ಸುಧಾ ಆಡುಕಳ
ಒಂದು ಆಲದ ಮರ
ದಡ್ಡಕ್ಕನೆ ಉರುಳಿತು
ಬುಡವೆಲ್ಲ ಗೆದ್ದಲು ಹತ್ತಿತ್ತು
ಒಳಿತಾಯಿತು ಎಂದರು ಎಲ್ಲರು
ಗೂಡಿನೊಳಗಿನ ಗುಬ್ಬಚ್ಚಿಗೆ
ಗೊತ್ತು ಕಳಕೊಳ್ಳುವ ನೋವು!
ಆಸೆ, ಅಭಿಲಾಷೆ, ಚೂರೇ ಚೂರು
ದುರಾಸೆ ಎಲ್ಲರಂತೆಯೇ, ಅವನಿಗೂ
ಇತ್ತು, ಅವನು ಅಪ್ಪಟ ಮನುಷ್ಯ!
ಆದರೆ ಮನುಷ್ಯನಾಗಿರುವುದು
ಎಷ್ಟು ಕಷ್ಟವೆಂದು ನನಗೆ ಗೊತ್ತು
ಸಕ್ಕೆಯಿದ್ದಲ್ಲಿ ಇರುವೆಗಳ ಸಾಲು
ಅವನ ದಾರಿಯೆಂದೂ ಕಹಿಯ ಕಡೆಗೆ
ಬಿದ್ದವರ ಎತ್ತಲು ದೇವರಿದ್ದಾನೆ
ಎಂಬುದೆಲ್ಲಾ ಬರಿಯ ವೇದಾಂತ
ಒಂದು ಬೆರಳನ್ನಾದರೂ ಚಾಚು
ಎಂಬುದು ಅವನ ಸಿದ್ಧಾಂತ!
ದೀಪ ಹಚ್ಚಿಟ್ಟರೆ ತೈಲವಾರದ ಮೇಲೆ
ತಂತಾನೇ ಆರಿಹೋಗುತ್ತಿತ್ತು
ಗುಟ್ಟು ಗೊತ್ತಿದ್ದೇ ಇರಬೇಕು
ಎದೆಯೊಳಗೊಂದು ಬೆಳಕಿನ
ಬೀಜವಿಟ್ಟು ಮರೆಯಾದ!
0 ಪ್ರತಿಕ್ರಿಯೆಗಳು