ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶತಮಾನದ ಸೂರ್ಯಾಸ್ತ

ಮೂಲ: ರವೀಂದ್ರನಾಥ ಟ್ಯಾಗೋರ್
ಕನ್ನಡಕ್ಕೆ : ಡಾ. ವಸಂತಕುಮಾರ್ ಎಸ್. ಕಡ್ಲಿಮಟ್ಟಿ

ಪಡುವಣದ
ನೆತ್ತರ-ಕೆಂಬಣ್ಣಿನ ಮೋಡಗಳು ಮತ್ತು
ದ್ವೇಷದ ಸುಂಟರಗಾಳಿಯ ಮಧ್ಯೆ
ಶತಮಾನದ ಕಟ್ಟ ಕಡೆಯ ನೇಸರನು
ಅಸ್ತಂಗತನಾಗುತ್ತಾನೆ.
ಜನಾಂಗಗಳ ಸ್ವಮೋಹದ
ಬೆತ್ತಲೇ ಉತ್ಸಾಹ
ಕುಡಿದ ಅಮಲಿನ ಸಮೂಹ ಸನ್ನಿಯಲಿ
ಉಕ್ಕಿನ ಘರ್ಷಣೆ ಮತ್ತು
ಪ್ರತೀಕಾರದ ಕೂಗುಮಾರಿ
ಕವಿತೆಗಳಿಗೆ ನೃತ್ಯ ಮಾಡುತ್ತಿದೆ.

ದೇಶದ ಹಸಿದ ಆತ್ಮವು
ತಾನೇ ಪೋಷಿಸಿಕೊಂಡ ನಿರ್ಲಜ್ಜತೆಗೆ
ಬಹಳ ಹಿಂಸೆಯಿಂದಲೇ
ಸಿಟ್ಟಿನಿಂದ ಸ್ಫೋಟಗೊಳ್ಳುತ್ತದೆ.
ತನ್ನದೇ ತುತ್ತು ಅನ್ನಕ್ಕಾಗಿ
ಅದು ಜಗವನ್ನು ನಿರ್ಮಿಸಿದ್ದೂ ಹೀಗೆಯೇ,
ಈಗೋ…
ಅದನ್ನೇ ನೆಕ್ಕುತ್ತಿದೆ,
ಅದನ್ನೇ ಮೆಲಿಯುತ್ತಿದೆ,
ಮತ್ತದನ್ನೇ ದೊಡ್ಡದಾದ
ಚೂರುಗಳಲ್ಲಿ ನುಂಗುತ್ತಿದೆ,
ಹಿರಿ-ಹಿರಿ ಹಿಗ್ಗುತ ಊದಿಕೊಳ್ಳುತ್ತದೆ
ತನ್ನ ಪವಿತ್ರವಲ್ಲದ ಹಬ್ಬದ ನಡುವೆಯೇ
ಸ್ವರ್ಗದ ಅನಿರೀಕ್ಷಿತ ಬಾಣವು
ಎಗ್ಗಿಲ್ಲದೆ ಎರಗುತ್ತದೆ.
ಅನುಚಿತದ ಹೃದಯವನ್ನು
ಸೀಳುತ್ತಿದೆ.

ದಿಗಂತದಂಚಿನಲ್ಲಿ ಹೊಮ್ಮುತ್ತಿರುವ
ಆ ಕಡುಗೆಂಪು ಬೆಳಕಿನ ಹೊಳಪು
ನಿನ್ನ ಶಾಂತಿಯ ಪ್ರಭಾತದ ಬೆಳಕಲ್ಲ,
ಓ ನನ್ನ ತಾಯ್ನಾಡೇ…!
ಅದು
ತನ್ನದೇ ಅತಿರೇಕದ
ಭಾರಕ್ಕೆ ಸಿಲುಕಿ ಸತ್ತ
ರಾಷ್ಟ್ರದ ಸ್ವಪ್ರೇಮವೆಂಬ
ಆ ಬೃಹತ್ ದೇಹವನ್ನು
ಸುಟ್ಟು ಬೂದಿಯಾಗಿಸುತ್ತಿರುವ
ಚಿತೆಯ ಜ್ವಾಲೆಯ ಮಿನುಗು.
ನಿನ್ನ ಮುಂಜಾವು ಇನ್ನೂ ಕಾಯುತ್ತಿದೆ
ಪೂರ್ವದ ತಾಳ್ಮೆಯ ಕತ್ತಲೆಯಾಚೆ
ವಿನಮ್ರವಾಗಿ,
ಮೌನವಾಗಿ.

ಎಚ್ಚರದಿಂದ ಕಾದಿರು, ಭಾರತಾಂಬೆಯೇ
ಆ ಪವಿತ್ರ ಸೂರ್ಯೋದಯದ
ಆರಾಧನೆಗೆ
ನಿನ್ನ ಅರ್ಪಣೆಗಳನ್ನು ಸಿದ್ಧಗೊಳಿಸು.
ಅದನ್ನು ಸ್ವಾಗತಿಸುವ ಮೊದಲ ಸ್ತೋತ್ರ
ನಿನ್ನ ದನಿಯಲ್ಲೇ ಮೊಳಗಲಿ,
ಹೀಗೆ ಹಾಡು…
“ಬಾ, ಶಾಂತಿಯೇ..!
ದೇವರ ಮಹಾನ್ ಯಾತನೆಯಿಂದ
ಜನಿಸಿದ ಮಗಳೇ, ಬಾ..!
ಸಂತೃಪ್ತಿಯೆಂಬ
ನಿನ್ನ ಅಮೂಲ್ಯ ನಿಧಿಯೊಂದಿಗೆ ಬಾ…
ಸ್ಥೈರ್ಯವೆಂಬ
ಖಡ್ಗವನ್ನು ಹಿಡಿದು ಬಾ…
ವಿನಮ್ರತೆಯ ಕಿರೀಟವನ್ನು
ನಿನ್ನ ಹಣೆಯ ಮೇಲೆ ಧರಿಸಿ ಬಾ..!”

ನನ್ನ ಸಹೋದರರೇ,
ಗರ್ವಿಷ್ಠರ ಮತ್ತು ಬಲಾಢ್ಯರ ಮುಂದೆ
ನಿಮ್ಮ ಸರಳತೆಯ
ಶುಭ್ರ ವಸ್ತ್ರವನ್ನು ತೊಟ್ಟು ನಿಲ್ಲಲು
ಎಂದಿಗೂ ನಾಚಿಕೆ ಪಡಬೇಡಿ.
ವಿನಯವೇ ನಿಮ್ಮ ಕಿರೀಟವಾಗಲಿ;
ನಿಮ್ಮ ಸ್ವಾತಂತ್ರ್ಯವು
ಆತ್ಮದ ಸ್ವಾತಂತ್ರ್ಯವಾಗಲಿ.
ನಿಮ್ಮ ಬಡತನದ
ವಿಶಾಲ ನಿರಾಡಂಬರತೆಯ ಮೇಲೆ
ಪ್ರತಿದಿನವೂ
ದೇವರ ಸಿಂಹಾಸನವನ್ನು ನಿರ್ಮಿಸಿ.
ಮತ್ತು ಅರಿಯಿರಿ
ಗಾತ್ರದಲ್ಲಿ ಬೃಹತ್ತಾಗಿರುವುದೆಲ್ಲ
ಮಹತ್ತರವಾದುದಲ್ಲ;
ಅಹಂಕಾರವೂ ಶಾಶ್ವತವಲ್ಲ.

‍ಲೇಖಕರು Admin

17 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading