ಮೂಲ : ಅಭಿನಂದನ್ ಗುಪ್ತಾ
ಕನ್ನಡಕ್ಕೆ : ಸಿಕಂದರ್ ಅಲಿ ತೋರಣಗಲ್ಲು
”ನಾನು ಅಪರಾಧಿಯಾಗುವೆನೆ ?
ನನ್ನ ಮೇಲೆ ಯಾವ ಆರೋಪ ಹೊರಿಸಬಹುದು ?
ಹಸಿರು ಬಣ್ಣದಿಂದ ‘ಹಿಂದೂ’ ಬರೆದು, ಕೇಸರಿಯಲಿ ‘ಇಸ್ಲಾಂ’ ಎಂದು ಬರೆದರೆ ?
ಅಥವಾ ಎಲ್ಲರೂ ಒಂದೇ ಎಂದು ಹೇಳಿದರೆ ?
ಅವತಾರ, ದೇವದೂತ, ಪ್ರವಾದಿ
ಮುಂಜಾವು, ಮಧ್ಯಾಹ್ನ ಮತ್ತು ಸಂಜೆ—ಎಲ್ಲವೂ ಒಂದೇ
ವಿಷ, ಜೇನು ಮತ್ತು ಮದ್ಯ—ಎಲ್ಲವೂ ಒಂದೇ
ಸೂರ್ಯ, ಚಂದ್ರ ಮತ್ತು ರಾತ್ರಿ ಒಂದೇ,
ಮೋಡ ಮತ್ತು ಮಳೆ ಹನಿಗಳು ಒಂದೇ,
ನೀರು ಒಂದೇ, ಗಾಳಿ ಒಂದೇ,
ಕಾಯಿಲೆ ಬಂದರೆ… ಗುಣಪಡಿಸುವ ಔಷಧಿ ಒಂದೇ.
ಆದರೆ ಎಲ್ಲರ ರಕ್ತ ಬೇರೆ ಬೇರೆಯೇನೋ? ಅಲ್ಲವೇ?
ಹನಿ ಹನಿಯಲ್ಲೂ ವ್ಯತ್ಯಾಸವಿದೆ ಬಹುಶಃ ?
ಒಬ್ಬರದ್ದು ಬಿಸಿ, ಇನ್ನೊಬ್ಬರದ್ದು ತಂಪು,
ಒಬ್ಬರದ್ದು ಶ್ರೇಷ್ಠ, ಇನ್ನೊಬ್ಬರದ್ದು ಕನಿಷ್ಟ?
ಒಬ್ಬರದ್ದು ದುಬಾರಿ, ಇನ್ನೊಬ್ಬರದ್ದು ಅಗ್ಗ?
ಒಬ್ಬರದ್ದು ರೇಷ್ಮೆಯಂತೆ, ಇನ್ನೊಬ್ಬರದ್ದು ಒರಟು ?
ಬೇರೆಯೇ ಆಗಿದ್ದರೆ ಅದಕ್ಕೊಂದು ಬೇರೆ ಬಣ್ಣ ನೀಡಿಬಿಡಿ,
ಎಲ್ಲರ ರಕ್ತ ಕೆಂಪಗಿರುವಾಗ, ‘ಬೇರೆ’ ಎನಿಸುವುದು ಹೇಗೆ?
ರಕ್ತ ಹರಿಯುವುದು ಕೆಟ್ಟ ವಿಷಯ,
ಯುದ್ಧ ಮಾತ್ರ ಪವಿತ್ರ ಹೇಗೆ?
ನಾನು ಒಂದು ವೇಳೆ ‘ಅವನು’ (ದೇವರು) ಇಲ್ಲವೇ ಇಲ್ಲ ಎಂದುಬಿಟ್ಟರೇ?
ಅವನು ಇರಲಿಲ್ಲ, ಮುಂದೆಯೂ ಇರುವುದಿಲ್ಲ ಎಂದು ಸಾರಿ-ಸಾರಿ ಹೇಳಿಬಿಟ್ಟರೇ?
ಆಗ ಧರ್ಮದ ಹೆಸರಲ್ಲಿ ಈ ಯುದ್ಧಗಳಿರುವುದಿಲ್ಲ
ಇದಕ್ಕೆ ಕಾರಣವಾಗುವ ಬಣ್ಣಗಳೂ ಇರುವುದಿಲ್ಲ.
ಹೌದು,
ಆಗ ಚರ್ಚೆಗಳು ನಡೆಯುವುದು ಪರಿಸ್ಥಿತಿಗಳ ಮೇಲೆ,
ಎಲ್ಲರೂ ಗಮನ ಹರಿಸುವುದು ಕೇವಲ ವಿಚಾರಗಳ ಮೇಲೆ.
ಆಮೇಲೆ ಏನೇನಾಗುತ್ತದೋ ತಿಳಿಯದು,
ಆದರೆ ಖಂಡಿತವಾಗಿಯೂ ಹೊಸದೊಂದು ಸಂಭ್ರಮವಿರುತ್ತದೆ.
ಪ್ರತಿ ಗಡಿಯೂ ದಾಹದಿಂದ ಬತ್ತಿ ಸತ್ತು ಹೋಗುತ್ತದೆ,
ಎಲ್ಲಾ ತಾಯಂದಿರು ತಮ್ಮ ಮಕ್ಕಳ ಜೊತೆ ನೆಮ್ಮದಿಯಿಂದ ಇರುತ್ತಾರೆ.”






0 Comments