ಇರುಳ ಬಾಗಿಲಿಗೆ ಕಣ್ಣ ದೀಪಗಳನ್ನಿಟ್ಟು..
ಸದಾಶಿವ ದೊಡಮನಿ
ನೀನು ಮತ್ತೆ ಸಿಕ್ಕೇ ಸಿಗುವೆ
ಎಂಬ ಭರವಸೆಯ ಬೆಳಕಿನಲಿ
ಕನಸು ಹೆರುತ್ತಿದ್ದೇನೆ
ಹುಡುಗಾಟಿಗೆಗೂ ಹುಸಿಯ ನುಡಿಯದಿರು
ಹಗ್ಗವೂ ಹಾವಾಗುವುದು!
ದಿಬ್ಬಣದ ಸಂಭ್ರಮ
ಹೃದಯ ಗೂಡಲಿ ಮನೆ ಮಾಡಿ
ಇರುಳ ಬಾಗಿಲಿಗೆ ಕಣ್ಣ ದೀಪಗಳನ್ನಿಟ್ಟು
ಕಾಯುತ್ತಿದ್ದೇನೆ
ಒಲವ ಗಂಧ ಗಾಳಿಯಲಿ ಹೃದಯ ಬೆರೆಸಲು!
ಒಲವು ಹುಚ್ಚು ಹೊಳೆಯೆಂದು
ದೂಡದಿರು, ಧೂಳಿನಲಿ
ಹಾಳು ಬಿದ್ದ ಎದೆಯ ದೇಗುಲಕ್ಕೊಮ್ಮೆ
ಎದೆಗೊಟ್ಟು ಕೇಳು, ನಿನ್ನ ಸ್ಮರಣೆಯ ಹೊರತು
ಅನ್ಯ ಸೊಲ್ಲು ಇಲ್ಲಿ ಕೇಳದು
ಹಸಿಯ ಗಾಯದ ರಸಿಕೆ
ಹೆಸರಿಡಿದು ಕರೆಯುತ್ತಿದೆ
ಓ ಎನ್ನದೆ ಹೋಗದಿರು ಒಲವೆ!
ಚೆಲುವಿಗೆ ಒಲವೇ ಆಭರಣ
ಬಿಂಕ, ಬಿಗುವೆಂಬುದು ಹುಲು ಸರವಿ
0 ಪ್ರತಿಕ್ರಿಯೆಗಳು