-ಜಿ ವಿ ಆನಂದಮೂರ್ತಿ
ಸುಡುವ ನಕ್ಷತ್ರ
ಈ ಸಂಜೆ ಏಕೆ ಆಕಾಶ ಇಷ್ಟು ಕೆಂಪಾಗಿದೆ
ಅಲ್ಲಿ ದೂರದಲ್ಲಿ
ಎದೆಗೆ ಹತ್ತಿರದಲ್ಲಿ
ಉಸಿರುಗಟ್ಟಿಸುವ ಬೀದಿಗಳಲ್ಲಿ
ನಮ್ಮ ಕರುಳು ಕುಡಿಗಳ ರಕ್ತ ಹರಿಸಿದರು
ಅವರಿಗೆ ಇನ್ನಿಲ್ಲ ತಾಯಿ ಋಣ
ಇನ್ನಿಲ್ಲ ಅವರಿಗೆ ಈ ನೆಲದ ಋಣ
ಹೊಳೆಯಲ್ಲಿ ಕೊಚ್ಚಿಹೋಗಿದೆ ಅವರ ಕನಸುಗಳು
ಕಣ್ಣೆದುರಲ್ಲೇ ಮುಳುಗಿದೆ ಅವರ ಭರವಸೆಯ ನಾವೆ
ಮಗ ಬರದ ಮನೆಯಲ್ಲಿ ದೀಪ ಬೆಳಗುವುದಿಲ್ಲ
ನಿಮಗೇನು ಗೊತ್ತು ತಾಯಿ ಹಕ್ಕಿಯ ನೋವು
ಬರಿದಾಯಿತು ನನ್ನ ಒಡಲು
ಬರಿದಾಯಿತು ನಮ್ಮ ಮನೆ

ನದಿಯಂಥ ಮಗಳು ಮರಳಿ ಬರಲಿಲ್ಲ ಮನೆಗೆ
ಬರಿದಾದ ಆಕಾಶದಲ್ಲಿ ತಾರೆಗಳು ಹೊಳೆಯುವುದಿಲ್ಲ ಇನ್ನು
ಈ ನೆಲಕ್ಕೆ ಮಕ್ಕಳ ರಕ್ತವೆಂದರೆ ಅದೆಷ್ಟು ರುಚಿ!
ಸೋತಿಲ್ಲ ಅವರು
ಉಕ್ಕಿ ಹರಿವ ಲಾವಾರಸ ಅವರು
ಸುಡುವ ನಕ್ಷತ್ರ ಅವರು.






0 Comments