ಶ್ರೀ ದೇವಿ ಕೆರೆಮನೆ
ಮನಸ್ಸು ಅಧೀರವಾದರೆ ನನ್ನ ದೂಷಿಸಬೇಡ
ಮಾತಿರದೆ ಮೌನವಾದರೆ ನನ್ನ ದೂಷಿಸಬೇಡ
ಕಣ್ಣುಗಳಿಗೆ ಕಪ್ಪು ಹಚ್ಚುವ ರೂಢಿಯಿಲ್ಲ ನನಗೆ
ಚುಕ್ಕಿಗಳೇ ಮಸುಕಾದರೆ ನನ್ನ ದೂಷಿಸಬೇಡ
ಬರೆಯುವುದು ಹೇಗೆ ಜೀವವಿಲ್ಲದ ಅಕ್ಷರಗಳನು
ಪದಗಳಲಿ ನೀ ಇಣುಕಿದರೆ ನನ್ನ ದೂಷಿಸಬೇಡ
ಹುಣ್ಣಿಮೆಯಂದು ಸಮುದ್ರವೂ ಉಕ್ಕೇರುವುದಂತೆ
ಆಸೆಯ ಅಲೆ ಸೆಳೆದೊಯ್ದರೆ ನನ್ನ ದೂಷಿಸಬೇಡ
ಕೆನ್ನೆಯ ನುಣುಪಿಗೆ ದ್ರಾಕ್ಷಾರಸ ಸವರಿದ್ದೇನೆ
ತುಟಿ ಕಚ್ಚಿ ನಶೆಯೇರಿದರೆ ನನ್ನ ದೂಷಿಸಬೇಡ
ದೂರದ ದೀಪಸ್ತಂಭ ಮಿನುಗುತಿದೆ ಗಳಿಗೆಗೊಮ್ಮೆ
ಎದೆಯಲಿ ನೆನಪು ಕೆರಳಿದರೆ ನನ್ನ ದೂಷಿಸಬೇಡ
ಕತ್ತಲ ರಾತ್ರಿಯಂದು ಹೆಪ್ಪುಗಟ್ಟಿದೆ ಕಾರ್ಮೋಡ
ಮಿಂಚಿನ ನೋಟ ಕಾಡಿದರೆ ನನ್ನ ದೂಷಿಸಬೇಡ
ಸಿರಿ, ಕಾಯುವುದಕೂ ಇರುತ್ತದೆ ಒಂದು ಸಮಯಮಿತಿ
ಜಗದ ನಿಯಮ ಬದಲಾದರೆ ನನ್ನ ದೂಷಿಸಬೇಡ
0 ಪ್ರತಿಕ್ರಿಯೆಗಳು