಯೋ
ನಿಂದು ಸಾಹೇಬ
ಸ್ವರ್ಗ ಧರೆಗೇ
ತಂದ್ಯಲ್ಲೋ ಮಹಾರಾಯ!
ನನ್ನ “ಸಾಹೇಬ ” ಕವಿತೆ ಪ್ರಕಟಿಸಿದ ಅವಧಿಗೆ ಧನ್ಯವಾದಗಳು.
ಸಾಹೇಬ ಕವಿತೆಯು ತುಂಬಾ ಚೆನ್ನಾಗಿ ಮೂಡಿ ಬಂದಿದೆ…… ಪತ್ರಿಕೆಗೆ ಹ್ಯಾಟ್ಸ್ಆಫ್
ತುಂಬಾ ಇಷ್ಟವಾಯಿತು