ಸ್ಪೂರ್ತಿ ಗಿರೀಶ್
ಸಂಕಟ ಮೈಮೀರಿ ಕೈಮೀರಿ
ಜಗತ್ತು ಹೊತ್ತಿ ಉರಿಯುವಾಗ
ಯಾವುದೊಂದು ಹೂವು
ಹಕ್ಕಿ ಮಿಗ ಹೆಮ್ಮರ ಏನಾದರೂ ಆಗಬಹುದಿತ್ತು
ಮನುಷ್ಯನಾಗಿ ಹುಟ್ಟಿರದಿದ್ದರಷ್ಟೇ ಸಾಕಾಗಿತ್ತು
ಎಷ್ಟೋ ಸಲ ಅನಿಸಿದೆ
ಸಹಸ್ರ ರೋಗ ನರಳಾಟದಿಂದ
ಬಂದೂಕಿನ ಕ್ರೌರ್ಯದಿಂದ
ತಾಯ ಬೆನ್ನಮೇಲೆ ಆಟವಾಡುವ ಮಗು
ನರಳುವ ನಗರದಿಂದ ತಪ್ಪಿಸಿಕೊಂಡು ತೇಲುವ ಚಂದ್ರನಾಗಬೇಕಿತ್ತು
ಎಷ್ಟೋ ಸಲ ಅನಿಸಿದೆ
ಗೋಡೆಗಳನ್ನು ಬೇಲಿಗಳನ್ನು
ಕೋರ್ಟು ಕಾನೂನು ಸಂಪ್ರದಾಯಗಳ್ನು
ಆರದ ಬೆಂಕಿಯನ್ನು
ಎಂದೂ ನಿಲ್ಲದ ಗಾಲಿ ಗಡಿಯಾರವನ್ನು
ಕಂಡು ಹಿಡಿಯದಿದ್ದಾಗ
ಹಸಿ ಮಾಂಸ ಗೆಡ್ಡೆ ಗೆಣಸು ತಿನ್ನುವ ಬೆತ್ತಲಕಾಲದಲ್ಲಿ
ನಾನು ಹುಟ್ಟಬಹುದಿತ್ತು
ನಡಿ ಎಂದಾಗ ಕಂತೆ ಮುಗಿಸಿ ಮಣ್ಣಾಗಬಹುದಿತ್ತು
ಎಷ್ಟೋ ಸಲ ಅನಿಸಿದೆ
ಬುದ್ದನಾಗಿದ್ದರೆ ಯಾವುದಕ್ಕೂ ಬದ್ದಳಾಗದೇ
ಕೇವಲ ನನ್ನ ಬದುಕನ್ನೇ
ಬದುಕಬಹುದಿತ್ತು
0 ಪ್ರತಿಕ್ರಿಯೆಗಳು