ವತ್ಸಲಾ ಶ್ರೀಶ
ಒಲವಿನ ಸೌಧದ ನಲಿವಿನ ಕೋಣೆಗೆ ಬೀಗ ಜಡಿಯುವ ಮುನ್ನ ಕಣ್ಣಲ್ಲಿ ಕಣ್ಣನಿಡಬೇಕಾಗಿತ್ತು ನೀನು
ಕನಸ ತೇರಿನ ಗಾಲಿಯ ಕೀಲಿಯನು ತೆಗೆಯುವ ಮುನ್ನ ಕಣ್ಣಲ್ಲಿ ಕಣ್ಣನಿಡಬೇಕಾಗಿತ್ತು ನೀನು
ಹುಣ್ಣಿಮೆಯ ರಾತ್ರಿಯಲಿ ಚಂದ್ರ ತಾರೆಯರ ಏಕಾಂತಕ್ಕೆ ಅಡ್ಡಿಪಡಿಸಿದ ಸಂಭ್ರಮ ಹೇಗೆ ಮರೆಯಲಿ
ಪ್ರೇಮ ಸಂಪುಟದಿ ಅಮಾವಾಸ್ಯೆಯ ಪುಟ ತೆರೆಯುವ ಮುನ್ನ ಕಣ್ಣಲ್ಲಿ ಕಣ್ಣನಿಡಬೇಕಾಗಿತ್ತು ನೀನು
ತಂಗಾಳಿಯೂ ಮುನಿಸುಗೊಂಡು ಹಾದಿ ಬದಲಿಸಿದ ದಿನ ನಿಟ್ಟುಸಿರುಗಳ ರಾಶಿಯಲಿ ಹುದುಗಿ ಹೋಗಿದ್ದೆ
ಹೃದಯದ ಗಾಯಕೆ ಸವಿನೆನಪುಗಳ ಕಾಡಲು ಬಿಟ್ಟು ನಡೆಯುವ ಮುನ್ನ ಕಣ್ಣಲ್ಲಿ ಕಣ್ಣನಿಡಬೇಕಾಗಿತ್ತು ನೀನು
ಜೇನ ಸವರಿ ಉಣಿಸಿದ ವಿಷಕ್ಕೇನು ಗೊತ್ತು ಹೇಳು ತನ್ನ ಗುಣವನ್ನು ನಿಷ್ಠೆಯಿಂದ ತೋರಿಸಿದೆ
ಆತ್ಮಸಾಕ್ಷಿಯನೂ ಗದರಿಸಿ ಸಂಕೋಲೆ ಬಿಗಿಯುವ ಮುನ್ನ ಕಣ್ಣಲ್ಲಿ ಕಣ್ಣನಿರಿಸಬೇಕಾಗಿತ್ತು ನೀನು
ಮನದ ಬಯಲಿನ ತುಂಬಾ ಪ್ರೀತಿ ಗಿಡಗಳನೇ ಬೆಳೆಸಿದ ‘ತಪಸ್ಯಾ’ಳಿಗೆ ಮೋಸ ವೃಕ್ಷದ ಪರಿಚಯವಿರಲಿಲ್ಲ
ಮುಗ್ಧತೆಯ ಹೊಸ್ತಿಲಲಿ ಕರಿ ರಂಗೋಲಿ ಬಿಡಿಸುವ ಮುನ್ನ ಕಣ್ಣಲ್ಲಿ ಕಣ್ಣನಿರಿಸಬೇಕಾಗಿತ್ತು ನೀನು
ಚೆನ್ನಾಗಿದೆ
ವತ್ಸಲಾಶ್ರಿಶರವರ ಕವಿತೆ ಚೆನ್ನಾಗಿ ಮೂಡಿ ಬಂದಿವೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ.