ಸುಭಾಷ್ ರಾಜಮಾನೆ
ನಿನ್ನೆ ಗುರುವೆ ಹೆಜ್ಜಾಜ್ಜಿ ಅವರ ಆಕೃತಿಗೆ ಹೋಗಿದ್ದಾಗ ಕೇಶವ ಮಳಗಿಯವರ ಈ ಪುಸ್ತಕ ಓದಲು ತೆಗೆದುಕೊಂಡು ಬಂದೆ. ಇದರ ಕೆಲವು ಲೇಖನಗಳನ್ನು ಫೇಸ್ ಬುಕ್ ನಲ್ಲಿ ಅವಸರದಲ್ಲಿ ಓದಿದ್ದೆ. ನಮಗೆ ಜಾಗತಿಕ ಸಾಹಿತ್ಯ ಮತ್ತು ಚಿಂತನೆಗಳ ಅರಿವು ಇರುವುದು ಅಗತ್ಯವೇ ಆಗಿದೆ. ಇಲ್ಲವಾದರೆ ನಮ್ಮ ಸಾಹಿತ್ಯವೇ ಅದ್ಭುತ, ಶ್ರೇಷ್ಠ ಎನ್ನುವ ಆತ್ಮರತಿ ಬಂದು ಬಿಡುತ್ತದೆ.
ಜವಾದ ಬರಹಗಾರರು ಹುಟ್ಟುವುದೇ ಶೋಷಕ ಯಜಮಾನಿಕೆಯನ್ನು ಪ್ರಶ್ನಿಸಿ ನಿಲ್ಲುವುದರಿಂದ. ವಸಾಹತುಶಾಹಿಯ ದಬ್ಬಾಳಿಕೆಯಿಂದ ಬಸವಳಿದ ಆಫ್ರಿಕಾದ ಬರಹಗಾರರ ಬಂಡುಕೋರತನದ ಚಿಂತನೆಗಳು ಇಲ್ಲಿವೆ. ಈ ಮೊದಲು ಚಿನುವ ಅಚೀಬೆ, ಗೂಗಿ, ಕೊಯಟ್ಜೆಯವರ ಕೆಲವು ಕೃತಿಗಳು ಕನ್ನಡಕ್ಕೆ ಬಂದಿದ್ದವು. (ನಟರಾಜ ಹುಳಿಯಾರ, ಮಳಗಿ, ಗಂಗಾಧರಯ್ಯ ಅವರ ಸಂಪಾದನೆಯ ‘ಆಫ್ರಿಕಾ ಸಾಹಿತ್ಯ ವಾಚಿಕೆ’ಯಲ್ಲಿ ಕತೆ, ಜಾನಪದ, ಆತ್ಮಕತೆಯ ತುಣುಕುಗಳು, ಕಾವ್ಯ, ನಾಟಕ, ಕಾದಂಬರಿಯ ಭಾಗಗಳಿವೆ) ಆದರೆ ಆಫ್ರಿಕನ್ ಲೇಖಕ/ಲೇಖಕಿಯರ ಚಿಂತನೆಗಳು ಬಂದಿರಲಿಲ್ಲ. ಬಂದಿದ್ದರೂ ಕಡಿಮೆಯೇ.
ಈಗ ಮಳಗಿಯವರ ಮೂಲಕ ಕನ್ನದಲ್ಲಿ ಭರಪೂರ ಓದಲು ಸಿಕ್ಕಿರುವುದು ಕನ್ನಡ ಜಗತ್ತಿನೊಂದಿಗೆ ನೋಡಲು ಸಹಾಯ ಮಾಡುತ್ತದೆ. ಕನ್ನಡದಲ್ಲಿ ಇವತ್ತು ಬರೆಯುತ್ತಿರುವ ಶೋಷಿತ ಸಮುದಾಯಗಳ ಬರಹಗಾರರು ಇಲ್ಲಿಂದ ಕಲಿಯಬೇಕಿರುವ, ತಿಳಿಯಬೇಕಿರುವ ಅಂಶಗಳು ಸಾಕಷ್ಟಿವೆ. ಕನ್ನಡದಲ್ಲಿ ಆರಾಮಾಗಿ ಬರೆಯುತ್ತಿರುವ, ಸನಾತನ ಮೌಲ್ಯಗಳನ್ನು ಸಮರ್ಥಿಸುವವರು ಒಮ್ಮೆ ಇಂತಹ ಲೇಖನಗಳನ್ನು ಓದಬೇಕು.
ಆಗಲಾದರೂ ಸಾಹಿತ್ಯ, ಬರಹ, ಬದ್ಧತೆಗಳೆಂದರೇನು ಎಂಬುದು ತಿಳಿಯುತ್ತದೆ. ಮನುಷ್ಯ ಮನುಷ್ಯರ ಸಮಾನತೆ, ಘನತೆ ಗೌರವಗಳನ್ನು ಧಿಕ್ಕರಿಸುವವರು ಸಾಹಿತ್ಯ ಲೋಕದ ಕೊಲೆಗಡುಕರು ಎಂಬುದು ವೋಲೆ ಷೋಯಿಂಕಾ ಮತ್ತು ನಜೀಬ್ ಮೆಹಫೂಸ್ ಅವರು ನೊಬೆಲ್ ಸ್ವೀಕರಿಸುವಾಗ ಮಾಡಿದ ಭಾಷಣಗಳನ್ನು ಓದಿದರೆ ಗೊತ್ತಾಗುತ್ತದೆ.
ಮಿತ್ರರಾದ ಚೀಮನಹಳ್ಳಿ ರಮೇಶ ಮತ್ತು ಸುರೇಶ ನಾಗಲಮಡಿಕೆ ಅವರು ಈ ಮಹತ್ವದ ಪುಸ್ತಕವನ್ನು ಪ್ರಕಟಿಸಿದ್ದಾರೆ. ಮಳಗಿ ಅವರಿಗೂ ಮತ್ತು ಮಿತ್ರರರಿಗೂ ಅಭಿನಂದನೆಗಳು…
ಚಂದದ ಪುಸ್ತಕ ಪರಿಚಯ