ನಾಗರಾಜ್ ಹರಪನಹಳ್ಳಿ
ಬಿಸಿಲ ಉಂಡ ದಾರಿ
ರಾತ್ರಿ ತಂಗಾಳಿಗೆ ಮೈಚೆಲ್ಲಿತು
ಆಕೆಯ ನೆನಪಾಯಿತು
ನನ್ನ ಉಸಿರು
ನನಗೆ ತಾಗಿತು
ಅದರಲ್ಲಿ
ನಿನ್ನ ಉಸಿರೂ ಇತ್ತು
ನೆರಳ ದಾರಿಯಲ್ಲಿ
ಯಾರೋ ನಿಂತು
ದಣಿವಾರಿಸಿಕೊಂಡರು
ಇಬ್ಬರು ಬೆಳಸಿದ
ಗಿಡ
ಮರವಾಗಿ
ಋಣ ತೀರಿಸುತ್ತಿದೆ…
ಅದೇ ಮರದಲ್ಲಿ
ಹಕ್ಕಿ ಸಂಸಾರ ಹೂಡಿದೆ
ಒಬ್ಬಂಟಿ ನಾನು
ಅದ ಕಂಡು
ಮೌನಿಯಾಗುತ್ತೇನೆ
ಕನಸುಗಳು
ಕನಸಾಗಿಯೇ ಉಳಿದವೆಂದು
ನಸು ನಗುತ್ತೇನೆ
ಒಮ್ಮೊಮ್ಮೆ
ನಮ್ಮ ಕನಸಿನ
ಮರದಲ್ಲಿ
ಈಗೀಗ ಹಕ್ಕಿಗಳ
ದಂಡೇ ನೆರೆಯುತ್ತದೆ
ಸಭೆ ಸಮಾರಂಭ
ಚರ್ಚೆಗಳು ಆಗುತ್ತವೆ
ಚರ್ಚೆಯ ಸ್ಥಾಯೀಭಾವ
ಪ್ರೇಮವೇ ಆಗಿರುತ್ತೆ
ಎಂಬುದು ಸೋಜಿಗ
0 ಪ್ರತಿಕ್ರಿಯೆಗಳು