ಶಿವಲೀಲಾ ಹುಣಸಗಿ ಯಲ್ಲಾಪುರ
ನೀ ಬರಲಿಲ್ಲ
ಕಾದು ಕಾದು ಸುಸ್ತಾದೆ
ನಿನ್ನ ನೆನಪಲ್ಲೆ ಮರುಗಿದೆ
ಮೇಣದ ಕರಗಿ ಹರವಿಕೊಂಡು
ಕಾದೆ ಬತ್ತಿಯಾಗುವಿಯೆಂದು
ವಿರಹದ ತಾಪಕೆ ಆವಿಯಾದರು
ನಿನ್ನ ಸುಳಿವಿಲ್ಲ ಆಸುಪಾಸಿನಲ್ಲಿ
ಎಂಥ ಕಠಿಣತೆ ನಿಂದು ಬಂಡೆಯಂತೆ
ನನಗೀಗಿಗ ಚಿಂತೆ ಹೆಮ್ಮರವಾಗಿತಿದೆ
ಕಗ್ಗಲ್ಲ ಎದೆಯಲ್ಲಿ ನಾ ಅರಳಿದ್ದು ಹೇಗೆಂದು?
ಒರಟಾದ ಗುಂಡಿಗೆಯಲ್ಲಿ ನನ್ನ ಪ್ರತಿಬಿಂಬ
ಹಾಸು ಹೊಕ್ಕಾದರೂ ಮೃದುವಾಗಲಿಲ್ಲವೆಂದು?
ನಿನ್ನ ಸೆಳತವೆಂಥಹುದೋ ನಾ ಕಾಣೆ?
ಬರಸಿಡಿಲಿಗೆ ಸಿಕ್ಕು ಬರಡಾದಂತೆ ನಾನು.!
ಪ್ರೀತಿಯ ಹೊಂಗೆಮರ ಹೂ ಬಿಟ್ಟರೂ
ಆ ಹೂವ ನೀ ಆರಾಧಿಸದೇ ಹೊಸಕಿದೆ..
ನಿನ್ನರ್ಥದಲ್ಲಿ ಪ್ರೇಮ ಬೆತ್ತಲೆಯ ಬಯಲು
ಬಯಲಾದ ಕಾಮಕೆ ಪ್ರೇಮವೆಂದವನು
ಎಲ್ಲವನು ಸಹಿಸಿರುವೆ ನಿನಗಾಗಿ
ನಿನ್ನ ಪ್ರೀತಿಸಿದ ಒಳಗಣ್ಣಿಗಾಗಿ
ಕಠೋರ ದೇಹವಾದರೂ ಮಲ್ಲಿಗೆಯೆಂದು
ನಿನಗರಿವಾಗುವಷ್ಟರಲ್ಲಿ ಕಮರುವೆ ನಾನೆಲ್ಲೊ
ಮಸಣದಂಚಿನ ತಿರುವಿನ ಗೋರಿಯಲ್ಲವಿತು
ಮಣ್ಣಾದರೂ ಸರಿ, ಬೂದಿಯಾದರೂ ಸರಿ
ನಿನ್ನುಸಿರಿಲಿ ಬೆರೆತ ಗಳಿಗೆಗಾದರೂ ಸರಿ
ವಿರಹದಳ್ಳುರಿಯಲಿ ಬೆಂದವಳು ನಾನು
ಉಸಿರು ನಿಲ್ಲುವ ಕ್ಷಣಕಾದರೂ ಬಂದು ಸೇರು
ನಾ ಹೋದ ಬಳಿಕ ಮರುಗಿದರೇನು ಬಂತು?
ಕಳೆದ ಜೀವಸೆಲೆಯ ಜಿನುಗಿಸಬಲ್ಲೆಯಾ?
ಗುಡ್ಡಕ್ಕೆ ಕಲ್ಲು ಹೊತ್ತಂತಾಯಿತು ಬದುಕು
ನೀ ಬರಲಿಲ್ಲ ಪ್ರೇಮ ಫಲಿಸಲಿಲ್ಲ
ನಿನ್ನ ಎದೆಯು ನನಗಾಗಿ ಮೀಡಿಯಲಿಲ್ಲ.
ವಿರಹಾಗ್ನಿಯ ಬಿಂಬಿಸುವ ಈ ಕವನ ತುಂಬಾ ಸುಂದರವಾಗಿ & ಸೊಗಸಾಗಿ ಮೂಡಿ ಬಂದಿದೆ. ಶೈಲಜಾ ಭಟ್ ಧಾರವಾಡ
Super