ವಿಶ್ವನಾಥ ಎನ್ ನೇರಳಕಟ್ಟೆ
ಪಂಪ ನಿನ್ನ ನೆನಪಿನಲ್ಲಿ
ನಾವಿನ್ನೂ ಉಳಿಸಿದ್ದೇವೆ
ಜಾತೀಯತೆಯನ್ನು, ಜಾತಿ ಪಾರಮ್ಯವನ್ನು
ಜಾತಿ ಅಸಮಾನತೆಯನ್ನು, ಅಸ್ಪೃಶ್ಯತೆಯನ್ನು!
‘ಕುಲಂ ಕುಲಮಲ್ತು ಚಲಂ ಕುಲಂ…’
ಸಾಲುಗಳ ಅಂದವನ್ನು ಹಾಳುಮಾಡಬಾರದೆಂದು
ಶ್ರೇಷ್ಠತೆಯ ಕರವಸ್ತ್ರದಲಿ
ಒರೆಸಿಟ್ಟಿದ್ದೇವೆ ಮನೆಯ ಶೋಕಾಸಿನೊಳಗೆ
ಬಂದ ಅತಿಥಿಗಳಿಗೆ ತೋರಿಸಿ
ಚಪ್ಪಾಳೆ ಗಿಟ್ಟಿಸಿಕೊಳ್ಳುವುದಕ್ಕೆ!
‘ಮನುಷ್ಯ ಜಾತಿ ತಾನೊಂದೆ ವಲಂ’
ನೀನೆಂದೋ ಅಂದದ್ದನ್ನು ನಾವಿಂದು
ಎದೆಯೊಳಗಿಳಿಸಿಕೊಂಡಿದ್ದೇವೆ ನಿನ್ನಾಣೆಗೂ!
ಹೃದಯದೊಳಗಣ ಎ.ಸಿ. ಕೋಣೆಯೊಳಗೆ
ಹಿಡಿದು ಕಟ್ಟಿಹಾಕಿದ್ದೇವೆ ಆ ಸಾಲನ್ನು
ಎಂದೆಂದೂ ಹೊರಬರದಂತೆ
ಮನುಷ್ಯತ್ವದ ಹೊನಲು ಒಸರದಂತೆ!
0 ಪ್ರತಿಕ್ರಿಯೆಗಳು