ಮೈಸೂರಿನ ಎಸ್. ಎಫ್. ಹುಸೇನಿ ಸಾಂಝಿ ಕಲೆಯನ್ನು ಬೆಳೆಸುತ್ತಿರುವ ನುರಿತ ಕಲಾವಿಧ. ಬಹುಶಃ ʼಸಾಂಝಿʼ ಎಂಬ ಪದವನ್ನೇ ಯಾರು ಕೇಳಿರಲಿಕ್ಕಿಲ್ಲ. ಅಷ್ಟು ಅಪರಿಚಿತ ಕಲೆಯಿದು. ಖಾಲಿ ಹಾಳೆಯನ್ನು ಕತ್ತರಿಸಿ ಅದಕ್ಕೆ ಒಂದು ರೂಪ ನೀಡುವ ಇವರು ಹಲವಾರು ಶಿಬಿರಗಳನ್ನು ಮಾಡಿದ್ದಾರೆ. ಚಿಂದಿಹಾಳೆಯೊಂದಿಗೆ ಆಟವಾಡುವ ಮಕ್ಕಳಿಗೆ ಚಿಂದಿಯಲ್ಲಿಯೇ ಚಿತ್ತಾರ ಮೂಡಿಸುವುದನ್ನು ಕಲಿಸಿದ್ದಾರೆ.
ಇವರ ಈ ಅಪರೂಪದ ಕಲೆಯ ಬಗ್ಗೆ ʼಅವಧಿʼ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ.
ಚಿಂದಿಯನ್ನು ಚಿತ್ತಾರ ಯಾಕೆ ಮಾಡಿದ್ರಿ ?
ಬಳಕೆಯಾಗದ ಹಾಳೆಯಲ್ಲಿಯೂ ಚಿತ್ತಾರ ಮೂಡಿಸುಬಹುದು ಎಂದು ತೋರಿಸಲು.
ಯಾಕೆ ಸಾಂಝಿಯನ್ನೇ ಒಲಿಸಿಕೊಳ್ಳೋಕೆ ಹೋದ್ರಿ?
ಮುಖ್ಯವಾಗಿ ನಾನು ಚಿತ್ರ ಕಲಾವಿದ. ಮೊದಲು ನಾನು ಹಾಳೆಯ ಕಲೆಯನ್ನು ಆರಂಭ ಮಾಡ್ದಾಗಾ ಇದರ ಬಗ್ಗೆ ಹೆಚ್ಚಾಗಿ ತಿಳಿದಿರಲಿಲ್ಲ. ಕಲಿತಾ ಕಲಿತಾ ಹೋದಂತೆ ಇದು ಭಾರತದ ಪ್ರಾಚೀನ ಕಲೆ ಎಂದು ತಿಳಿಯಿತು. ಇದನ್ನು ಬೆಳೆಸಬೇಕು ಎನ್ನುವ ಉದ್ದೇಶದಿಂದ ಇದನ್ನೇ ಮುಂದುವರೆಸಿದೆ.
ಇದು ಕತ್ತರಿಯ ಕಲೆಯೋ ಅಥವಾ ಹಾಳೆಯ ಕಲೆ ?
ಹಾಳೆಗೆ ರೂಪ ಕೊಡಲು ಕತ್ತರಿ ಬೇಕು, ಹಾಳೆ ಇಲ್ಲದೆ ಚಿತ್ರ ಮಾಡಲಾಗದು. ಹೀಗಾಗಿ ಎರಡರ ಕಲೆಯೂ ಹೌದು.
ಕಾಗದದ ಬಿತ್ತಿ ಶಿಲ್ಪಕ್ಕೆ ಹಾಳೆ ಕೊಟ್ಟವರಾರು ?
ನಮ್ಮ ಕಲಾ ಕಾಲೇಜಿನಲ್ಲಿ ಪರೀಕ್ಷೆ ಮುಗಿದ ನಂತರ ತುಂಬಾ ಪೇಪರ್ ಗಳು ಹಾಳಾಗುತ್ತಿದ್ದವು. ಹಾಗಾಗಿ ನಾನು ಅವುಗಳಿಂದಲೇ ಬಿತ್ತಿ ಶಿಲ್ಪ ಮಾಡುವುದನ್ನು ಶುರುವಿಟ್ಟುಕೊಂಡೆ.
ಸಾಂಝಿ ಕಲೆಯಿಂದ ಹುಸೇನಿ ಬಾಳು ಹಸನಾಯಿತಾ ?
ಹಸನಾಯಿತು ಅಥವಾ ಹಸನಾಗಿಲ್ಲ ಅನ್ನುವುದಕ್ಕಿಂತ ನೆಮ್ಮದಿಯ ಜೀವನ ನಡೆಸುವಷ್ಟು ಈ ಕಲೆ ನನ್ನ ಕೈ ಹಿಡಿದಿದೆ ಎನ್ನಬಹುದು.
0 ಪ್ರತಿಕ್ರಿಯೆಗಳು