ಸವಿತಾ ನಾಗಭೂಷಣ
—-
ಎಲ್ಲರು ಕೇಳುವರು
ಕಾವ್ಯ ಏನೆಂದು?
ನನಗೆ ನಾನೆ ಕೇಳುವೆ
ಕಾವ್ಯ ಏನೆಂದು?
ಅಯ್ಯೋ …..
ಸಾವಿರ ಸಾವಿರ ರಚನೆಗಳು. ಎಲ್ಲೋ ಒಂದು
ಒಂದೇ ಒಂದು ಸಾವಿರದೆ
ಉಸಿರಾಡುವುದು…
ಎಂಟೆದೆಗೆ ತಪ್ಪುವುದೆ
ಸಾವಿನ ನಂಟು ?
ಕಲ್ಲ ಕಡೆದರೆ
ವಿಗ್ರಹ
ಉಸಿರಾಡಿದರೆ
ದೇವರು!
ಪ್ರಾಣ ಪ್ರತಿಷ್ಠಾಪನೆ ಆಗಿ
ಜೀವ ಸಂಚರಿಸಿದರೆ
ಕಲ್ಲೂ ದೇವರು
ಪದಗಳನೊಟ್ಟಿದರೆ
ಕಲ್ಲು ಮರಳು ಮಣ್ಣಿನ
ಕಟ್ಟಡ, ಉಪಮೆ
ಅಲಂಕಾರವು ಚಪ್ಪರ
ಚಮತ್ಕಾರವಲ್ಲವದು
ನಿಶ್ಯಬ್ದದೊಳಗಣ ಶಬ್ದವದು
ರೂಪ ಸ್ಪರ್ಶ ರಸ ಗಂಧ ಮೇಳೈಸಿ
ಪರಿಮಳಿಸಿ ಹೂವರಳಿದಂತೆ…
0 ಪ್ರತಿಕ್ರಿಯೆಗಳು