ಸಂಪು ಕಾಲಂ : 'ಪುಷ್ಪಕವಿ' ಮತ್ತು ಅಡಿಗರು


ಕಳೆದ ವಾರ ನನ್ನ ಲೇಖನ “ಮಲ್ಲಿಗೆಯ ಮೀರಿ ಘಮಿಸಿದ ಕವಿ” ಯಲ್ಲಿ ಕೆ. ಎಸ್. ನರಸಿಂಹಸ್ವಾಮಿಯವರ ಕಾವ್ಯ ಸ್ವರೂಪವನ್ನು ಗುರುತಿಸುತ್ತಾ, ಅವರು ಬರೀ ಪ್ರೇಮ ಕವಿ ಎಂದು ಹೆಸರಾದದ್ದು ಒಂದು ಪ್ರಮಾದವಾಯಿತೆ ಎಂಬ ನನ್ನ ಗೊಂದಲವನ್ನು ಹಂಚಿಕೊಂಡಿದ್ದೆ. ಅದೇ ಲೇಖನದಲ್ಲಿ “ಪುಷ್ಪ ಕವಿಯ ಪರಾಕು” ಎಂಬ ಸಾಲನ್ನು ಉಲ್ಲೇಖಿಸಿದ್ದೆ. ಇದರ ಕುರಿತು ಹೆಚ್ಚಿಗೆ ವಿವರಿಸಿ ಅಂತ ಕಿರಣ್ ಮತ್ತಿನ್ನೂ ಕೆಲವರು ಹೇಳಿದ ನಂತರ ಮೂಡಿದ್ದು ಈ ಬರಹ ಮತ್ತು ಇದರ ಹಿಂದಿನ ಥಾಟ್ ಪ್ರಾಸಸ್.
ವಿಷಯಗಳನ್ನು ತಿಳಿದುಕೊಳ್ಳುವ ಮತ್ತು ಅವನ್ನು ವಿಶ್ಲೇಷಿಸುವ ಒಂದು ಸಣ್ಣ ದಾಹ ನಮ್ಮಲ್ಲಿ ಏನೆಲ್ಲಾ ಪ್ರಶ್ನೆಗಳು ಹುಟ್ಟು ಹಾಕುತ್ತವೆ! ‘ಪುಷ್ಪ ಕವಿಯ ಪರಾಕು’ವಿನ ಎರಡನೆಯ ವಿಸ್ತಾರ ಓದಿನೊಂದಿಗೆ ಒಮ್ಮೆ ಹಾಗೇ ಅಡಿಗರ ಕಾವ್ಯ ಶ್ರೇಣಿಯನ್ನು ಸುತ್ತು ಹಾಕಿ, ನವ್ಯ-ನವೋದಯಗಳ ನಡುವೆ ಹರಿದ ಶೀತಲಸಮರಗಳ ಕಾಲುವೆ ದಾಟಿ, ಅದಕ್ಕೂ ಮೀರಿದ ಮಾನಸಿಕ ತೊಳಲಾಟಗಳತ್ತ ಗಮನ ಹಾಯಿಸಿ, ಕೊನೆಗೆ ನಿಂತದ್ದು, ನಿಬ್ಬೆರಗಾದದ್ದು ಅಡಿಗರೆಂಬ ಅಡಿಗರಿಗೆ ಸಿಗಬೇಕಿದ್ದ ಪ್ರಾಶಸ್ತ್ಯ ನಿಜಕ್ಕೂ ಸಿಕ್ಕಿದೆಯೇ ಎಂಬ ಪ್ರಶ್ನೆಯ ನಿಲ್ದಾಣದಲ್ಲಿ!
‘ಪುಷ್ಪ ಕವಿಯ ಪರಾಕು’ ಗೋಪಾಲ ಕೃಷ್ಣ ಅಡಿಗರ ‘ನಡೆದು ಬಂದ ದಾರಿ’ ಕವನ ಸಂಕಲನದಲ್ಲಿ ಕಂಡು ಬರುವ ಒಂದು ಪದ್ಯ. ಇದು ಒಂದು ಲೇವಡಿ ಅಥವಾ ಅಣಕು ಕವನ ಎಂದು ಕರೆಯಬಹುದು. ಹೆಸರನ್ನು ಎಲ್ಲೂ ನಮೂದಿಸದಿದ್ದರೂ, ಇದು ಮೂಲತಃ ಕೆ.ಎಸ್.ನ ಅವರ ಕುರಿತೇ ಬರೆದದ್ದು ಎಂಬುದು ಸಾಹಿತ್ಯ ಲೋಕದ ಅಂಬೋಣ. ಕೆ.ಎಸ್.ನ ಅವರ ಪೂರ್ವಾರ್ಧ ಸಾಹಿತ್ಯ ಭಾಗಶಃ ನವೋದಯದ ರಸಧಾರೆಯಾಗಿದ್ದು, ಭಾವನೆಗಳ ಹೂಗುಚ್ಛವಾಗಿದೆ. ಇದು ಅಡಿಗರ ಪ್ರಕಾರ ಒಂದು ಕಾವ್ಯದ ಪ್ರಾಕಾರವೇ ಅಲ್ಲ. ಅಡಿಗರಿಗೆ ಕಾವ್ಯ ಎಂದರೆ ಅತ್ಯಂತ ಗಂಭೀರ, ಚಿಂತನೆಗೆ ಒಳಪಡಿಸುವ, ವಾಸ್ತವಿಕತೆಯ ನಿಶಾನು. ಕೆ.ಎಸ್.ನ ಅವರ ಕಾವ್ಯವನ್ನು ಅಡಿಗರು ಎಷ್ಟು ತೀವ್ರವಾಗಿ ದೂಷಿಸಿದ್ದಾರೆ ಎಂಬುದರ ಕೆಲವು ತುಣುಕುಗಳು ಇಲ್ಲಿದೆ, ‘ಪುಷ್ಪ ಕವಿಯ ಪರಾಕು’ವಿನಿಂದ:
…….
ಅವರಿವರದೇನು ಬರೆದಾರು, ಬಿಡು; ಕೊರೆದಾರು
ಕರುಣೆಯಿಲ್ಲದೆ ರಸಿಕರೆದೆಯ
ಕೊರತೆಯೇ ಕವಿಗಳಿಗೆ? ಇಹರಿಲ್ಲಿ ನೂರಾರು
ಕಲ್ಲು ಮುಲ್ಲುಗಳಂತೆ, ಹುಲ್ಲು ಜಲ್ಲುಗಳಂತೆ;
ಮರೆತುಬಿಡಿ ಆ ಅಸುಂದರದ ಚಿಂತೆ.
ಮೂಲೋಕದೊಳಗೆಲ್ಲ ಏಕಮೇವಾದ್ವಿತೀಯ,
ಇಲ್ಲಿ ನೋಡಿರಿ, ಇಲ್ಲಿ, ಪುಷ್ಪಕವಿಯ!
…..
ಎಲ್ಲವನು ಹೂವಾಗಿ ಕರುವಿಡುವ ರೂವಾರಿ!
ಸುಗ್ಗಿ ಬೆಳುದಿಂಗಳ ಸರೋವರದ ತೀರದಲಿ
ಶೃಂಗಾರ ರಸವುಲಿವ ಕಾಮ ನಾನು;
ಬೆಪ್ಪುಗಳು ಬಲ್ಲರೇ ಈ ರಸವಿಲಾಸವನು?
……
ಅಲ್ಲೊಬ್ಬನಿದ್ದ ಕೀಟ್ಸ್; ಇಲ್ಲೊಬ್ಬ ಪುಷ್ಪಕವಿ!
ಕಾವ್ಯ ಸಾಮ್ರಾಜ್ಯಕೆಲ್ಲ
ಈ ಎರಡು ದಿಗ್ದಂತಿಗಳ ಹೆಗಲೆ ಆಧಾರ;
ಕೀಟ್ಸೋ ಮೃತ; ಅವನೇನು ಹೊರಲು ಬಲ್ಲ?
ಎಲ್ಲ ಭಾರವು ಈಗ ನನ್ನ ಮೇಲೇ ಪೂರ್ತಿ,
ಅಂತೆಯೇ ಎಲ್ಲ ಕೀರ್ತಿ.
…..
ಬಂದನಿಗೋ ಪುಷ್ಪಕವಿ,
ಹೇಳಿ ಪರಾಕು;…
ಕನ್ನಡಕಿನ್ನೇನು ಬೇಕು!
ಭಾರತಕೂ ಈ ವಿಶ್ವಕು
ಸಕಲ ಚರಾಚರಕೂ
ಇವನೊಬ್ಬನೇ ಸಾಕು…
………
ಈ ಸಾಲುಗಳನ್ನು ಗಮನಿಸಿ ನೋಡಿ. ಬಿಟ್ವೀನ್ ದಿ ಲೈನ್ಸ್ ಕಂಡು ಬರುವುದು; ಅಪಹಾಸ್ಯ, ಸಿಟ್ಟು, ಅಸೂಯೆ, ಅಸಹಾಯಕತೆ, ಮೇಲರಿಮೆ, ಹುಡುಕಾಟ, ಹೊಸತನ್ನು ಸೆಳೆವ ತುಡಿತ, ಗಾಂಭೀರ್ಯತೆಗೆ ಒತ್ತು ಕೊಡುವ ಅವರ ವೈಖರಿ, ಹೀಗೆ ಒಂದಲ್ಲಾ ಎರಡಲ್ಲಾ ಅನೇಕಾನೇಕ ಭಾವನೆಗಳ ಒಳತೋಟಿ! ಒಂದು ಕವನ ಎಷ್ಟೆಲ್ಲಾ ಭಾವಸ್ಪುರಣ ಮಾಡಬಹುದಲ್ಲವೇ! ಅದಕ್ಕೆ ಗದ್ಯಕ್ಕಿಂತ ಪದ್ಯ ಪವರ್ಫುಲ್ ಅನ್ನುವುದು.

ಇಲ್ಲಿ ನಮಗೆ ಕಾಣುವ ಮನೋವಿಜ್ಞಾನದ ಅಂಶವೆಂದರೆ, ಮನುಷ್ಯ ಸಹಜವಾದ ಅಸಹಾಯಕತೆ, ಅಸೂಯೆಗಳ ಛಾಯೆ. ಅತ್ಯಂತ ಶ್ರಮ ಪಟ್ಟು, ಹಗಲು ರಾತ್ರಿ ಕಾವ್ಯವೇ ಜೀವನ ಎಂದು ಭಾವಿಸಿ, ಅತ್ಯಂತ ಗಂಭೀರವಾಗಿ ಕಾವ್ಯ ರಚಿಸುತ್ತಿದ್ದ ಅಡಿಗರಿಗೆ ಸಿಗದ ಹೆಸರು, ಖ್ಯಾತಿ, ಜನಪ್ರೀತಿ ಕೆ.ಎಸ್.ನ ಅವರಿಗೆ ದೊರೆತದ್ದೂ, ಅದೂ ಅತ್ಯಂತ ಕಡಿಮೆ ಸಮಯದಲ್ಲೇ ನರಸಿಂಹಸ್ವಾಮಿಯವರು ಪ್ರಖ್ಯಾತರಾದದ್ದು ಎಲ್ಲೋ ಅತ್ಯಂತ ತೀವ್ರವಾಗಿ ಅಡಿಗರಿಗೆ ನಾಟಿದಂತೆ ತೋರುತ್ತದೆ. ಪುಷ್ಪ ಕವಿಯ ಪರಾಕು ಕವನದ ಸಾಲುಗಳಲ್ಲಿ ಕಂಡು ಬರುವ ಉದ್ವೇಗ, ಸಿಟ್ಟುಗಳು ಈ ಮಾತಿಗೆ ನಿದರ್ಶನವಾಗಿ ನಿಲ್ಲುತ್ತವೆ. ಆದರೆ ಇದು ಮನುಷ್ಯ ಸಹಜ ಗುಣ. ಅದಕ್ಕೇ ನಾನು ಹೇಳಿದ್ದು ಮನೋವಿಜ್ಞಾನದ ಅಂಶ ಎಂದು. ಆದರೆ ಈ ಮತ್ಸರ ಮತ್ತೊಂದುಗಳಿಗೆ ಮೀರಿ ಅಡಿಗರು ಬೆಳೆದದ್ದು, ಆ ಉನ್ನತ ಬೆಳವಣಿಗೆಗಾಗಿ ಅವರು ಹಂಬಲಿಸಿದ್ದು, ಅದಕ್ಕೆ ಸರಿಯಾಗಿ ಅವರ ಆಧ್ಯಾತ್ಮಿಕ ಮತ್ತು ಬೌದ್ಧಿಕ ಸಾಮರ್ಥ್ಯಗಳು ಸಾತ್ ಕೊಟ್ಟಿದ್ದು ನಮ್ಮ ಗ್ರಹಿಕೆಗೆ ನಿಲುಕಬೇಕಾದ ಅಂಶ.
ಅಡಿಗರ “ನಡೆದು ಬಂದ ದಾರಿ”ಯ ಈ ಮುನ್ನುಡಿಯ ಸಾಲುಗಳನ್ನು ಗಮನಿಸಿ:
“……….ನಮ್ಮ ಆಧುನಿಕ ಕನ್ನಡಕಾವ್ಯ ಆ ಸಂಪ್ರದಾಯದಲ್ಲಿ ತಾನು ಮಾಡಬಹುದಾದಷ್ಟು ಕೆಲಸವನ್ನು ಮಾಡಿ ಮುಗಿಸಿದೆ. ಆ ಸಂಪ್ರದಾಯದ ಸತ್ವ ಈಗ ತೀರಿದೆ, ಅದಕ್ಕೆ ಅವನತಿ ಬಂದಿದೆ. ಅದರ ದೋಷಗಲೆಲ್ಲ ಈಗ ಎದ್ದು ಕಾಣಿಸುತ್ತಿವೆ. ಈಗ ಶಬ್ದಗಳು ಅರ್ಥದ ಸ್ಥಾನವನ್ನು ಆಕ್ರಮಿಸುತ್ತಿವೆ. ಪ್ರತಿಯೊಂದು ಭಾವವೂ ಅನುಭವವೂ ಅತಿ ಸರಳವಾಗಿ ಸತ್ಯದಿಂದ ದೂರ ದೂರ ಹೋಗುತ್ತಿದೆ. ಇಂಥ ಕಾಲದಲ್ಲಿ ಕಾವ್ಯಕ್ಕೆ ಮತ್ತೆ ವಾಸ್ತವದ ರಕ್ತದಾನ ನಡೆಯಬೇಕಿದೆ. ಕಾವ್ಯದಲ್ಲಿ ಮತ್ತೆ ಮಣ್ಣಿನ ವಾಸನೆ ಹೊಡೆಯಬೇಕು. ……….”
ಅಡಿಗರ ಪ್ರಕಾರ ಕಾವ್ಯ ನಿರಂತರ ಪರಿಶ್ರಮದಿಂದ, ತಾಳ್ಮೆಯ ಕಾವೊಡೆವ ಮರಿ. ಯಾರನ್ನೋ ಮೆಚ್ಚಿಸಲು ಬರೆದರೆ ಅದು ಕವನವಲ್ಲ. ಅಡಿಗರಿಗೆ ಕಾವ್ಯ ತಮ್ಮ ಅಂತರನುಭವದ ಪ್ರತಿಬಿಂಬ. ಎಲ್ಲೋ ಓದಿದ್ದು, ಒಬ್ಬ ವ್ಯಕ್ತಿ ಆಕಾಶದಷ್ಟು ಯೋಚಿಸಿ ಒಂದು ಪುಟ್ಟ ಮೋಡವನ್ನಷ್ಟೇ ಹೇಳುತ್ತಾನಂತೆ. ಹಾಗೆ ಅನಿಸಿದ್ದಕ್ಕೂ, ಹೇಳುವುದಕ್ಕೂ ಇರುವ ಅಂತರವನ್ನು ತೊಡೆದು ಹಾಕಿ ಎರಡೂ ಒಂದೇ ಆಗುವಷ್ಟು ಹತ್ತಿರದ ರೇಖೆಯಲ್ಲಿ ಕಾವ್ಯ ಮೂಡಬೇಕಾದ ಜರೂರನ್ನು ಕಂಡದ್ದು ಅಡಿಗರು. ಮತ್ತೆ ಕವನರಾಶಿಗಳ ಕಿರೀಟ ಹೊತ್ತು ‘ನಾನು ಕವಿ’ ಎನಿಸಿಕೊಳ್ಳುವವರು ಅಡಿಗರ ಪರಿಧಿಯಿಂದ ದೂರ! ಅಡಿಗರ ದೃಷ್ಟಿಯಲ್ಲಿ ಗಂಭೀರವಾದ, ಚಿಂತನೆಗೆ ಹಚ್ಚುವಂತಹ, ಧೀಮಂತ ಕವನ ಒಂದೇ ಬರೆದಿದ್ದರೆ ಸಾಕು ಆತ ನಿಜಕ್ಕೂ ಕವಿ.
ಕಾವ್ಯವನ್ನು ಜೀವನವಾಗಿಸಿದ ಅಡಿಗರು ಬರಿಯ ಬರವಣಿಗೆಯಾಗಿ ಕಾವ್ಯವನ್ನು ಎಂದೂ ಕಂಡಿಲ್ಲ. ಅಷ್ಟೇ ಅಲ್ಲದೆ ಸಾಹಿತ್ಯ ಲೋಕದ ಇತಿಹಾಸ, ವರ್ತಮಾನಗಳಿಗಿಂತ ಭವಿಷ್ಯದ ಬಗ್ಗೆ ಅತ್ಯಂತ ಕಾಳಜಿವಹಿಸಿ, ಕಾವ್ಯ ಭವಿಷ್ಯವನ್ನು ರೂಪಿಸಲು ಮುಂದಾದ ಹರಿಕಾರರು ಅಡಿಗರು. ಇಂಗ್ಲಿಷ್ ಸಾಹಿತ್ಯ ಮೂಲದ ಈಲಿಯಟ್ ಮುಂತಾದವರಿಂದ ಗಾಢ ಪರಿಣಾಮದಿಂದ ಸಾಹಿತ್ಯ ಪ್ರಾಕಾರ ಬದಲಾಗಬೇಕು, ಅಂತರ್ ಧ್ಯಾನವನ್ನು ಕಾವ್ಯವಾಗಿಸಬೇಕು ಎಂಬ ತುಡಿತ ಅಷ್ಟೇ ಅಲ್ಲದೆ ಅದನ್ನು ಅಂದಿನ ಯುವ ಕವಿಗಳಿಗೆ, ಸಾಹಿತಿಗಳಿಗೆ ಸಾರಿದರು. ಸಾಹಿತ್ಯದ ಬದಲಾಗಲಿರುವ ಸಂಸ್ಕೃತಿಯನ್ನು ಮುಂದಾಳತ್ವ ವಹಿಸಿ ಎಲ್ಲರ ಗಮನಕ್ಕೂ ತಂದರು.
ತಮ್ಮ ಕಾವ್ಯ ಜೀವನದ ಪ್ರಾರಂಭ ನವೋದಯವಾಗಿದ್ದು, ಅನೇಕ ನವೋದಯ ಸಾಹಿತ್ಯ ರಚಿಸಿದರು. ವಿದೇಶೀ ಸಾಹಿತ್ಯ ಪ್ರಭಾವ ಮತ್ತು ದೇಶೀ ಸಾಮಾಜಿಕ ಬದಲಾವಣೆಗಳ ಆಗು ಹೋಗುಗಳ ಮಿಳಿತದ ಜೊತೆಗೆ ಅವರದ್ದೇ ಆದ ಒಂದು ಪ್ರಯತ್ನಾ ಪೂರ್ವಕ ಪ್ರಜ್ಞೆ ಅವರನ್ನು ನವ್ಯದತ್ತ ಸಲೀಸಾಗಿ ರೂಪಾಂತರಿಸಿತು. ಈ ಬದಲಾವಣೆಯನ್ನು ಗಮನಿಸಿ ತೀವ್ರವಾಗಿ ಪ್ರಚೋದಿಸಿದ ಅಡಿಗರು ನವ್ಯದ ಹರಿಕಾರರಲ್ಲಿ ಅತ್ಯಂತ ಪ್ರಭಾವೀ ಕವಿಯಾಗಿ ಹೆಸರಾದರು.
ಹೀಗೆ ನವ್ಯ, ನವೋದಯ ಕಾವ್ಯಗಳು ಇವುಗಳೊಂದಿಗೆ ಹದವಾಗಿ ಬೆರೆತ ಅವರ ಆಧ್ಯಾತ್ಮ ಚಿಂತನೆಗಳು ಸೇರಿ ಅಡಿಗರೆಂಬ ಉತ್ಕೃಷ್ಟ ಕವಿಯನ್ನು ರೂಪಿಸಿತ್ತು. ಇದರ ಜೊತೆಗೆ, ಅಡಿಗರು ಒಬ್ಬ ಬಂಡಾಯ ಸಾಹಿತ್ಯದ ಧೋರಣೆಗಳನ್ನೂ ಸಶಕ್ತವಾಗಿ ಕಾವ್ಯಾಭಿವಂದಿಸಿದರು ಎಂದರೆ ತಪ್ಪಾಗಲಾರದೇನೋ ಎಂಬ ಪ್ರಶ್ನೆಯೂ ಮೂಡಿತು! ಕಾವ್ಯ ಸಾಹಿತ್ಯದ ಸ್ಥಿತಿ ಗತಿ ಬದಲಾಗಬೇಕು ಎಂಬುದರ ಜೊತೆಗೆ ಅಡಿಗರ ತುಡಿತ ಇದ್ದುದು, ಕಾವ್ಯ ಒಂದು ಸಮಾಜಕ್ಕೆ ತಕ್ಕಂತೆ ತನ್ನ ಭಾವಾಭಿನಯವನ್ನು ತೋರಬೇಕು ಎಂಬುದು. ಕಾವ್ಯ ಒಂದು ಸಮೂಹದ ಧ್ವನಿಯಾಗಬೇಕು ಎಂದು ಅಡಿಗರು ಬಗೆದಿದ್ದರು. ವ್ಯಕ್ತಿ ಸ್ವಾತಂತ್ರ್ಯ ಅಡಿಗರ ಕಾವ್ಯದ ಜೀವಾಳ. ಈ ಅಂಶದಲ್ಲಿ ಅಡಿಗರು ಒಬ್ಬ ಬಂಡಾಯ ಕವಿಯಾಗಿ ಕಾಣುತ್ತಾರೆ. ಈ ಕೆಳಕಂಡ ಕೆಲವು ಸಾಲುಗಳನ್ನು ಗಮನಿಸಿ:
….
ಅಳಲ ಕೆಸರೊಳು ಹುಗಿದ ಹಳೆಬಾಳ ಕೊಳೆಹೆಣದ
ತಲೆಯಿಂದ ಚಿಮ್ಮುವೀ ಬೆಳಕಿದೇನು?
ಬಳಲಿ ಬೆಂಡಾದೊಡಲ ಮರುಭೂಮಿಯೊಳು ಜೀವ ಕಳೆಯ
ಕರುವಿಡುವ ರಸದೊರತೆಯೇನು?
……
ಜಾತಿ ಮತಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವೆನೆ ಕೋಟೆಕೊತ್ತಲಗಳು;
ರೂಢಿರಾಕ್ಷಸನರಸುಗೈಯುವನು, ತೊಳ್ತಟ್ಟಿ
ತೊಡೆತಟ್ಟಿ ಕರೆಯುವನು ಸಂಗ್ರಾಮಕೆ!
ಕಟ್ಟುವೆವು ನಾವು ಹೊಸ ನಾಡೊಂದನು – ರಸದ ಬೀಡೊಂದನು
……
ನಾವೆಲ್ಲರು ಒಂದೆ ಜಾತಿ, ಒಂದೆ ಮತ, ಒಂದೆ ಕುಲ;
ನಾವು ಮನುಜರು
…….
ಹೀಗೆ ಅಡಿಗರದ್ದೇ ಕಾವ್ಯ ಜೀವನ ಅನೇಕ ಸಾಹಿತ್ಯ ಪ್ರಾಕಾರ ಪರ್ಯಟನೆಗಳನ್ನು ಕಂಡು ಒಂದು ಸಮಗ್ರತೆಯನ್ನು ಕಂಡಿತ್ತು ಎಂದು ನನ್ನ ಅನಿಸಿಕೆ. ಇಷ್ಟೆಲ್ಲಾ ಪ್ರಜ್ಞಾ ಪೂರ್ವಕ ಬೆಳವಣಿಗೆಯೊಂದಿಗೆ, ಸಾಹಿತ್ಯ ಕೃಷಿಯೊಂದಿಗೆ ಕನ್ನಡ ಸಾಹಿತ್ಯಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪ್ರಚೋದಿಸಿ, ಅದರ ಹೊಸ ಆಯಾಮಗಳನ್ನು ರೂಪಿಸಿರುವಲ್ಲಿ ಅಡಿಗರು ಮುಖ್ಯರಾಗುತ್ತಾರೆ. ಇಂತಹ ಒಬ್ಬ ಕವಿಗೆ ಸಾಕಷ್ಟು (ದೊರಕಿದ್ದಕ್ಕೂ ಹೆಚ್ಚು) ಪ್ರಾಶಸ್ತ್ಯ ಸಿಗಬೇಕಾದ್ದು ಹೌದಲ್ಲವೇ…. ಇಷ್ಟಕ್ಕೂ ಅಡಿಗರಿಗೆ ಜ್ಞಾನಪೀಠ ಏಕೆ ಬರಲಿಲ್ಲ ಎಂಬ ಒಂದು ಪ್ರಶ್ನೆಯೂ ಮೂಡಿತು!
 

‍ಲೇಖಕರು avadhi

July 19, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

  1. jagadishkoppa

    ಕುವೆಂಪು ಕವಿಯೆಂದರೆ, ನಾನು ಕವಿಯಲ್ಲ, ಎಂಬ ಮಾತುಗಳು ಇದೇ ಅಡಿಗರ ಬಾಯಿಂದ ಬಂದಿದ್ದವು. ಒಂದು ಸಮಯದಲ್ಲಿ “ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಎಂದು ಆರಾಧಿಸಿದ್ದ ಲಂಕೇಶರು, ನಂತರದ ದಿನಗಳಲ್ಲಿ ( ಅಡಿಗರು ಜನಸಂಘದಿಂದ(ಈಗಿನ ಬಿ.ಜೆ.ಪಿ.) ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದಾಗ)ಅಸಹನೆಗೊಂಡು, ಒಂದು ಜನಾಂಗದ ಕಣ್ಣು ಮಚ್ಚಿಸಿದ ಕವಿ ಎಂದು ಜರಿದಿದ್ದರು. ಅಡಿಗರಲ್ಲಿ ತಮ್ಮ ಸಮಕಾಲೀನ ಕವಿಗಳ ಬಗ್ಗೆ ಎಷ್ಟೇ ಅಸಹನೆ ಇದ್ದರೂ ಕೂಡ, ವೈಯಕ್ತಿಕ ನೆಲೆಯಲ್ಲಿ ಮನುಷ್ಯನನ್ನು ತುಂಬಾ ಪ್ರೀತಿಸುವ ಗುಣಗಳಿದ್ದವು. ಅವರ ಕೊನೆಯ ದಿನಗಳಲ್ಲಿ ಅವರನ್ನು ನೋಡಿದಾಗ, ಅವರ ಮಾತುಗಳನ್ನು ಕೇಳಿದಾಗ ನನಗೆ ಅವರ ಬಗ್ಗೆ ಇದ್ದ ಅಸಹನೆ,ಕರಗಿ ಹೋಯಿತು. ಅಡಿಗರು ಎಷ್ಟೇ ದೊಡ್ಡ ಕವಿಯಾಗಿರಲಿ, ನನಗೆ ಮಾತ್ರ ಅವರಿಗಿಂತ, ಕುವೆಂಪು, ಬೇಂದ್ರೆ,ಪು.ತಿ.ನ. ಕೆ.ಎಸ್.ನ. ಸು.ರ.ಎಕ್ಕುಂಡಿ. ನಿಸಾರ್ ಅಹಮದ್, ಕೆ.ವಿ.ತಿರುಮಲೇಶ್,ಇವರ ಕವಿತೆಗಳು ಇವೊತ್ತಿಗೂ ಇಷ್ಟ. ಇವರೆಲ್ಲರ ಕೆಲವು ಕವಿತೆಗಳು, ಮನಸ್ಸಿನಲ್ಲಿ ಮಾತ್ರವಲ್ಲ, ನನ್ನ ನಾಲಿಗೆಯಲ್ಲೂ ಕೂಡ ಹಾಗೆ ಉಳಿದುಕೊಂಡಿವೆ. ಮಾಸ್ತಿಯವರ “ಮದನಲಿಂಗನ ಕಣಿವೆ, ಕುವೆಂಪು ಅವರ “ಕರಿಸಿದ್ಧ” ಯಕ್ಕುಂಡಿಯವರ “ರೊಟ್ಟಿ ಮತ್ತು ಯೋಧ” ಎಂಬ ಕಥನ ಕಾವ್ಯಗಳು ಸದಾ ನನ್ನಲ್ಲಿ ಹಸಿರಾಗಿವೆ.

    ಪ್ರತಿಕ್ರಿಯೆ
  2. Amaresh

    “ನನಗೆ ಅವರ ಬಗ್ಗೆ ಇದ್ದ ಅಸಹನೆ,ಕರಗಿ ಹೋಯಿತು”
    Koppaji, you are great Sir!

    ಪ್ರತಿಕ್ರಿಯೆ
  3. Tejaswini Hegde

    ಸಂಯುಕ್ತ… ತುಂಬಾ ಆಳವಾಗಿ ವಿಶ್ಲೇಷಿಸಿದ್ದೀರಾ… ಮೆಚ್ಚುಗೆಯಾಯಿತು.

    ಪ್ರತಿಕ್ರಿಯೆ
  4. Swarna

    ಬರಹ ಚೆನ್ನಾಗಿದೆ.
    ಇತ್ತೀಚಿಗಷ್ಟೇ ಪ್ರಜಾವಾಣಿಯಲ್ಲಿ ಇದೇ ಘಟನೆ ಮತ್ತು ಕವಿತೆಯ ಉಲ್ಲೇಖವಾಗಿತ್ತು(ಬರೆದವರು ಬಹುಶಃ ಕಥೆಗಾರ ದಿವಾಕರ್ ಅವರು).
    ಅವರು ಒಮ್ಮೆ ಸ್ವತಃ ಅಡಿಗರನ್ನೆ ಕೇಳಿದರಂತೆ ಈ ಪದ್ಯದ ಬಗ್ಗೆ , ಅದಕ್ಕೆ ಅಡಿಗರು
    ಪದ್ಯದ ಹಿಂದಿನ ಘಟನೆಯನ್ನು ವಿವರಿಸುತ್ತಾ : ನಾನೂ ಕೆ.ಎಸ್.ನ ಅಭಿಮಾನಿ ಒಮ್ಮೆ ನಾನು ಮತ್ತು ಕೆ.ಎಸ್.ನ ದಾರಿಯಲ್ಲಿ
    ಹೋಗುವಾಗ ಅಭಿಮಾನಿಯೊಬ್ಬ ಬಂದು ಕೆ.ಎಸ್.ನ ಅವರ ಕವಿತೆಗಳನ್ನು ಬಹುವಾಗಿ
    ಮೆಚ್ಚಿಕೊಂಡ ಆದರೆ ಕವಿ ಅವನಿಗೆ ಅಷ್ಟೇನೂ ಚೆನ್ನಾಗಿ ಪ್ರತಿಕ್ರಿಯಿಸಲಿಲ್ಲ, ಅದನ್ನು ಕಂಡು ನನಗಾದ ಕಸಿವಿಸಿ
    ಈ ಕವನದಲ್ಲಿ ದಾಖಲಾಗಿದೆ ಎಂದರಂತೆ.(ಇದು ಲೇಖನ ನನಗೆ ನೆನಪಿದ್ದಂತೆ ಮಾತ್ರ,ಆಸಕ್ತರು ಪ್ರಜಾವಾಣಿಯ ಸಾಹಿತ್ಯಪುರವಣಿಯನ್ನು ನೋಡಬಹುದು)
    ಅಡಿಗರಿಗೆ ಜ್ಞಾನಪೀಠ ಬರಬೇಕಿತ್ತು ಎಂಬ ಅಭಿಪ್ರಾಯ ಡಾ.ಆರ್.ಗಣೇಶ್ ಸೇರಿದಂತೆ
    ಎಲ್ಲ ವಿದ್ವಾಂಸರದ್ದೂ ಮತ್ತು ರಸಿಕರದ್ದೂ ಆಗಿದೆ

    ಪ್ರತಿಕ್ರಿಯೆ
    • samyuktha

      aa lekhanada bagge hanchikondaddakke dhanyavada Swarna. 🙂 Prakatavaada dinanka nenapiddare dayavittu tilisi. Khandita odabekaaddu!

      ಪ್ರತಿಕ್ರಿಯೆ
  5. Kiran

    Thank you, Samyuktha, for elaborating on the tussle and more so, for a controlled criticism!
    It is said that the frustration of a genius is never interpreted properly by the society, largely because the society does not have enough intellect to analyse the genius. Probably, Dr GK Adiga was a victim of this phenomenon.
    However, how the catharsis happens sheds lot of light on the persona of the genius.
    In this context, you may consider quoting Adiga’s approach to other big-wigs of his time. The poem “ARTHAVAAGUVA HAAGE BAREYA BEKU” was directed against Masti. (But, I dont think that really raised any big debate) How Adiga’s poem PRARTHANE was taken in very serious offense by DVG and a committee was put up to condemn the use of words (Also, the cold reaction of Adiga to all the drama) etc.
    The pseudo-intellectuals who surrounded Adiga probably did because they felt that Adiga was fighting their surrogate battle against the big-wigs of that time and not probably because they were drawn to his amazing intellect. When they deserted him, Adiga felt disillusioned. It was probably this identity crisis that may have forced him to contest elections without realising that none of the political outfits were capable of understanding his vision.
    It may all summate to the frustrations of a marvel genius, who was probably born ahead of his time!

    ಪ್ರತಿಕ್ರಿಯೆ
  6. Bharath

    ಕವಿ ಮನವನರಿತು ಅವನ ಕವಿತೆಗೆ, ತೊಳಲಾಟಕ್ಕೆ ಸ್ಪಂದಿಸಿ ಬರೆದಿದೀರಿ. ಅಂಕಣದಲ್ಲಿ ನಿಮ್ಮ ಮನಸ್ಸು ಕಾಣುತ್ತೆ.
    ಮತ್ತೆ ಮತ್ತೆ ಅಡಿಗರು ಹೊಸಮನಗಳನ್ನು ಗೆಲ್ಲುವ ಮತ್ತು ಅದರಲ್ಲಿ ರಾರಾಜಿಸುವ ಕವಿ ಎಂದು ತೋರಿಸುತ್ತಾನೆ.
    ನನ್ನ ಓದಿನ ಮಿತಿಯಲ್ಲಿ ಅಡಿಗರ ಪದ / ಭಾವ ರಭಸ, ಕುಮಾರವ್ಯಾಸನಲ್ಲಿ ಬಿಟ್ಟರೆ ಬೇರೆಲ್ಲೂ ಕಾಣೋದಿಲ್ಲ.
    ಕುವೆಂಪುರವರ ಒಂದು ಕವಿತೆ ಇದೇ ತರಹದ್ದು ಇದೆ ನೆನಪಿಗೆ ಬರುತ್ತಿಲ್ಲ ….. “ನಾನೆರುವ ಎತ್ತರಕ್ಕೆ ನಿ ಏರಬಲ್ಲೆಯ …. ನಾ ಹಾರುವ …… “

    ಪ್ರತಿಕ್ರಿಯೆ
  7. ವಿಜಯ್

    ಚೆನ್ನಾಗಿದೆ ಲೇಖನ :).
    ಗೋಪಾಲಕೃಷ್ಣ ಅಡಿಗರ ಕವಿತೆಗಳನ್ನು ವೈದಿಕ ಕಲ್ಪನೆ ಮತ್ತು ಆಚರಣೆಯ ವಿಸ್ತರಣೆಯಂತೆ ಎಂದು ಡಿ ಆರ್ ನಾಗರಾಜ್ ವಾದಿಸಿದರಂತೆ. ಈ ವಿಚಾರವಾಗಿ ಅವರಿಗೂ ಅನಂತಮೂರ್ತಿಯವರಿಗೂ ಜಗಳವಾಯಿತು. ಕೊನೆಗೆ ಅನಂತಮೂರ್ತಿಯವರು ನಿನ್ನ ಜೊತೆ ಮಾತಾಡೋಕೆ ಇಷ್ಟ ಇಲ್ಲ ಎಂದು ಹೊರಟು ಹೋದರಂತೆ ಎಂದು ಒಮ್ಮೆ ಒಂದು ಲೇಖನದಲ್ಲಿ ಜೋಗಿ (ನೆನಪು ಸರಿಯಾಗಿದೆ ಎಂದುಕೊಳ್ಳುತ್ತೇನೆ) ಯವರು ಬರೆದ ನೆನಪು. ನಂತರ ಒಂದು ಕಡೆ ಅನನ್ಯಾ ವಾಜಪೇಯಿ ಮತ್ತೀತರರು ಡಿ.ಆರ್ ನಾಗರಾಜ್ ಅವರ ಬಗ್ಗೆ ಬರೆದ ಲೇಖನ ಓದಿದಾಗ ಈ ಡಿ.ಆರ್ ನಾಗರಾಜ್ ಎಂತಹ ಅಸಮಾನ್ಯ ಮತ್ತು ಲಂಕೇಶರಂತಹ ಚಿಲ್ಲರೆ ರಾಜಕೀಯಕ್ಕೆ ಇಳಿಯುವವರಾಗಿರಲಿಲ್ಲ ಎಂದನಿಸಿತು (ನನ್ನ ಗ್ರಹಿಕೆ). ಲಂಕೇಶ ವೈಯುಕ್ತಿಕವಾಗಿ ಎಷ್ಟೇ ಪ್ರತಿಭಾವಂತರಿದ್ದರೂ, ಅವರಿಗೆ ಮತ್ತು ಅವರ ಗ್ಯಾಂಗಿಗೆ, ವಂಧಿ ಮಾಗಧರಿಗೆ ತಮ್ಮದೇ ಆದ ಜಾತಿ ಆಧಾರಿತ ಮುಂತಾದ ಚಿಲ್ಲರೆ ಅಜೆಂಡಾಗಳಿದ್ದವು.. ಬೇಕೆಂದಾಗ ಹೊಗಳಿ, ಬಳಸಿ.. ಬೇಡವಾದಾಗ ತೆಗಳಿ, ಬೀಸಾಡುವಯುವ ಗುಣವಿತ್ತು. ಅಡಿಗರು,ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ ಇವರೆಲ್ಲ ಆಯಾ ಕಾಲದಲ್ಲಿ ಲಂಕೇಶರ ಶಿಕಾರಿಗಳೆ.
    ಕೆ.ಎಸ್ ನರಸಿಂಹಮೂರ್ತಿಯವರಿಗೆ ಅಡಿಗರು ಪುಷ್ಪಕವಿ ಎಂದು ಛೇಡಿಸಿದರೆ, ರಾಮಚಂದ್ರ ಶರ್ಮರಿಗೆ ಕೆ.ಎಸ್.ನ, ನಿಸಾರ ಅಹ್ಮದ, ಲಕ್ಷ್ಮಿನಾರಾಯಣ್ ಭಟ್ಠರು ಮುಂತಾದವರೆಲ್ಲ ಕ್ಯಾಸೆಟ್ ಕವಿಗಳಾಗಿದ್ದರು. ಕೊನೆಗೆ ಅಡಿಗರ ಕವಿತೆ ‘ಯಾವ ಮೋಹನ ಮುರಳಿ ಕರೆಯಿತೊ’ ಸಾಮಾನ್ಯರ ಬಾಯಲ್ಲಿ ನಲಿಯುವಂತಾದ್ದದ್ದು..ಕ್ಯಾಸೆಟ ಮತ್ತು ಸಿನೇಮಾಗಳಲ್ಲಿ ಬಳಸಲ್ಪಟ್ಟ ನಂತರವೆ. ಬಹುಶ: ಕವಿತೆಯೆಂಬುದು ಒಂದೇ ಓದಿಗೆ ಅರ್ಥವಾಗುವಷ್ಟು ಸರಳವಾಗಿರಬಾದು,ಆಳವಾಗಿ ಇಳಿದರೆ ಮಾತ್ರ ಅರಿಯಲು ಸಾಧ್ಯವಾಗಬೇಕು, ಒಂದೊಂದು ಓದಿಗೂ ವಿವಿಧ ಅರ್ಥ ಸ್ಫುರಿಸಬೇಕು ಎಂಬುದು (ಮಾಡರ್ನ ಆರ್ಟನಂತೆ) ಅಡಿಗ, ರಾಮಚಂದ್ರ ಶರ್ಮ ಮುಂತಾದವರ ಅನಿಸಿಕೆಯಾಗಿತ್ತೇನೊ. ಬೇಂದ್ರೆ ಮತ್ತು ಶಂ.ಭಾ. ಜೋಶಿಯವರ ಜಗಳ, ನಿರಂಜನ ಮತ್ತು ಅ.ನ.ಕೃ ಜಗಳ..ಸಾಹಿತ್ಯ ಲೋಕದ ಜಗಳಗಳೇ ವಿಚಿತ್ರ..ಇವನ್ನು ಪ್ರತಿಭಾವಂತರ ತಿಕ್ಕಲುತನಗಳು ಎನ್ನಬಹುದೇನೊ 🙂

    ಪ್ರತಿಕ್ರಿಯೆ
  8. ಶ್ರೀವತ್ಸ ಜೋಶಿ

    ಗೋಪಾಲಕೃಷ್ಣ ಅಡಿಗರನ್ನೂ ಅವರ ’ಪುಷ್ಪಕವಿಯ ಪರಾಕು’ ಕವಿತೆಯನ್ನೂ ಬಹಳ ಸೊಗಸಾಗಿ ವಿಶ್ಲೇಷಿಸಿದ ಸಂಯುಕ್ತಾ ಅವರಿಗೆ ಧನ್ಯವಾದ ಮತ್ತು ಅಭಿನಂದನೆಗಳು. ಸಂಯುಕ್ತಾ ಅವರು ಹೇಳಿರುವಂತೆ ಈ ಕವಿತೆಯಲ್ಲಿ (ಅಥವಾ ಅದನ್ನು ಬರೆದ ಪ್ರಕ್ರಿಯೆಯಲ್ಲಿ/ಚಿಂತನೆಯಲ್ಲಿ) ಮನೋವೈಜ್ಞಾನದ ಅಂಶಗಳನ್ನು ಗುರುತಿಸಬಹುದು. ಅಪಹಾಸ್ಯ, ಸಿಟ್ಟು, ಅಸೂಯೆ, ಅಸಹಾಯಕತೆ, ಮೇಲರಿಮೆ, ಹುಡುಕಾಟ, ಹೊಸತನ್ನು ಸೆಳೆವ ತುಡಿತ, ಗಾಂಭೀರ್ಯಕ್ಕೆ ಒತ್ತು ಕೊಡುವ ವೈಖರಿ… ಮುಂತಾಗಿ ಅನೇಕ ಭಾವನೆಗಳ ಒಳತೋಟಿ. ನಿಜ, ಇನ್ನೂ ಒಂದೆಂದರೆ, ಪೂರ್ತಿಯಾಗಿ ’ಅಪಹಾಸ್ಯ’ ಎಂದೇ ಲೇಬಲ್ ಮಾಡುವಂತೆಯೂ ಇಲ್ಲ. ಅದು ಸ್ನೇಹಪೂರ್ವಕ ಸಲುಗೆಯೂ ಇರಬಹುದು! ಅಡಿಗರಲ್ಲಿದ್ದ ಹಾಸ್ಯಪ್ರಜ್ಞೆ, “ಸಮಕಾಲೀನ ಕವಿ ಕೆ.ಎಸ್.ನರಸಿಂಹಸ್ವಾಮಿಯವರು ಅಂತಹ ’ಹಾಸ್ಯ ಲೇಪಿತ ಲೇವಡಿ’ಯ ಬಾಣವನ್ನು ಯಶಸ್ವಿಯಾಗಿ ತಡೆದುಕೊಳ್ಳಬಲ್ಲರು ಎಂದು ಅಡಿಗರಿಗಿದ್ದ ಪಾಸಿಟಿವ್ ವಿಶ್ವಾಸ” – ಇವುಗಳನ್ನೂ ನಾವು ಗುರುತಿಸಬಹುದು, ಗುರುತಿಸಬೇಕು ಎಂದು ನನ್ನ ವೈಯಕ್ತಿಕ ಅನಿಸಿಕೆ. ಏಕೆಂದರೆ ಹಾಸ್ಯಲೇಪಿತ ಬಿಡಿ, ಸದುದ್ದೇಶದ ರಚನಾತ್ಮಕ ಟೀಕೆ/ವಿಮರ್ಶೆಗಳನ್ನು ಸಹ ಅರಗಿಸಿಕೊಳ್ಳುವುದು ಇಂದು ಅಪರೂಪವಾಗಿದೆ. ಅದಕ್ಕೋಸ್ಕರವಾದರೂ ಪುಷ್ಪಕವಿಯನ್ನು (ಸಮಾನವಾಗಿ ಅಡಿಗರನ್ನೂ) ನಾವು ಆದರ್ಶವಾಗಿ ಕಾಣಬೇಕು.
    ಕವಿತೆ ಒಬ್ಬೊಬ್ಬರಿಗೆ ಒಂದೊಂದು ಥರ ಇಷ್ಟವಾಗಬಹುದು. ಇಷ್ಟವಾಗುವುದಕ್ಕಿಂತಲೂ ಉಪಯೋಗಕ್ಕೆ ಬಂದರೆ ಅದು ಮತ್ತಷ್ಟು ಸಂತಸದ ವಿಚಾರ ಎನ್ನುತ್ತಾರೆ ಬೇಂದ್ರೆಯವರು. ಅವರು ಒಂದು ಸಂದರ್ಶನದಲ್ಲಿ ಹೇಳಿದ್ದರೆನ್ನಲಾದ ಈ ಮಾತುಗಳು ಅದಕ್ಕೆ ಪೂರಕ: “ಪ್ರಶಸ್ತಿ ಪರಾಕುಗಳು ಬರಬಹುದು ಹೋಗಬಹುದು, ಆದರೆ ನನ್ನ ಕವಿತೆ ಒಬ್ಬ ಮನುಷ್ಯನಿಗೆ ಉಪಯೋಗಕ್ಕೆ ಬಂತು ಎಂದು ಅರಿತಾಗಿನ ಸಂತಸ ನನಗೆ ಇನ್ನಾವ ಪ್ರಶಸ್ತಿಯಿಂದಲೂ ಬಾರದು. ಕೆಲಸಗಾರರ ಗುಂಪೊಂದು ದಣಿವನ್ನು ಮರೆಸುವುದಕ್ಕೆ, ಉತ್ಸಾಹ ಹೆಚ್ಚಿಸಿಕೊಳ್ಳುವುದಕ್ಕೆ “ಎಲೇಲಪ್ಪ ಐಸಾ…” ಎನ್ನುವ ಹಾಗೆ ನನ್ನ ಕವಿತೆಯ ತುಣುಕುಗಳನ್ನು ಹಾಡಿಕೊಂಡಿದ್ದನ್ನು ಒಮ್ಮೆ ಕಣ್ಣಾರೆ ಕಂಡಿದ್ದೆ. ಆಗ ನನಗಾದ ಸಂತಸವನ್ನು ಬಣ್ಣಿಸುವುದಕ್ಕೇ ಸಾಧ್ಯವಿಲ್ಲ!”
    ಮಲ್ಲಿಗೆಕವಿಯ ಕವನಗಳಿಗೆ ಸಹ ಅಂದು-ಇಂದು-ಮುಂದೂ ಜನಮಾನಸದಲ್ಲಿ ಅದೇರೀತಿಯ ಆಪ್ಯಾಯಮಾನ ಸ್ಥಾನವಿದೆಯಾದರೆ ಅದೇ ಅವುಗಳ ಶ್ರೇಷ್ಠತೆ, ಸಾರ್ಥಕ್ಯ.
    ಕೊನೆಯದಾಗಿ ಆಸಕ್ತರ ಓದಿಗೆ: ಕೆಲದಿನಗಳ ಹಿಂದೆ ಹ್ಯೂಸ್ಟನ್‌ನಲ್ಲಿ ಬಿಡುಗಡೆಯಾದ, ಡಾ.ಮೈ.ಶ್ರೀ.ನಟರಾಜ್ ಅವರ “ಬಿಯಾಂಡ್ ವರ್ಡ್ಸ್” (ಆಯ್ದ ಕನ್ನಡ ಕವಿತೆಗಳ ಇಂಗ್ಲಿಷ್ ಅನುವಾದ; ಈ ಪುಸ್ತಕದ ಪರಿಚಯಲೇಖನ ನಳಿನಿ ಮೈಯ್ಯ ಅವರು ಬರೆದದ್ದು ಅವಧಿಯಲ್ಲಿ ಕೆಲದಿನಗಳ ಹಿಂದೆಯಷ್ಟೇ ಪ್ರಕಟವಾಗಿದೆ) ಪುಸ್ತಕದಲ್ಲಿ ಗೋಪಾಲಕೃಷ್ಣ ಅಡಿಗರ ’ಪುಷ್ಪಕವಿಯ ಪರಾಕು’ ಕವಿತೆ ಮತ್ತು ಅದರ ಇಂಗ್ಲಿಷ್ ಅನುವಾದವೂ ಇದೆ. ಈರೀತಿ-
    Hail to the Flower Poet
    (Gopalakrishna Adiga)
    What could these guys write?
    At best, they could drill mercilessly
    Through the connoisseur’s heart.
    Is there a shortage for poets here?
    There are hundreds of them.
    They exist here like stones and thorns
    Straw and floating hollow grains.
    Forget that ugly thought,
    He is one of a kind and second to none
    In this entire universe!
    Look, look, here comes the Flower Poet,
    Do you know him –the one whose life is poetry?
    No, no, — the very essence of poetry?
    He comes wearing his crotch-crossing dhothi
    And a close-collared coat
    Donning a slightly slanting Mysore peta
    Inspiring paan beeda in his mouth
    With a dash of Madras snuff between fingers
    Immersed in the clouds as it were,
    Eyes looking up in super-sight
    With his chest up –looks like he is ready
    To conquer the Himalayas!
    He, that is,– none other than yours truly,
    The moonlit sky, Kamadhenu, the holy cow
    Yielding not milk but emotions;
    My emotions are the emotions,
    My way is the way;
    The words that I coin
    Make the world of perfumes,
    There is nothing better than that,
    No one has concocted such poetry
    Those who know how to appreciate
    Are the mature ones. No doubt.
    Look and fall at my feet and prostrate,
    Sing my praise, sing my praise
    I am the crown of Kannada fame
    When the ocean of epics was churned
    And the gems of emotions emerged
    I was the one who rose to the surface
    Like the fountain of elixir!
    My poems are like fresh flowers;
    What softness, what polish,
    And what a sophisticated shine!
    The very same fragrance,
    Cool and melodious,
    And nothing but brilliant luster!
    Is there anything better than flower, my child?
    Raw fruit is sour, ripe one rots
    Roots after all are filthy like an old man’s beard
    Emanating from the old dirty soil.
    Full moon –just a zero-like drudgery,
    Gold has no such delicate scent,
    Does molten iron possess such cool?
    Cattle or people are pitiful and smelly.
    Gommata’s calm stature, seems so frightful,
    Like the strings that strike birth and death,
    Like broken disposables of an ancient house
    The waves that open the poet’s heart
    The swelling mighty ocean
    Just with a blast and no melody
    Creating arrhythmia of emotions
    With monotonous growl of the boring frog!
    But me? I blossom sprinkling cologne
    Get excited at once and spread my aroma
    In all eight directions like fresh jasmine!
    I can swallow Gommata whole
    And spit him back crushed into a small morsel;
    I can drink molten steel
    And convert it into dew and make it dance
    I can suck the ocean empty
    And churn it inside out and spew as
    Fine droplets of honey.
    I am the architect that sees flower in everything!
    Harvest on the shores of the moonlight lake
    I am that love-god cupid that whispers romance;
    Stupid ones know not the beauty of this sentiment
    I can beat up the multiple and compress it into unity;
    I know not pathos, attachment, or pangs of separation
    I can only unfurl petals of lively dialogue
    My reputation is romantic creation.
    There was Keats; and here is our Flower Poet!
    For the entire empire of poets,
    The shoulders of these two giants form the support
    Alas, Keats is no more; how can he carry any more?
    Now, the entire burden rests on my shoulder.
    And so also, the reputation.
    I am immersed in my own poetry:
    From morning till evening, sound of my poetry
    Throbs in my heart’s harp.
    I adore my own greatness swaying my head
    No wonder, you bow down your head
    In total submissive adulation.
    I am the prisoner of those soft eyes of mine
    I have named myself my prime venerator.
    The rest of them here are all bad poets,
    Where is the time to read those boring bunch?
    My tongue hurts if I read them,
    My ears hurt if I listen to them
    If I ever hear their praise,
    My heart turns into a boiling pan.
    Soft as a flower, smooth as butter, such are my words
    Honey keeps flowing when I write,
    If at all you write, you should write like me!
    As if a pleasant smile is dancing on sun’s rays
    Falling on the surface of the ocean waves;
    Like me, one should write!
    Is that poetry? Thickest of jungles?
    Mighty oceans? High mountains?
    That is offspring of the devil;
    Throw it out; kick those poets out;
    Simply prostrate at the feet of this Flower Poet!
    Here comes the Flower Poet,
    Say “Hail to the poet”
    (I am that poet, I hope you know!)
    Hail to me!
    What else does Kannada need?
    What else does India need or even the world?
    And to all those that move and those that don’t,
    This one poet is sufficient.
    Meaning, “I am sufficient!”
    Hail, Hail, Hail Flower Poet!!
    (I am the great poet)
    All of you in unison praise me;
    Here comes the “Emperor of poets”
    Fall at his (my) feet.
    =====

    ಪ್ರತಿಕ್ರಿಯೆ
  9. Megaravalli Ramesh

    ಅಡಿಗರು ಒಬ್ಬ ಶ್ರೇಷ್ಠ ಕವಿ ಮಾತ್ರವಲ್ಲ ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳ ಬಹುದಾದ೦ತಹ ಕವಿ. ಏಲಿಯಟ್, ಯೇಟ್ಸ್ ರ ಕಾವ್ಯಮಾರ್ಗದಲ್ಲಿ ನಡೆದ ಅಡಿಗರು ಅವರಶ್ಟೆ ಶ್ರೇಷ್ಠವಾದ ಕವಿತೆಗಳನ್ನು ಬರೆದಿದ್ದಾರೆ. ಜ್ನಾನಪೀಠ ಪ್ರಶಸ್ತಿ ಮಾತ್ರವಲ್ಲ ನೋಬೆಲ್ ಪ್ರಶಸ್ತಿಗೂ ಅರ್ಹರಾದ ಕವಿ ಅಡಿಗರು. ಬೇ೦ದ್ರೆಯವರ ನ೦ತರ ಬದುಕನ್ನು ಆಳವಾಗಿ ಶೋಧಿಸಿ ಹಿ೦ಡಿ ಹಿ೦ಡಿ ಕವನವಾಗಿಸಿದವರು ಅಡಿಗರು. ಭಾಷೆಯನ್ನು ನುರಿದು ನಾದಿ ನಾದಿ ಕಾವ್ಯಶಿಲ್ಪಕ್ಕೆ ಒಗ್ಗಿಸಿದವರು ಅವರು. ಅವರು ಬರೆದಿರುವ ಅನೇಕ ಭಾವಗೀತೆಗಳೂ ಸಹ ಅತ್ಯುತ್ಕೃಷ್ಟವಾಗಿವೆ. ಆಡಿಗರ ಕವನಗಳಲ್ಲಿ ಅಡಕವಾಗಿರುವಷ್ಟು ಪ್ರತಿಮೆಗಳನ್ನು ಬೆರೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಅವರ ಅನೇಕ ಕವನಗಳಲ್ಲಿ ಸಮಾಜವಾದದ ಛಾಯೆಯನ್ನು ಗುರುತಿಸ ಬಹುದು. ಆ೦ತಹ ಅಡಿಗರು ಜನ ಸನ್ಘದಿ೦ದ ಚುನಾವಣೆಗೆ ಸ್ಪರ್ಧಿಸಿದ ಮಾತ್ರಕ್ಕೆ ಅವರನ್ನು ಫ್ಯಾಸಿಸ್ಟ್ ಎ೦ದು ಜರೆಯುವುದು ಮನುಶ್ಯನ ಅತೀ ಸಣ್ಣ ತನವನ್ನು ತೊರಿಸುತ್ತದೆ.
    ಕೆ.ಎಸ್.ನ ರವರನ್ನು ಲೇವಡಿ ಮಾಡಿ ಪದ್ಯ ಬರೆದರೂ, ವೈಯಕ್ತಿಕ ನೆಲೆಯಲ್ಲಿ ಅವರನ್ನು ಮೆಚ್ಚಿಕೊ೦ಡಿದ್ದರು. ಕೆ.ಎಸ್.ನ ರವರ ತೆರೆದ ಬಾಗಿಲು ಮತ್ತು ನ೦ತರದ ಕವನಗಳನ್ನು ಅಡಿಗರು ಮೆಚ್ಚಿಕೊ೦ಡಿದ್ದರು. ಕೆ.ಎಸ್.ನ ರವರ “ಕು೦ಕುಮ ಭೂಮಿ”,” ಕವಿತೆ ಹುಟ್ಟುವ ಸಮಯ” ಮು೦ತಾದ ಅನೇಕ ವವಿತೆಗಳನ್ನು ತಾವು ಸ೦ಪಾದಿಸುತ್ತಿದ್ದ “ಸಾಕ್ಷ್ಜಿ” ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಅಡಿಗರು ಯಾರನ್ನೂ ಎನ್ದಿಗೂ ವೈಯಕ್ತಿಕವಾಗಿ ಹಳಿದವರಲ್ಲ, ದ್ವೇಷಿಸಿದವರಲ್ಲ.
    ಅಡಿಗರನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊ೦ಡು ಸ೦ಯುಕ್ತಾ ರವರು ವಿಶ್ಲೇಷಿಸಿದ್ದಾರೆ. ಸ೦ಯುಕ್ತಾ ಅವರೆ ಒ೦ದು ಒಳ್ಳೆಯ, ವಿಚಾರಪ್ರಚೋದಕ ಲೇಖನವನ್ನು ನೀಡಿದ ನಿಮಗಿದೋ ನನ್ನ ಅಭಿನ೦ದನೆಗಳು! ನಿಮ್ಮ ಲೇಖನ ಅಡಿಗರನ್ನು ಮಗದೊಮ್ಮೆ ಓದಬೇಕೆನಿಸುವ೦ತೆ ಮಾಡಿದೆ.
    —ಮೇಗರವಳ್ಳಿ ರಮೇಶ್

    ಪ್ರತಿಕ್ರಿಯೆ
  10. Gururaj katriguppe

    ಅಡಿಗರಿಗಷ್ಟೆ ಅಲ್ಲ, ಕೆಎಸ್ ನ ಅವರಿಗೂ ಙ್ನಾನಪೀಠ ಬರಬೇಕಿತ್ತು. ‘ಪಟ್ಟ ಪಾಡನ್ನಷ್ಟೆ ಹಾಡಬೇಕೇನು, ಬೇಡವೇನು ಯಾರಿಗೂ ಸಿರಿಮಲ್ಲಿಗೆ’ ಎಂದು ಕೆಎಸ್ ನ ತಮ್ಮ ಕಾವ್ಯದ ಮೂಲಕವೇ ಅಡಿಗರಿಗೆ ಉತ್ತರಿಸಿದ್ದರು.

    ಪ್ರತಿಕ್ರಿಯೆ
  11. Rj

    ಈ ಸಲದ ನಿಮ್ಮ ಅಂಕಣಕ್ಕಾಗಿ ಒಳ್ಳೆಯ ಹೋಮ್ ವರ್ಕ್ ಮಾಡಿದ್ದೀರಿ ಅಂತ ನನ್ನ ಅನಿಸಿಕೆ.ತುಂಬ ಖುಶಿಯಾಯಿತು,ಕವಿಗಳಿಬ್ಬರ ಕವಿತೆಗಳ ಕುರಿತಂತೆ ಅಲ್ಲ;ಬದಲಾಗಿ ನಿಮ್ಮ ಒಳನೋಟಕ್ಕೆ ಮತ್ತು ನಿಮ್ಮ ಶ್ರಮಿಕತನಕ್ಕೆ.
    🙂
    -Rj

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: