ಸುಗತ ಬರೆಯುತ್ತಾರೆ: ಆರ್ಥಿಕ ನೀತಿಗೆ ಸಮನ್ವಯದ ಸಿದ್ದು ಬೆಸುಗೆ

ಸುಗತ ಶ್ರೀನಿವಾಸರಾಜು

ಸಿದ್ದರಾಮಯ್ಯನವರು ತಮ್ಮ ಮುಂಗಡ ಪತ್ರವನ್ನು ಈಗಷ್ಟೇ ಮಂಡಿಸಿದ್ದಾರೆ. ಅವರು ಅದನ್ನು ಮಂಡಿಸಿದ ಹೊತ್ತಿನಲ್ಲಿ ಸ್ನೇಹಿತರ ನಡುವೆ ಒಂದು ಕುತೂಹಲಕಾರಿ ಚರ್ಚೆ ಅಥವ ಜಿಜ್ಞಾಸೆ ಏರ್ಪಟ್ಟಿತ್ತು. ಆ ಚರ್ಚೆಯ ಆಳದಲ್ಲಿ ಇದ್ದದ್ದು ಒಂದು ಮೂಲಭೂತ ಪ್ರಶ್ನೆ: ಸಿದ್ದರಾಮಯ್ಯನವರು ತಮ್ಮ ರಾಜಕೀಯ ಧೋರಣೆಯಲ್ಲಿ ಸಮಾಜವಾದಿಯಂತೆ ಕಾಣುತ್ತಾರೆ. ಆದರೆ, ಅವರು ಅರ್ಥಮಂತ್ರಿಯಾಗಿ, ಅರ್ಥಶಾಸ್ತ್ರಜ್ಞರಾಗಿ ಸಂಪ್ರದಾಯವಾದಿಯೇ (Conservative)? ಸಂಪ್ರದಾಯವಾದಿ ಎಂಬುದನ್ನು ಇಲ್ಲಿ ಮುಕ್ತ ಆರ್ಥಿಕ ನೀತಿಯ ಪ್ರತಿಪಾದಕರು (Free Market ಅಥವಾ Neo-liberal Economics) ಎಂದು ಓದಿಕೊಳ್ಳಬೇಕು.
ಈ ಪ್ರಶ್ನೆಗೆ ನಾವು ಸಲೀಸಾಗಿ ಉತ್ತರಿಸಲು ಬರುವುದಿಲ್ಲ. ಏಕೆಂದರೆ, ಆರ್ಥಮಂತ್ರಿಯಾಗಿ ಸಿದ್ದರಾಮಯ್ಯನವರು ಸಮಾಜವಾದಿಯೂ ಅಲ್ಲ, ಸಂಪ್ರದಾಯವಾದಿಯೂ ಅಲ್ಲ, ಅವರು ಒಂದರ್ಥದಲ್ಲಿ ಸಮನ್ವಯವಾದಿ. ಎರಡೂ ಆರ್ಥಿಕ ತತ್ತ್ವಗಳ ಬೆಸುಗೆ, ಹೊಂದಾಣಿಕೆಯೇ ಅವರ ಮುಂಗಡ ಪತ್ರದಲ್ಲಿ ಕಾಣುವ ಪ್ರಯತ್ನ. ಆ ಬೆಸುಗೆಗೆ ಹಾಕುವ ಗಂಟನ್ನು ಕೆಲವು ಅರ್ಥಮಂತ್ರಿಗಳು ಒರಟಾಗಿ, ಒಲ್ಲದ ಮನಸ್ಸಿನಿಂದ ಹಾಕುತ್ತಾರೆ. ಆದರೆ, ಸಿದ್ದರಾಮಯ್ಯ ತರಹದವರು ಅದನ್ನು ಬಹಳ ನಾಜೂಕಾಗಿ, ಎದ್ದು ಕಾಣದ ರೀತಿಯಲ್ಲಿ ಬೆಸೆಯುತ್ತಾರೆ. ಅವರದೇ ಪಕ್ಷದ ಹಿರಿಯರಾದ ಪಿ ಚಿದಂಬರಂ ಅಥವಾ ಪ್ರಧಾನಿ ಮನಮೋಹನ್ ಸಿಂಗ್ ಅವರಲ್ಲಿ ಈ ಬೆಸುಗೆಯ ಗಂಟು ಒರಟಾಗಿ ಕಾಣುತ್ತದೆ ಮತ್ತು ಕೆಲವೊಮ್ಮೆ ಗಾಯದಂತೆ ಗೋಚರಿಸುತ್ತದೆ. ಇದರಿಂದ ಕೇಂದ್ರದ ಆರ್ಥಿಕ ನೀತಿಗೆ ಎರಡು ಮುಖಗಳು ಇದ್ದಂತೆ ನಮಗೆ ಕಂಡರೆ ಆಶ್ಚರ್ಯಪಡಬೇಕಾಗಿಲ್ಲ. ಏಕೆಂದರೆ, ಅಲ್ಲಿ ಚಿದಂಬರಂ ಮತ್ತು ಸಿಂಗ್ ಮುಕ್ತ ಮಾರುಕಟ್ಟೆಯ ಆರ್ಥಿಕತೆಯತ್ತ ವಾಲಿದ್ದರೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ಸಮಾಜವಾದಿ ಆಶಯ ಹೊಂದಿದವರಂತೆ ಕಾಣುತ್ತಾರೆ. ಹಾಗಾಗಿಯೇ, ಬಂಡವಾಳ ಹೂಡಿಕೆ ಮತ್ತು ಲಾಭದ ಪರಿಧಿಯಿಂದ ಹೊರಬಂದು, ಸಾಮಾಜಿಕ ಹೂಡಿಕೆಗೆ (Social investment) ದೀರ್ಘಕಾಲೀನ ಆರ್ಥಿಕ ಮಹತ್ವ ಇದೆ ಎಂದು ನಂಬುವ ಆಹಾರ ಭದ್ರತೆ ಕಾಯಿದೆ, ಉದ್ಯೋಗ ಖಾತ್ರಿ ಯೋಜನೆಯಂತಹ ಕಾರ್ಯಕ್ರಮಗಳಿಗೆ ನಾವು ಸೋನಿಯಾ ಗಾಂಧಿಯವರ ಅಭಯ ಇದೆ ಎಂದು ತಿಳಿಯುತ್ತೇವೆ. ಈ ಕಾರ್ಯಕ್ರಮಗಳನ್ನು ನೆನೆದಾಗ ಅವರ ಮುಖಚರ್ಯೆ ನಮ್ಮ ಮುಂದೆ ಬರುತ್ತದೆ.

ಹಾಗೆಯೇ, ವಿತ್ತೀಯ ಶಿಸ್ತು, ವಿದೇಶಿ ಬಂಡವಾಳ ಹೂಡಿಕೆ, ಷೇರು ಮಾರುಕಟ್ಟೆಯ ಏರಿಳಿತ ಇವೆಲ್ಲಕ್ಕೂ ನಾವು ಚಿದಂಬರಂ ಅಥವಾ ಸಿಂಗ್ ಅವರ ಮುಖವನ್ನು ಅಂಟಿಸುತ್ತೇವೆ. ಹೀಗಾಗಿ, ಕೊಂಚ ಹೆಚ್ಚು ತಿಳುವಳಿಕೆ ಇರುವ ಸಾಮಾನ್ಯರಿಗೆ, ಬಂಡವಾಳಶಾಹಿಗಳಿಗೆ ಮತ್ತು ಕೆಲವು ತಜ್ಞರಿಗೂ ಕೇಂದ್ರದ ನೀತಿಯಲ್ಲಿ ದ್ವಂದ್ವ ಇದೆ ಎಂದು ಅನಿಸದೆ ಇರದು. ಒಂದೇ ಪಕ್ಷದ ನೇತಾರರು ಎರಡು ಬೇರೆ ಪರಿಭಾಷೆಗಳನ್ನು ಬಳಸುತ್ತಿದ್ದಾರೆಂದು ಅನ್ನಿಸುವುದು ಸಹಜ. ಇದಕ್ಕೆ ಮೂಲ ಕಾರಣ, ಅವರು ಎರಡು ಆರ್ಥಿಕ ನೀತಿಗಳ ನಡುವೆ, ದಷ್ಟಿಕೋನಗಳ ನಡುವೆ ಹಾಕಿರುವ ಗಂಟು ನಾಜೂಕಾಗಿಲ್ಲದಿರುವುದು. ಸಿಂಗ್ ಮತ್ತು ಚಿದಂಬರಂ ಅವರು ‘Inclusive Growth’ ಎಂಬ ಸಮನ್ವಯದ ಮಾತು ಬಳಸುವಾಗ ಅದು ಗಿಳಿಪಾಠ ಒಪ್ಪಿಸಿದ ಹಾಗೆ ಕೇಳಿಸುತ್ತದೆ. ಅವರ ಮಾತಿಗೆ ಅಷ್ಟು ಬದ್ಧತೆ ಇದ್ದಹಾಗೆ ಕಾಣುವುದಿಲ್ಲ. ಆದರೆ, ಸಿದ್ದರಾಮಯ್ಯನವರು ಈ ಮುಂಗಡ ಪತ್ರದಲ್ಲಿ ಬೆಸೆದಿರುವ ಗಂಟಿಗೆ ಹೆಚ್ಚು ಬದ್ಧತೆಯಿದೆ. ಅದನ್ನು ಅವರು ಪೂರ್ಣ ನಂಬಿದ ಹಾಗೆ ಕಾಣುತ್ತದೆ. ಒಂದೆಡೆ ವಿತ್ತೀಯ ಶಿಸ್ತುಪಾಲನೆಗೆ ಒತ್ತು, ಮತ್ತೊಂದೆಡೆ ಸರ್ವಜನರ (ಅಂದರೆ ದೀನ-ದಲಿತರ) ಹಿತ, ಈ ಎರಡನ್ನೂ ಪ್ರಜ್ಞಾಪೂರ್ವಕವಾಗಿ ತಮ್ಮ ಮುಂಗಾಣ್ಕೆಯ ಅಂತಃಸತ್ವ ಎಂಬಂತೆ ಪ್ರಯೋಗ ಮಾಡಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಅರ್ಥಶಾಸ್ತ್ರವನ್ನು ಅನುಭವದ ಪಡಸಾಲೆಯಲ್ಲಿ ಗ್ರಹಿಸಿದರೆ, ಸಿಂಗ್ ಮತ್ತು ಚಿದಂಬರಂ ಅದನ್ನು ಶಾಸ್ತ್ರೋಕ್ತವಾಗಿ ತರಗತಿಯಲ್ಲಿ ಕಲಿತವರು.
ಈ ಸಮನ್ವಯದ ಬೆಸುಗೆ ಅಷ್ಟೇ ಅಲ್ಲದೆ, ಸಿದ್ದರಾಮಯ್ಯನವರು ತಮ್ಮ ಮುಂಗಡ ಪತ್ರದಲ್ಲಿ ಆನೆಯ ಮಾರ್ಗ ಅನುಸರಿಸುವ ಬದಲು, ಇರುವೆಯ ಶಿಸ್ತಿನ ಹಾದಿಯನ್ನು ತುಳಿದಿದ್ದಾರೆ. ಒಂದು ದೊಡ್ಡ ವಜ್ರಖಚಿತ ಹಾರವನ್ನು ಜನರಿಗೆ ಪ್ರದರ್ಶಿಸುವ ಬದಲು, ಅವರು ನಿಧಾನವಾಗಿ ಒಂದೊಂದೇ ಮಣಿಯನ್ನ್ನು ಪೋಣಿಸಿ ಹಾರ ಮಾಡುವ ಆರ್ಥಿಕ ಮಾರ್ಗವನ್ನು ಅನುಸರಿಸಿದ್ದಾರೆ.
ಹೀಗೆ ನಾವು ಆರ್ಥಿಕ ನೀತಿಯ ಬಗ್ಗೆ ಆಲೋಚನೆ ಮಾಡುತ್ತಿರುವಾಗ, ಭಾರತದಲ್ಲಿ ಯಾವ ಪಕ್ಷ ಬಲದಲ್ಲಿದೆ (Right), ಯಾವ ಪಕ್ಷ ಎಡದಲ್ಲಿದೆ (Left), ಯಾವ ಪಕ್ಷ ಎಡದತ್ತ (Left of Centre) ವಾಲುತ್ತಿದೆ ಮತ್ತು ಯಾವ ಪಕ್ಷ ಬಲದತ್ತ (Right of Centre) ವಾಲುತ್ತಿದೆ ಎಂದು ಹೇಳುವುದು ಬಹಳ ಕಷ್ಟ. ಎಡಪಕ್ಷಗಳು ಮಾತ್ರ ಎಡದಲ್ಲಿವೆ ಎಂದೂ ಖಚಿತವಾಗಿ ಹೇಳುವಂತಿಲ್ಲ. ಏಕೆಂದರೆ, ಅವರು ಅಧಿಕಾರದಲ್ಲಿದ್ದ ಪಶ್ಚಿಮ ಬಂಗಾಳ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಸಮನ್ವಯದ ಮಾರ್ಗವನ್ನೇ ಅನುಸರಿಸಿದ್ದಾರೆ. ಅವರು ಚೀನಾವನ್ನು ತಮ್ಮ ಆರ್ಥಿಕ ನೀತಿಯ ಮಾದರಿ ಎಂದು ಹೇಳಿಕೊಳ್ಳಲು ಕೂಡ ಕೆಲವೊಮ್ಮೆ ಮುಜುಗರಪಡುತ್ತಾರೆ. ಈಗ ಸದ್ಯ, ಚೀನಾದ ಬಗ್ಗೆ ಭಾರತದಲ್ಲಿ ಎಡಪಂಥೀಯರಿಗಿಂತ ಬಲಪಂಥೀಯರಿಗೆ ಆಸ್ಥೆ ಇರುವಂತೆ ಕಾಣುತ್ತದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಆರ್ಥಿಕ ನೀತಿಗಳ ನಡುವೆ ಹೆಚ್ಚು ವ್ಯತ್ಯಾಸವಿಲ್ಲ. ಯಾರು ಅಧಿಕಾರದಲ್ಲಿದ್ದಾರೆ, ಯಾರು ವಿಪಕ್ಷದಲ್ಲಿ ಕೂತಿದ್ದಾರೆ ಎಂಬುದಷ್ಟೆ ಮುಖ್ಯ. ಬಿಜೆಪಿ ಅಧಿಕಾರದಲ್ಲಿದ್ದರೆ ಕಾಂಗ್ರೆಸ್‌ನ ಆರ್ಥಿಕ ನೀತಿಯನ್ನೇ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಮುಂದುವರಿಸುತ್ತದೆ. ವಿಪಕ್ಷದಲ್ಲಿದ್ದಾಗ ಎಲ್ಲವನ್ನೂ ವಿರೋಧಿಸಬೇಕು ಎಂಬ ಕೆಟ್ಟ ಹಟಕ್ಕೆ ಬೀಳುತ್ತದೆ. ಇದನ್ನು ನಾವು ಅನೇಕ ಸಂದರ್ಭಗಳಲ್ಲಿ ಕಂಡಿದ್ದೇವೆ. ಅದು ಅಮೆರಿಕದೊಂದಿಗೆ ಅಣು ಒಪ್ಪಂದದ ಕುರಿತಂತೆ ಇರಬಹುದು ಅಥವಾ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ನೇರ ಬಂಡವಾಳ ಹೂಡಿಕೆಯ ಬಗ್ಗೆ ಆಗಿರಬಹುದು, ಅವರು ಅಧಿಕಾರದಲ್ಲಿದ್ದಾಗ ಏನನ್ನು ಪ್ರತಿಪಾದಿಸುತ್ತಿದ್ದರೋ ಅದಕ್ಕೆ ಸಂಪೂರ್ಣ ವಿರುದ್ಧವಾದ ನಿಲುವನ್ನು ತಳೆದರು. ಅವರ ಈ ನಿಲುವು ರಾಜಕೀಯ ಪ್ರೇರಿತವೇ ಹೊರತು, ಅವರು ನಂಬಿದ ಆರ್ಥಿಕ ಸಿದ್ಧಾಂತಕ್ಕೆ ಪೂರಕವಾದುದ್ದಲ್ಲ. ಹಾಗಾಗಿ, ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಬೇರ್ಪಡಿಸುವುದು ಅವರ ಸಾಮಾಜಿಕ ಧೋರಣೆಗಳೇ ಹೊರತು ಅವರ ಆರ್ಥಿಕ ನೀತಿಗಳಲ್ಲ. ಭಾರತದ ಈ ಎರಡು ದೊಡ್ಡ ಪಕ್ಷಗಳ ಆರ್ಥಿಕ ಜಾಯಮಾನವನ್ನೇ ಪ್ರಾಂತೀಯ ಪಕ್ಷಗಳು ಅನುಸರಿಸುತ್ತಿವೆ. ಇಲ್ಲದಿದ್ದರೆ, ಸಮಾಜವಾದಿ ಎಂದು ಕರೆಸಿಕೊಳ್ಳುವ ಮುಲಾಯಂ ಸಿಂಗ್‌ರ ಪಕ್ಷ, ಕೇಂದ್ರದಲ್ಲಿ ಕಾಂಗ್ರೆಸ್ ನೇತತ್ವದ ರಂಗ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಬಿದ್ದಾಗಲೆಲ್ಲ ಅದರ ಕೈಹಿಡಿಯಲು ಹೇಗೆ ಸಾಧ್ಯ? ಪ್ರಾಂತೀಯ ಪಕ್ಷಗಳು ಆರ್ಥಿಕ ನೀತಿ ಆಧಾರಿತ ನಿಲುವುಗಳನ್ನು ತೆಗೆದುಕೊಳ್ಳುವ ಬದಲು ಜಾತಿ, ಕೋಮು ಮತ್ತು ಅಧಿಕಾರದ ಲೆಕ್ಕಾಚಾರಗಳಿಗೆ ಅನುಗುಣವಾಗಿ ರಂಗ ಬದಲಿಸುತ್ತವೆ.
ಆರ್ಥಿಕ ನೀತಿಯನ್ನೇ ಆಧರಿಸಿ, ರಾಜಕೀಯ ಪಕ್ಷಗಳು ತಮ್ಮ ಚಹರೆಯನ್ನು ರೂಪಿಸಿಕೊಳ್ಳಬೇಕು ಎಂದು ಭಾರತದಂತಹ ದೊಡ್ಡ ದೇಶದಲ್ಲಿ ನಾವು ಆಪೇಕ್ಷಿಸುವುದು ತಪ್ಪಾಗಬಹುದು. ಜನರ ಆರ್ಥಿಕ ಹೊರೆ ಇಲ್ಲಿ ಪ್ರಮುಖ ವಿಚಾರ ಎಂಬುದು ಸತ್ಯ. ಆದರೆ, ಈ ಹೊರೆಯನ್ನು ಇಳಿಸಲು ಚೀನಾದಲ್ಲಾದಂತೆ ಏಕಸೂತ್ರದ ಉಪಾಯಗಳನ್ನು ನಾವು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಸಾಂಸ್ಕತಿಕ ಮತ್ತು ಸಾಮಾಜಿಕ ಸೂಕ್ಷ್ಮಗಳನ್ನು ಒಳಗೊಂಡ ಆರ್ಥಿಕ ಸೂತ್ರಗಳು ಮಾತ್ರ ಒಂದು ಸುಸ್ಥಿರ ವ್ಯವಸ್ಥೆಯನ್ನು ಕಟ್ಟಿಕೊಡಬಹುದು ಮತ್ತು ಈ ಸಾಂಸ್ಕತಿಕ, ಸಾಮಾಜಿಕ, ಆರ್ಥಿಕ ನೀತಿಗಳ ನಡುವೆ ಅನುಸಂಧಾನ ಮಾಡಲು ನಮಗೆ ಪ್ರಬಲ ಪ್ರಜಾಪ್ರಭುತ್ವವಾದಿ ತತ್ತ್ವಗಳ ನೆರವೂ ಬೇಕು. ಇಲ್ಲವಾದರೆ, ದೀರ್ಘಕಾಲೀನ ದಷ್ಟಿಯಿಂದ ನಾವು ನಮ್ಮ ಬೆಳವಣಿಗೆಯನ್ನಾಗಲೀ, ಬದಲಾವಣೆಯನ್ನಾಗಲೀ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಿದ್ದರಾಮಯ್ಯ ತರಹದ ನಾಯಕರು ಒಂದು ಕಡೆ ಜಾಗತಿಕ ಮಾರುಕಟ್ಟೆಯತ್ತ, ಅಲ್ಲಿ ಆಗುತ್ತಿರುವ ಬದಲಾವಣೆಗಳತ್ತ ಗಮನವಿಟ್ಟಿದ್ದರೆ, ಇನ್ನೊಂದೆಡೆ ತಮ್ಮ ರಾಜ್ಯದ ಕುಗ್ರಾಮದಲ್ಲಿರುವ ಸಮಸ್ಯೆಯ ಸಂಪೂರ್ಣ ಅರಿವು ಮತ್ತು ಅದಕ್ಕೆ ಸ್ಪಂದಿಸಲು ಬೇಕಾಗಿರುವ ಅಂತಃಕರಣ ಇರಿಸಿಕೊಳ್ಳಬೇಕಾಗುತ್ತದೆ. ಭಾರತ ಈಗ ಇರುವ ಚಾರಿತ್ರಿಕ ಕಾಲಘಟ್ಟದಲ್ಲಿ ಈ ರೀತಿಯ ನಾಯಕತ್ವ ಮಾತ್ರ ಕೆಲಸ ಮಾಡುತ್ತದೆ. ಪಠ್ಯಪುಸ್ತಕದಲ್ಲಿರುವಂತೆ ವಿಶ್ಲೇಷಣೆ ಮಾಡಿದರೆ, ಇದು ವೈರುಧ್ಯಗಳಿಂದ ಕೂಡಿದ್ದು ಎನಿಸಿದರೂ, ಇದು pragmatic ಆದ ನಡೆ. ಈ ಎರಡೂ ವಾಸ್ತವಗಳನ್ನು ಬೇರೆ ನಾಯಕರಿಗಿಂತ ಹೆಚ್ಚು ಅರ್ಥಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕಾಗಿಯೇ ನಿತೀಶ್ ಕುಮಾರ್ ಮತ್ತು ಸಿದ್ದರಾಮಯ್ಯ (ಸ್ವಲ್ಪ ಹಿಂದೆ ತಿರುಗಿ ನೋಡಿದರೆ ಅರಸು, ಹೆಗಡೆ ಮತ್ತು ದೇವೇಗೌಡ) ತರಹದ ನಾಯಕರು ನಮಗೆ ಹೆಚ್ಚು rootedly cosmopolitan ಆಗಿ ಕಾಣುತ್ತಾರೆ. ಇಂತಹವರ ಎದುರು ನರೇಂದ್ರ ಮೋದಿಯದು ಏಕಸೂತ್ರದ ನಾಯಕತ್ವ ಎಂದೆನಿಸಿದರೆ ನಾವು ಆಶ್ಚರ್ಯಪಡಬೇಕಾಗಿಲ್ಲ. ಮೋದಿಯ ಆರ್ಥಿಕ ದಷ್ಟಿಕೋನ ಮತ್ತು ಬೆಳವಣಿಗೆಯ ಮಾದರಿ ಏಕಮುಖವಾದದ್ದು. ಅದು ಥ್ಯಾಚರ್, ರೇಗನ್, ಬುಷ್ ತರಹದ ಅನುಕಂಪರಹಿತ ಆರ್ಥಿಕ ನೀತಿ ಎಂದೂ ಸಹ ನಾವು ಅರ್ಥೈಸಲು ಸಾಧ್ಯ.
ಪಶ್ಚಿಮದ ರಾಷ್ಟ್ರಗಳಲ್ಲಿ ಪಠ್ಯಪುಸ್ತಕಗಳು ಬೋಧಿಸುವಂತಹ ಆರ್ಥಿಕ ಚೌಕಟ್ಟನ್ನು ಅಳವಡಿಸುವುದು ಸುಲಭ. ಏಕೆಂದರೆ, ಅಲ್ಲಿನ ಜನಸಮುದಾಯಗಳು ಮತ್ತು ಸಂಸ್ಕತಿಗಳು ಭಾರತದಷ್ಟು ವೈವಿಧ್ಯಮಯಾಗಿರುವುದಿಲ್ಲ. ಭಾರತದ ವೈವಿಧ್ಯ ಬೆರಗುಗೊಳಿಸುವಂತಹದ್ದು ಎಂದು ಬೇರೆ ಹೇಳಬೇಕಾಗಿಲ್ಲ. ಪಶ್ಚಿಮದಲ್ಲಿ ನಡೆದ ಹಲವು ಚಾರಿತ್ರಿಕ ಸಂಘರ್ಷಗಳು ಅಲ್ಲಿನ ಸಮುದಾಯಗಳಲ್ಲಿ ಒಂದು ಬಗೆಯ linear arrangement ಸಾಧ್ಯವಾಗಿಸಿವೆ. ಚೀನಾದಲ್ಲೂ ಕಮುನಿಸ್ಟ್ ಕ್ರಾಂತಿಯಿಂದ ಈ linearity ಸಾಧ್ಯವಾಗಿದೆ. ಹಾಗಾಗಿ, ಈ ರಾಷ್ಟ್ರಗಳಲ್ಲಿ ಆರ್ಥಿಕ ನೀತಿ ರೂಪಿಸುವುದು ಭಾರತದಲ್ಲಿ ರೂಪಿಸುವಷ್ಟು ಕಷ್ಟವಲ್ಲ ಮತ್ತು ಇಷ್ಟಾಗಿ, ಆರ್ಥಿಕ ನೀತಿ ಕುರಿತಾದ ಪಠ್ಯಪುಸ್ತಕಗಳನ್ನು ರೂಪಿಸಿರುವುದು ಪಾಶ್ಚಿಮಾತ್ಯ ರಾಷ್ಟ್ರಗಳ ಅಗತ್ಯಗಳಿಗಾಗಿ ಎಂಬುದನ್ನು ನಾವು ಮರೆಯಬಾರದು. ಅಮೆರಿಕದಂತಹ ರಾಷ್ಟ್ರದಲ್ಲಿ ಒಬಾಮಾ ತಳಸಮುದಾಯದ ನಾಯಕನಾಗಿ ಚುನಾಯಿತನಾದರೂ, ಅವನು ಬುಷ್‌ನ ಆರ್ಥಿಕ ನೀತಿಗಳನ್ನೇ ಮುಂದುವರಿಸಬೇಕಾಗಿ ಬಂತು. ‘ಸಮಾಜವಾದಿ’ ಎಂಬ ಪದವನ್ನು ಕೆಲವರು, ಕೆಲಕಾಲ ಅವನನ್ನು ಬಯ್ಯಲು ಬಳಸಿದರು. ಥ್ಯಾಚರ್ ಕಾಲದ ರಾಜಕೀಯ ಹಿಡಿತವನ್ನು ತಪ್ಪಿಸಲು ಇಂಗ್ಲೆಂಡ್‌ನಲ್ಲಿ ಜನಪರ ಎನ್ನಿಸಿಕೊಂಡ ರಾಜಕೀಯ ಪಕ್ಷ ಟೋನಿ ಬ್ಲೇರ್ ತರಹದ ಸಮನ್ವಯ ನಾಯಕ ಎಂದೆನಿಸಿಕೊಳ್ಳಬಹುದಾದವನನ್ನು ತಯಾರು ಮಾಡಬೇಕಾಯಿತು. ಆ ಕಾಲದಲ್ಲಿ ನ್ಯೂಯಾರ್ಕರ್ ವಾರಪತ್ರಿಕೆಯಲ್ಲಿ ಹೆಸರಾಂತ ಬರಹಗಾರ ಜೂಲಿಯನ್ ಬಾರ್ನ್ಸ್ ಬರೆದ ಲೇಖನವೊಂದರ ಶೀರ್ಷಿಕೆ ಹೀಗಿತ್ತು: ‘Left, Right, Left, Right: The Arrival of Tony Blair’.
ಈಗ ಭಾರತದ ಆರ್ಥಿಕ ತಜ್ಞರ ವಲಯದಲ್ಲಿ ಒಂದು ದೊಡ್ಡ ಚರ್ಚೆ ನಡೆಯುತ್ತಿದೆ. ನಮಗೆ ಪ್ರೊ.ಅಮರ್ತ್ಯ ಸೇನ್ ಪ್ರತಿಪಾದಿಸುವ ಆರ್ಥಿಕ ಮಾದರಿ ಬೇಕೋ ಅಥವಾ ಪ್ರೊ.ಜಗದೀಶ್ ಭಗವತಿ ಪ್ರತಿಪಾದಿಸುವ ಆರ್ಥಿಕ ನೀತಿ ಬೇಕೋ ಎಂಬುದು. ಇವರಿಬ್ಬರೂ ವಿರುದ್ಧ ತಾತ್ವಿಕ ನೆಲೆಗಳಲ್ಲಿ ನಿಂತು ಮಾತನಾಡುವ ತೀಕ್ಷ್ಣಮತಿಗಳು. ಈ ಕುರಿತಂತೆ ಮುಂದೊಮ್ಮೆ ಬರೆಯುತ್ತೇನೆ. ಇದರ ನಡುವೆ ಅಮರ್ತ್ಯ ಸೇನ್ ಮತ್ತು ಜಾನ್ ಡ್ರೆಜ್ ಜೊತೆಗೂಡಿ ಬರೆದಿರುವ ಹೊಸಪುಸ್ತಕ ‘An Uncertain Glory: India and its Contradictions’ ಅನ್ನು ಬಹಳ ಆಸ್ಥೆಯಿಂದ ಓದುತ್ತಿದ್ದೇನೆ. ಅವರದ್ದು ಅಂತಃಕರಣದ ಮಾರ್ಗ. ಸಿದ್ದರಾಮಯ್ಯನವರು ಈ ಪುಸ್ತಕ ಓದಿದರೆ ಇಷ್ಟಪಡಬಹುದು.

ಈ ಲೇಖನ ಬೈಠಕ್ ಅಂಕಣದಲ್ಲಿ ವಿಜಯ ಕರ್ನಾಟಕದಲ್ಲಿ ಪ್ರಕಟಿತ

‍ಲೇಖಕರು G

July 17, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

4 ಪ್ರತಿಕ್ರಿಯೆಗಳು

  1. Jayadeva Prasad Moleyar

    ವಾಸ್ತವವನ್ನು ಬಹಳ ಚೆನ್ನಾಗಿ ಹಿಡಿದಿಟ್ಟಿದ್ದೀರಿ. Good article
    ಜಯದೇವ ಪ್ರಸಾದ ಮೊಳೆಯಾರ

    ಪ್ರತಿಕ್ರಿಯೆ
  2. h. r. laxmivenkatesh

    ಸಿದ್ದುಜಿಯವರು ಸಮನ್ವಯ ವಾದಿ. ಹಲವು ಬಾರಿ ಬಜಟ್ ಮಂಡಿಸಿದ ಅನುಭವಿ. ಒಟ್ಟಿನಲ್ಲಿ ಅವರಿಗೆ ಸಲ್ಲಬೇಕಿದ್ದ ಪದವಿ ಈಗ ದೊರೆತಿದೆ. ಅವರು ಹೇಗೆ ಅವನ್ನು ಕಾರ್ಯಾನ್ವಯ ಗೊಳಿಸುವರೊ ಅದರಮೇಲೆ ಅವರ ಮುಂದಿನ ಭವಿಷ್ಯ ನಿಂತಿದೆ. ಒಂದು ಕೋಮಿನ ವ್ಯಕ್ತಿಗೆ ಉನ್ನತ ಪದವಿ ದೊರಕಿದ್ದು ಇನ್ನು ೫ ವರ್ಷಗಳ ತನಕ ಯಾರೂ ಅವರನ್ನು ಅಲ್ಲಡಿಸಲು ಸಾಧ್ಯವಿಲ್ಲ ಎನ್ನುವ ಭರವಸೆ ಅವರಿಗೆ ಶಕ್ತಿ ಕೊಟ್ಟಿದೆ. ಹತ್ತಿರದ ಪ್ರತಿಸ್ಪರ್ಧಿ, ಮಲ್ಲಿಕಾರ್ಜುನ ಖರ್ಗೆಯವರೂ ದೂರ ಸರಿದಿದ್ದಾರೆ. ಈಗ ಸಿದ್ದುರವರ ನಿವಾದ ಬಣ್ಣ ಬಯಲಿಗೆ ಬರುತ್ತದೆ. ಸ್ವಲ್ಪ ಕಾಯಬೇಕು ಅಷ್ಟೆ !

    ಪ್ರತಿಕ್ರಿಯೆ
  3. Sudha ChidanandaGowda

    it may be uncertain glory but glory is there.
    thats true.
    thats why can’t compare india with other countries.
    when 80% of the globe suffered economical rescetion india was safe.
    facts make big defferences.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: