ಸತ್ಯಬೋಧ ಜೋಶಿ
ಮಾಡ ಹಾಕಿದ ಮುಗಿಲು ಸರಸೋತಿ ಉಡಿಹಂಗ
ಹನಿ ಹನಿಗೂ ಒಂದು ಕವನ..
ಮಳೆಗಾಳಿ ಬೀಸಿದರ ಎದಿ ಭಾರ ಜೀಕತದ
ಹಾಡುಗಬ್ಬದ ಹಬ್ಬ ಈ ಶ್ರಾವಣ.
ಪಾಳು ಪೋಳಿಯ ಗ್ವಾಡಿ ಹಸರುಟ್ಟು ಹಾಡತಾವ
ಆಡಿ ಗೀಚಿದ ಹೆಸರ ಹೊಳ್ಳಿ ಕೂಗಿ
ಭರಮ ದೇವನ ಬಗರಿ ಹೊರಳಿ ತಿರಗಿದ ಹಂಗ
ತಿರುತಿರುಗಿ ಕಾಡತಾವ ಕಳೆದ ನೆನಪು
ಕೆರಿದಂಡಿ,ಗುಡಿ ತಿರುವು
ಮೈಮರೆತು ಹರದಾವ,
ಕಳ್ಳ ದಾರಿಯ ಹಿಡಿದ ಹಾವಿನ್ಹಾ0ಗ
ಬಾಳ ರೇಖೆಯ ಬರಿಯೋ, ಚಿತ್ರಗುಪ್ತನ ಹಂಗ
ಹೆಜ್ಜೆ ಗೊರಸಿನ ಗುರುತು ಹಾದಿ ಬರದಾವೋ
ಕೆರೆಹೊಂಡ ಹೊಲಭಾವಿ ಮುಗಿಲ ಮಾರಿಯ ಕನಡಿ
ಹನಿ ಹನಿದು ಬಂದಹಂಗ ಬಿಂಬ ಮಸುಕು
ಕೆರಿ ಒಡಲ ತಳದಿಂದ ಶಿರಿಯಾಳ ಬಂದ ಹಂಗ
ಹಸರ ಕೆದಕಿದ ಬಿಂಬ ಮ್ಯಾಲೆ ಬರತಾವ..
ಶ್ರಾವಣದ ರೊಮ್ಯಂಟಿಕ್ ಬಣ್ಣನೆ, ಸಚಿತ್ರ ಕವನ.
ಶ್ರಾವಣದ ಸೊಬಗನ್ನು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ. ಕವನ ಓದುತ್ತಾ ಹೋದ ಹಾಗೆ ಒಳ ಬುಗುರಿಯೂ ಟೈಂ ಮಷಿನ್ ಗೆ ಒಳಪಡಿಸಿತು.
ಕವನದ ಒಳ ಆಶಯದಂತೆ ಶ್ರಾವಣ ಹೇಗೆ ಭುವಿಯಲ್ಲಿ ತನ್ನ ಛಾಪು ಮೂಡಿಸುವುದೋ ಹಾಗೆ, ನಮ್ಮ ಕಾಲ್ಗೊರಸಿನ ಪಡಿಯಚ್ಚು ನಮ್ಮ ನಂತರವೂ ಉಳಿಯಲಿ ಎಂದು ಆಶಿಸುತ್ತೇನೆ.