ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಕನ್ನಡ ಸಿನಿಮಾ ‘ಮಿಥ್ಯ’ ಬಗ್ಗೆ ಗೊರೂರು ಶಿವೇಶ್ ವಿಮರ್ಶೆ
-ಗೊರೂರು ಶಿವೇಶ್
ಈ ಬಾರಿಯ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಮಿಥ್ಯ ಅತ್ಯುತ್ತಮ ಕನ್ನಡ ಚಿತ್ರದ ಜೊತೆಗೆ ಅತ್ಯುತ್ತಮ ಬಾಲಕ ನಟ ಅತೀಶ್ ಶೆಟ್ಟಿ ಮತ್ತು ಅತ್ಯುತ್ತಮ ಪೋಷಕ ನಟಿ ರೂಪಶ್ರೀ ವರ್ಕಾಡಿ ಸೇರಿ ಮೂರು ಪ್ರಶಸ್ತಿಗಳಿಗೆ ಪಾತ್ರವಾಗಿದೆ.
ಚಿತ್ರದ ಆರಂಭದಲ್ಲಿ ರೈಲಿನ ಬಾಗಿಲ ಬಳಿ ನಿಂತು ಬಾಲಕ ಹೊರಗಿನ ಪ್ರಕೃತಿಯನ್ನು ಗಮನಿಸುತ್ತಿದ್ದಾನೆ..ಹೊರಗೆ ಮರ ಗಿಡ, ಬೆಟ್ಟ, ಗುಡ್ಡ, ನದಿ, ಕೊಳ್ಳಗಳು ಅವನೆದುರಿಗೆ ಸಾಗಿ ಹೋಗುತ್ತಿವೆ. ಹುಡುಗನ ಹಿಂದಿನ ಕ್ಯಾಮರದ ಆಂಗಲ್ ನಲ್ಲಿ ಆ ರೀತಿ ಕಾಣಿಸಿದರೂ ಅಲ್ಲಿ ನಿಜಕ್ಕೂ ಚಲಿಸುತ್ತಿರುವುದು ರೈಲು. ಮಿಥ್ಯ ಚಿತ್ರದ ಕಥೆಯನ್ನು ಈ ರೀತಿ ಆರಂಭದಲ್ಲಿಯೇ ಸಾಂಕೇತಿಕವಾಗಿ ನಿರ್ದೇಶಕ ಪ್ರತಿಪಾದಿಸುತ್ತಾರೆ.
ಹೀಗೆ ಪ್ರತಿ ಸನ್ನಿವೇಶದ ಹಿಂದೆ ಸತ್ಯ – ಮಿಥ್ಯ ಗಳ ತಾಕಲಾಟ, ರಕ್ಷಿತ್ ಶೆಟ್ಟಿ ನಿರ್ಮಾಣದ ಸುಮಂತ್ ಭಟ್ ನಿರ್ದೇಶನದ ಮಿಥ್ಯ ಚಿತ್ರದ ತಿರುಳು. ಚಿತ್ರ ಕೊನೆಯವರೆಗೆ ಕುತೂಹಲವನ್ನುಕಾಪಿಟ್ಟು ಕೊಳ್ಳುವುದರ ಜೊತೆಗೆ ಚಿತ್ರದ ಕ್ಲೈಮ್ಯಾಕ್ಸ್ ಪ್ರೇಕ್ಷಕನನ್ನು ಆತಂಕದ ಅಂಚಿಗೆ ತಳ್ಳುವುದರ ಮೂಲಕ ಸೋಶಿಯಲ್ ಥ್ರಿಲ್ಲರ್ ಆಗಿ ಚಿತ್ರ ಮೂಡಿ ಬಂದಿದೆ.

ಮಕ್ಕಳ ಕಣ್ಣಿನ ಮೂಲಕ ಸಮಾಜವನ್ನು ಕಟ್ಟಿಕೊಡುವ ಪ್ರಸಿದ್ಧ ಚಿತ್ರ ಪಥೇರ್ ಪಾಂಚಾಲಿ.ಕನ್ನಡದ ಕಾಡು, ಘಟಶ್ರಾದ್ಧ ಕೂಡ ಮಗುವಿನ ಮುಗ್ಧ ಕಣ್ಣುಗಳ ಮೂಲಕ ಸಮಾಜದ ಕ್ರೌರ್ಯವನ್ನು ಬಿಚ್ಚಿಡುವ ಚಿತ್ರ ಗಳು. ಆದರೆ ನಿರ್ದೇಶಕ ಸುಮಂತ್ ಭಟ್ ತಾವು ತಮ್ಮ ಜೀವನದಲ್ಲಿ ಕಂಡ ಕುಟುಂಬದ ಘಟನೆ ಒಂದಕ್ಕೆ ಇಲ್ಲಿ ಸಿನಿಮಾದ ರೂಪ ನೀಡಿದ್ದಾರೆ.
ಕೆಲವೇ ದಿನಗಳಲ್ಲಿ ನಡೆದು ಹೋದ ತನ್ನ ಕುಟುಂಬದ ದುರ್ಘಟನೆಯೊಂದಕ್ಕೆ ಸಾಕ್ಷಿಯಾಗಿರುವ,ಏಳನೇ ತರಗತಿಯ, ಬಾಲ್ಯದಿಂದ ಪ್ರೌಢಾವಸ್ಥೆಗೆ ಹೊರಳುತ್ತಿರುವ ಬುದ್ಧಿವಂತ ಹುಡುಗ ಮಿಥ್ಯ ಯಾ ಮಿಥುನ್ ನ ಸುತ್ತ ಕತೆ ಸುತ್ತುತ್ತದೆ . ವೇಗದ ಬದುಕಿನ ಮುಂಬೈ ಮಹಾನಗರಿಯಿಂದ ಅನಿವಾರ್ಯವಾಗಿ ನಿದಾನವೇ ಪ್ರಧಾನವಾದ ಉತ್ತರ ಕನ್ನಡದ ಹಳ್ಳಿಯಲ್ಲಿನ ತನ್ನ ಚಿಕ್ಕಮ್ಮನ ಮನೆಗೆ ಬರುತ್ತಾನೆ. ಬದಲಾದ ಪರಿಸರ, ಭಾಷೆ,ಶಾಲೆ, ಬಂಧುಗಳು ಇಲ್ಲಿ ಆತ ಎದುರಿಸುವ ಬಿಕ್ಕಟ್ಟುಗಳು ಚಿತ್ರವನ್ನು ರೂಪಿಸುತ್ತದೆ. ಆತನ ಜೀವನದ ಸುತ್ತ ಇತರರು ಹೇಳುತ್ತಿರುವ ಅವರ ಪಾಲಿನ ಸತ್ಯಗಳು ನಿಜವಾಗಿಯೂ ತನ್ನ ಪಾಲಿಗೆ ಸತ್ಯವೇ ಇಲ್ಲ ಮಿಥ್ಯವೇ?. ಅವರು ತೋರುತ್ತಿರುವ ಪ್ರೀತಿ ಕಾಳಜಿ ದ್ವೇಷ ಸತ್ಯವೇ?ಮಿಥ್ಯವೇ?,ಇಲ್ಲಿ ನಿರ್ದೇಶಕರು ಕಟ್ಟಿಕೊಡುವ ಸತ್ಯ -ಮಿಥ್ಯದ ರೂಪಕಗಳು ವಿಶೇಷವಾಗಿ ಗಮನ ಸೆಳೆಯುತ್ತದೆ.
ಉಸಿರು ಬಿಗಿಹಿಡಿದು ನೋಡುವಂತೆ ಮಾಡುವ ಚಿತ್ರಕಥೆ, ಎಲ್ಲ ಪಾತ್ರಧಾರಿಗಳ ಸಹಜ ಅಭಿನಯ, ಸುಂದರ ಹೊರಾಂಗಣ ಮತ್ತು ಸಂಗೀತ ಐ ಎಂ ಡಿ ಬಿ ರೇಟಿಂಗ್ ನಲ್ಲಿ 7.8 ಇದ್ದು ಅಮೆಜಾನ್ ಪ್ರೈಮ್ ನಲ್ಲಿ ಚಿತ್ರವನ್ನು ವೀಕ್ಷಿಸಬಹುದಾಗಿದೆ.






0 Comments