ಲೀಲಾ ಅಪ್ಪಾಜಿ
ಅವರಿಗೋ ನನ್ನನ್ನು ಮುಗಿಸುವ
ಯುದ್ಧ ಗೆಲ್ಲುವಾತುರ
ನನಗೋ ಇಷ್ಟು ದಿನ ಕಂಡಂತಲ್ಲ
ಇಂದು ತಮ್ಮಂದಿರು
ಬೆಂಕಿಯ ಕೆಂಡ, ಮಡಿಲ ಸುಡುತಿದೆ
ಕೊರಳ ಹಾಲಾಹಲ
ಬಿಡುವಂತಿಲ್ಲ; ಅಪ್ಪುವಂತೆಯೂ ಇಲ್ಲ
ಕೊಟ್ಟ ಮಾತಿದ್ದೇ ಇದೆ.
ಸತ್ಯನಿಷ್ಠ ಮೀರೆನು, ನನ್ನದೇ ವ್ರತ.
ಒಡೆಯನ ನೆಚ್ಚಿನ ಬಂಟ
ಎದೆಯಲಿ ಒಂಟಿತನದ ಕಾವ ಕುದಿತ
ಬಿಟ್ಟ ಬಾಣದ ಸುರಿಮಳೆ
ನಸುನಗುತ ಎದೆಯೊಡ್ಡಿ, ಜೀವದಾನ.
ನೆಲನುಂಗಿದ ರಥ
ಕರುಳ ಸಂಕಟದ ಮೊರೆಗೆ ಬರಿಮೌನ
ಸೂತ್ರಧಾರ ಸಾರಥಿ
ಹೂಡುವುದಲ್ಲದೆ ಬಿಡುವುದು ಉಂಟೆ?
ನಾ ನಿಮ್ಮಣ್ಣ ಅರಿಯಿರಿ…
ಕರ್ಣಕ್ಕೆ ತಾಗಿಲ್ಲ ನನ್ನ ಮೌನಾಲಾಪ!
ಗೆಳೆಯಾ ದಾರಿಯಿಲ್ಲ…
ಕ್ಷಮೆ ಇರಲಿ, ಹೋಗುವುದೊಂದೆ ದಾರಿ.
ಮತ್ತೆ ನೆತ್ತವನಾಡೆನು..
ವಿಧಿ ನೆತ್ತವನಾಡದಿರಲಿ ಮರುಜನ್ಮಕೆ…
0 ಪ್ರತಿಕ್ರಿಯೆಗಳು