ಕು ಸ ಮಧುಸೂದನ ರಂಗೇನಹಳ್ಳಿ
ಸುತ್ತಿದಷ್ಟೂ ಗುಡಿಗುಂಡಾರ
ಮುಚ್ಚಿಕೊಳ್ಳುವುದು ಸ್ವರ್ಗದ ಬಾಗಿಲು
ತೆರೆದಿಟ್ಟ ನರಕದ ಬಾಗಿಲಲ್ಲೋ
ನೂಕು ನುಗ್ಗಲು
ನಾನು ತೀರಾ ಚಿಕ್ಕವನು
ಲೋಕದೊಳಗಿನ
ದೊಡ್ಡವರ ಮುಂದೆ
ಹಾಗಂತಲೇ ಅವರು ಹೇಳಿದ್ದನ್ನು
ಶಿರಸಾವಹಿಸಿ ಮಾಡುತ್ತೇನೆ
ಪೂಜೆ ಪ್ರಾರ್ಥನೆ ನಮಾಜು
ನಿಷಿದ್ದಗಳ ಬಗ್ಗೆ ಮಾತಾಡಿದಾಗಲೂ
ನಾನು
ಕೇಳುವುದಿಲ್ಲ ಪ್ರಶ್ನೆಗಳ
ಹಾಗಂತ
ಚಂಚಲವಾಗುವುದಿಲ್ಲವಂತೇನು ಅಲ್ಲ ಮನಸು
ಅವಳ ಸೀರೆ ನಿರಿಗೆಗಳ ಕಂಡಾಗ
ಮರುಕ್ಷಣ
ಪಾಪನಿವೇದನೆ
ಮಾಡಿಕೊಳ್ಳುತ್ತೇನೆ
ಏಕಾಂತದಿ ನಿರಾಕಾರ ನೆನೆದು
ಇಷ್ಟಾದರು ಚಿತ್ತಭಿತ್ತಿಯಲಿ
ಅಚ್ಚಳಿಯದೆ ಉಳಿದ
ಅವಳ ಮುಖ ಕಣ್ಣೊಳಗೆ ಕಾಡುತ್ತಿರುತ್ತದೆ
ಕ್ಷಮಿಸು ನಿರಾಕಾರನೆ
ಕಾಣದ ನಿನಗಿಂತ ಕಾಣುವ ಅವಳೇ ಹೆಚ್ಚು ಸತ್ಯ
ಕ್ಷಮಿಸಿಬಿಡು ಸಾದ್ಯವಾದರೆ
ನಿಜ ನಿನ್ನ ಮಾತು
ಪಾಪಿಗಳ ಲೋಕದೊಳಗೆ ಯಾವುದೂ ಪವಿತ್ರವಲ್ಲ!
ಮನದ ವಿಕಾರಗಳಿಗೆ ಕೊನೆಯಿಲ್ಲ…ಹಾಗಂತ ಅವು ಮಾನದಂಡವು ಅಲ್ಲ ಸುಂದರ ಅಭಿವ್ಯಕ್ತಿಯ ಕವಿಗೆ..
ತುಂಬಾ ಚಂದ