ಸವಿತಾ ನಾಗಭೂಷಣ ಹೊಸ ಕವಿತೆ- ಊಟದ ತಾಟಿನಲ್ಲಿ
ಸವಿತಾ ನಾಗಭೂಷಣ
ಚಿತ್ರ: ಹಜರತ್ ಅಲೀ
ಮಿಡಿ ಉಪ್ಪಿನ ಕಾಯಿ, ಹೆಸರುಬೇಳೆ, ಸೌತೆಕಾಯಿ ಲಿಂಬೆ,
ತೆಂಗು, ಸಾಸಿವೆ, ಕರಿಬೇವು ಹಸಿ ಮೆಣಸು ಹಾಕಿದ ಘಮ್ಮನೆ ಪರಿಮಳ ಸೂಸುವ ಕೋಸಂಬರಿ.
ಹುರುಳಿ ಕಾಯಿಯ ಪಲ್ಯ,
ಬೆಂಡೆಕಾಯಿ ಗೊಜ್ಜು.
ಬದನೆ ನೀರುಳ್ಳಿ ಆಲೂ ಹಾಕಿದ ಸಾಂಬಾರು- ಅದರಲ್ಲಿ ಉದ್ದು, ಕಡಲೆ, ಕೊತ್ತಂಬರಿ ಬೀಜ, ಮೆಣಸು, ಮೆಂತೆ, ಒಣಮೆಣಸು, ಕೊಬ್ಬರಿ ಹುರಿದು ಹಾಕಿದ ಪುಡಿಯ ಘಮ!
ಬೆಳ್ಳುಳಿ ಒಗ್ಗರಣೆ ಹಾಕಿರುವ ಹುಣಿಸೆ ಸಾರು
ಬೆಲ್ಲ, ತೆಂಗು, ದ್ರಾಕ್ಷಿ, ಏಲಕ್ಕಿ,
ತುಪ್ಪದ ಗೋಧಿಯ ಹುಗ್ಗಿ
ಹಾಲಿನ ಕೀರು
ಕೊತ್ತಂಬರಿ ಸೊಪ್ಪು-
ಹಸಿ ಶುಂಠಿ ಬೆರೆಸಿದ ಮಜ್ಜಿಗೆ
ಮಲ್ಲಿಗೆ ಹೂವಿನಂತಹ ಅನ್ನ
ಜೋಳದ ರೊಟ್ಟಿ-ತುಂಡು ಹಸಿ ನೀರುಳ್ಳಿಯಲ್ಲೂ
ರಾಗಿಯ ಮುದ್ದೆ- ಉಪ್ಪೆಸರಿನಲ್ಲೂ…
ಗೋಧಿಯ ರೊಟ್ಟಿ- ದಾಲ್ ನಲ್ಲೂ…
ಬಾಡೂಟ, ಬಿರಿಯಾನಿ…
ಭೂರಿ ಭೋಜನದಲ್ಲೂ…
ಉಪ್ಪು-ಗಂಜಿ-ಉಪ್ಪಿನಕಾಯಲ್ಲೂ
ಒಂದೊಂದು ಅಗುಳಿನಲ್ಲೂ ನೀನೇ ಇರುವೆ
ಊಟದ ತಾಟಿನ ತುಂಬಾ
ನೀನೇ ಕಾಣುವೆ !
ಓ ರೈತನೇ ಮೊದಲ ತುತ್ತು ನಿನಗೇ ಅರ್ಪಣೆ
0 ಪ್ರತಿಕ್ರಿಯೆಗಳು