’ಕಳೆದ ಶತಮಾನದ ೬೦,೭೦ ಮತ್ತು ೮೦ರ ದಶಕದಲ್ಲಿ ಅಸ್ತಿತ್ವವಾದ ವ್ಯಕ್ತಿವಾದ ಮಾರ್ಕ್ಸ್ವಾದ ಲೋಹಿಯಾ ಗಾಂಧಿ ಜೆ.ಪಿ ಮುಂತಾದ ವಾದಗಳು ಜನರನ್ನು ಪ್ರಭಾವಿಸಿದ್ದವು. ನಂತರ ಎಮರ್ಜೆನ್ಸಿ ಬಂತು. ಈ ಎಲ್ಲ ಸಾಮಾಜಿಕ ಗುಣಧರ್ಮಗಳನ್ನು ನಾವು ಗೋಪಾಲಕೃಷ್ಣ ಅಡಿಗರ ಕಾವ್ಯದಲ್ಲಿ ಅಡಕವಾಗಿರುವುದನ್ನು ಕಾಣಬಹುದು’ ಎಂದು ಡಾ.ಭಾರತಿ ಹಿರೇಮಠ ಅಭಿಪ್ರಾಯಪಟ್ಟರು.
ಹುಬ್ಬಳ್ಳಿಯ ’ನಾಗಸುಧೆ ಕಾವ್ಯ ಜಗಲಿ’ಯ ’ಕವಿ ಕಾವ್ಯ ಮಂಥನ’ ಕಾರ್ಯಕ್ರಮದ ಪೂರ್ವದಲ್ಲಿ ತಿಂಗಳ ಅತಿಥಿಯಾಗಿ ಮಾತನಾಡುತ್ತಾ ಹಿರಿಯ ಲೇಖಕಿ ಡಾ. ಭಾರತಿ ಹಿರೇಮಠ ಅವರು ಕವಿ ಗೋಪಾಲಕೃಷ್ಣ ಅಡಿಗರ ಬದುಕು ಬರಹ ಕುರಿತು ಸವಿವರವಾಗಿ ವಿಶ್ಲೇಷಿಸಿದರು. ನಂತರ ಅಡಿಗರ ಆಯ್ದ ೬ ಕವಿತೆಗಳಾದ ಕೃತಿ ಮಗು, ಎಲೆ ಕವಿ, ಶೋಷಣೆ, ನೆಲ ಸಪಾಟಿಲ್ಲ, ಸಮಾಜ ಭೈರವ ಮುಂತಾದ ಕವಿತೆಗಳ ವಾಚನ ಚರ್ಚೆ ಸಂವಾದಗಳು ಮೂರು ಗಂಟೆಗಳ ಕಾಲ ಸುಧೀರ್ಘವಾಗಿ ನಡೆದವು.
ಅಡಿಗರ ಕವಿತೆಗಳ ವಾಚನದ ನಂತರ ಕವಿ ದೇವು ಮಾಕೊಂಡ ಮಾತನಾಡುತ್ತಾ ’ನಮ್ಮಂಥ ಹೊಸ ಕವಿಗಳಿಗೆ ಪ್ರತಿಮೆಗಳ ಮೂಲಕ ಕಾವ್ಯ ಕಟ್ಟುವ ಶೈಲಿಯನ್ನು ಕಲಿಸಿಕೊಟ್ಟವರು ಅಡಿಗರು’ ಎಂದರು. ಸಹಕವಿಗಳಾದ ರೂಪಾ ಜೋಷಿ ಮತ್ತು ಶಿವಾನಂದ ಉಳ್ಳಿಗೇರಿ ಅಡಿಗರ ಕವಿತೆಗಳನ್ನು ಪ್ರಸ್ತುತಪಡಿಸಿದರು.
ಪ್ರಕಾಶ ಕಡಮೆ ಅಡಿಗರ ’ಬಿಡುಗಡೆಯ ?ಹಾಡು? ಕವಿತೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುನಂದಾ ಕಡಮೆ ’ಕವಿ ಕಾವ್ಯ ಮಂಥನ’ ಕಾರ್ಯಕ್ರಮವನ್ನು ಸಂಯೋಜಿಸಿ ವಂದಿಸಿದರು. ಎಂ ಬಿ ಅಡ್ನೂರ, ಚನ್ನಪ್ಪ ಅಂಗಡಿ, ಸಿ.ಎಂ ಮುನಿಸ್ವಾಮಿ,ಮಮತಾ ಹೊರಕೇರಿ, ಗಾಯತ್ರಿ ರವಿ, ನಿರ್ಮಲಾ ಶೆಟ್ಟರ್, ವಿರುಪಾಕ್ಷ ಕಟ್ಟೀಮನಿ, ಶಂಕರಗೌಡ ಸಾತ್ಮಾರ. ಅರುಣಕುಮಾರ ಹಬ್ಬು, ವ್ಯಾಸ ದೇಶಪಾಂಡೆ, ಸುಜಾತಾ ಹೆಬ್ಬಾಳ, ವೈಭವ ಪೂಜಾರಿ, ರವಿಶಂಕರ ಗಡಿಯಪ್ಪನವರ, ಸುರೇಶ ಹೊರಕೇರಿ, ಗುರುಸಿದ್ದಪ್ಪ ಬಡಗೇರ, ರಾಮಚಂದ್ರ ಪತ್ತಾರ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
0 ಪ್ರತಿಕ್ರಿಯೆಗಳು