–ಶೃತಿ ಮೇಲುಸೀಮೆ
ಮೈಲಿಗೆಯ ಮುದ್ರೆ
ಮುಗಿಲು ಮಳೆ ಸುರಿಸಿದರೆ
ಪವಿತ್ರತೆ ಎನ್ನುತ್ತಾರೆ,
ದೇಹ ಜೀವ ಹುಟ್ಟಿಸಲು
ರಕ್ತ ಹರಿಸಿದರೆ
ಮೈಲಿಗೆ ಎನ್ನುತ್ತಾರೆ…
ತಿಂಗಳು ತಿಂಗಳಿಗೊಮ್ಮೆ
ಪ್ರಕೃತಿ ಕೊಡುವ ಸಂಕೇತ
ಅವಳಿಗೆ ಶಾಪವಾಯಿತೇ?
ಅಥವಾ
ಸಮಾಜದ ಕಣ್ಣು ಕತ್ತಲಾಯಿತೇ?
ಅಡುಗೆ ಮನೆಗೆ ಬೇಡ,
ಪೂಜೆಗೆ ಬೇಡ,
ಸ್ಪರ್ಶ ಬೇಡ,
ಸಾನ್ನಿಧ್ಯ ಬೇಡ—
ಹೆಣ್ಣೇ ನೀನು ಬೇಡ!
ಮಗುವಿಗೆ ಜನ್ಮ ಕೊಡುವ ಗರ್ಭ
ಪವಿತ್ರ ಅಲ್ಲವೇ ?
ಅದೇ ಗರ್ಭದ ರಕ್ತ
ಅಪವಿತ್ರ ಹೇಗೆ ?
ಮೌನವಾಗಿ ಸಹಿಸುತ್ತಾಳೆ,
ಆದರೂ ತಲೆ ಎತ್ತಿ ನಿಂತು
ನೋವನ್ನೇ ನಗು ಮಾಡಿಕೊಳ್ಳುತ್ತಾಳೆ,
ಸ್ವಾಭಿಮಾನ ಕಳೆದುಕೊಳ್ಳದೆ
ತನ್ನೊಳಗೆ ತಾನೇ ಬೆಂಕಿ ಹಚ್ಚಿಕೊಳ್ಳುತ್ತಾಳೆ.
ಇದು ಮೈಲಿಗೆ ಅಲ್ಲ—
ಇದು ಜೀವದ ಚಕ್ರ,
ಸೃಷ್ಟಿಯ ಸತ್ಯ,
ಹೆಣ್ಣಿನ ಶಕ್ತಿ.
ಒಂದು ದಿನ
ಅವಳ ರಕ್ತವನ್ನೇ
ಲಾಲಿತ್ಯ ಎಂದು ಕರೆಯುವ ದಿನ
ಬರಲೇಬೇಕು…
ಆ ದಿನದವರೆಗೂ
ಅವಳ ನೋವಿಗೆ
ನಮ್ಮ ಮೌನವೇ
ಅತಿ ದೊಡ್ಡ ಅಪವಿತ್ರತೆ…






0 Comments