-ಮೌನೇಶ ನವಲಹಳ್ಳಿ
ನೆಲದ ಬೆಳಗು
ರಸ್ತೆಯ ಸೆರಗಿನಲಿ
ರೊಕ್ಕದ ಮಾಲು
ನನ್ನ ಮನೆ ಹೊಲ ದಾರಿ ಮಣ್ಣು ಕಲ್ಲು
ಮಹಲುಗಳಲಿ ಮಹಾರಾಜರ ಸಂತೆ
ನಮ್ಮವರ ಮಡಿಲಲಿ ಗುಡುಗು ಮಳೆ ಚಿಂತೆ
ಹೂಂಕರಿಸಿ ಝೇಂಕರಿಸಿ
ಗದ್ದುಗೆಯನೇರಿ
ಜನರ ಜೇನ್ಗೂಡಿಗೆ ಕಡ್ಡಿಯ ಗೀರಿ
ಇವರ ತಾಟಿನಲಿ ನಮ್ಮ ಪಾಲಿನ ತುಪ್ಪ
ಸೇವಕರು ನಾವೆಂದು ಹೇಳಿದರು ತಪ್ಪ
ಆಮಿಷಕೆ ವಶವಾಗಿ
ಅಭಿಮಾನ ಮರೆಯಾಗಿ
ಜೈ ಜೈಕಾರ ಕೂಗಿದೆವು ಕುರಿಯಾಗಿ
ನರಿಯಾಗಿ ಮರಿಯಾಗಿ ಅವರಿಗೆ ಮೆಟ್ಟಾಗಿ
ಪುಂಡ ಪುಡಿಯಾದೆವು ಅವರ ಮನೆ ವಾರ್ತೆಗೆ
ಈಗ ಎದ್ದೇಳದಿದ್ದರೇ
ಬಲಿ ಜಾತ್ರೆ ಮರುಗಳಿಗೆ
ಕಾಯುತಿರುವರು ನಮ್ಮ ಮಕ್ಕಳು ಮರಿಗೆ
ನಮ್ಮ ತಲೆ ತೀಡಿ ಎದೆಗೆ ಬೇಧವ ಹೂಡಿ
ಬೆಂಕಿ ಇಕ್ಕುವರು ನಮ್ಮ ಹಕ್ಕುಗಳಿಗೆ
ಬಿಡತೀವ ಅವರ ಜೀತವ
ಪ್ರಜೆಯಾಗಿ ಪಡಿತೀವಿ ಮರು ಜೀವ
ನನ್ನ ಮನೆ ನನ್ನೂರು ನನ್ನದೀ ದೇಶ
ನನ್ನಿಯ ನುಡಿಲಾರೆ ಪುಡಿಕಾಸಿಗೆ
ನಮ್ಮದಾರಿಗೆ ನಾವೇ ನೆರಳ ಎಣೆಯುವೆವು
ಆಳಲಾರೆವು ನಾವು
ಬೆಳಗುವೆವು ನೆಲವ






ಅರ್ಥಗರ್ಭಿತ ಕವಿತೆ ಮೌನೇಶ್