ಬಿ ಎಂ ಬಷೀರ್
ಶಿವಮೊಗ್ಗದ ಪತ್ರಕರ್ತರಿಗೆ ಕಾಮ್ರೇಡ್ ಎಂ. ಲಿಂಗಪ್ಪ ಹೆಸರು ಚಿರಪರಿಚಿತ.
ತನ್ನ 90ನೆ ವರ್ಷದಲ್ಲೂ ತನ್ನ ಎರಡು ಪುಟದ ‘ಕ್ರಾಂತಿ ಭಗತ್’ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವವರು. ಸುಮಾರು ಮೂರು ದಶಕಗಳ ಕಾಲ ಅದನ್ನು ನಡೆಸುತ್ತಾ ಬಂದಿದ್ದಾರೆ.. ಮಾತು ಮಾತಿಗೆ ಇವರು ಕ್ರಾಂತಿಯನ್ನೇ ಘೋಷಣೆ ಮಾಡುವವರು. ಒಂದಾನೊಂದು ಕಾಲದಲ್ಲಿ ಜಾರ್ಜ್ ಫೆರ್ನಾಂಡಿಸ್ ಜೊತೆಗೆ ಓಡಾಡಿದವರಂತೆ. ಮರಾಠಿ ಕ್ರಾಂತಿಗೀತೆಗಳನ್ನು ಹಾಡುತ್ತಿದ್ದರು.
ಆದರೆ ಇವರು ಹಾಡಲು ಬಾಯಿ ತೆರೆದರೆ, ಉಳಿದ ಯುವಕರು ಅವರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಾರೆ. ಲಿಂಗಪ್ಪ ಮಾತನಾಡಲು ಶುರು ಹಚ್ಚಿದರೆ ಅದಕ್ಕೆ ನಿಲ್ದಾಣವೇ ಇರುತ್ತಿರಲಿಲ್ಲ. ಆದುದರಿಂದ ಇವರನ್ನು ಯಾರೂ ಬಾಯಿ ತೆರೆಯಲು ಬಿಡುತ್ತಿರಲಿಲ್ಲ. ಒಂದು ರೀತಿಯಲ್ಲಿ ಅವರೊಂದು ಅಸಹಾಯಕ, ಅಪ್ರಸ್ತುತ ಒಂಟಿ ದನಿ. ಅದು ಅವರಿಗೇ ಗೊತ್ತಿಲ್ಲ.
ಅದು ಬಿಜೆಪಿ ರಾಜ್ಯವನ್ನು ಆಳುತ್ತಿದ್ದ ಸಂದರ್ಭ. ಕೆಲವು ಸಾಹಿತಿಗಳನ್ನು, ಹೋರಾಟಗಾರರನ್ನು ಅಂದಿನ ಬಿಜೆಪಿ ಸರಕಾರ “ನಕ್ಸಲ್ ಬೆಂಬಲಿಗರು” ಎಂದು ಘೋಷಿಸಿ ಪಟ್ಟಿ ಬಿಡುಗಡೆ ಮಾಡಿದ ಸಂದರ್ಭ. ಪಟ್ಟಿಯಲ್ಲಿ ಕಡಿದಾಳ್ ಶಾಮಣ್ಣರ ಹೆಸರು ಇತ್ತು. ಪಟ್ಟಿಯನ್ನು ಓದಿದ ಲಿಂಗಪ್ಪ ಸಿಕ್ಕಾಪಟ್ಟೆ ಕೆರಳಿದರಂತೆ. ಯಾಕೆಂದರೆ ಪಟ್ಟಿಯಲ್ಲಿ ಲಿಂಗಪ್ಪ ಅವರ ಹೆಸರೇ ಇದ್ದಿರಲಿಲ್ಲ.
ತನ್ನನ್ನು ಘಂಟಾ ಘೋಷವಾಗಿ ಕ್ರಾಂತಿಕಾರಿ ಎಂದು ಸ್ವಯಂ ಘೋಷಿಸಿಕೊಂಡಿದ್ದ ಲಿಂಗಪ್ಪ ಅವರಿಗೆ ಸಿಕ್ಕಾ ಪಟ್ಟೆ ಅವಮಾನ ಆಗಿತ್ತು . ಒಂದು ದಿನ ಶಿವಮೊಗ್ಗಕ್ಕೆ ಅಂದಿನ ಸಚಿವ ಈಶ್ವರಪ್ಪ ಆಗಮಿಸಿದಾಗ ಅವರನ್ನು ತಡೆದು ನಿಲ್ಲಿಸಿದ ಲಿಂಗಪ್ಪ ‘‘ನನ್ನ ಮೇಲೆ ಯಾಕೆ ನಕ್ಸಲ್ ಬೆಂಬಲಿಗ ಎಂದು ಕೇಸು ದಾಖಲಿಸಿಲ್ಲ?’’ ಎಂದು ಸಿಕ್ಕಾ ಪಟ್ಟೆ ತರಾಟೆಗೆ ತೆಗೆದುಕೊಂಡರಂತೆ. ಅವರನ್ನು ಸಮಾಧಾನಿಸಲು ವಿಫಲರಾದ ಈಶ್ವರಪ್ಪ ಕೈ ಮುಗಿದು ‘‘ಲಿಂಗಪ್ಪ ಅವರೇ, ನಿಮ್ಮ ಮೇಲೂ ಕೇಸು ದಾಖಲಿಸಲಾಗುತ್ತದೆ. ಪೊಲೀಸರು ಭರವಸೆ ನೀಡಿದ್ದಾರೆ. ಬೇಗನೆ ನಿಮ್ಮನ್ನೂ ಬಂಧಿಸುತ್ತೇವೆ’’ ಎಂದ ಬಳಿಕವಷ್ಟೇ ಲಿಂಗಪ್ಪ ನಿರುಮ್ಮಳರಾದರಂತೆ.
ಇತ್ತೀಚಿಗೆ ಕೇಂದ್ರ ಸರಕಾರ ತನ್ನ ವಿರುದ್ಧ ಮಾತನಾಡಿದವರನ್ನೆಲ್ಲ ದೇಶದ್ರೋಹಿ ಎಂದು ಕರೆದು ಪ್ರಕರಣ ದಾಖಲಿಸೋದು ಕಂಡು ಲಿಂಗಪ್ಪ ಯಾಕೋ ನೆನಪಾದರು
0 ಪ್ರತಿಕ್ರಿಯೆಗಳು