ಮಹತ್ವದ ‘ನಾನು ಮೆಚ್ಚಿದ ನನ್ನ ಕಥೆ’

ಸಂಪಾದಕರು: ಸ.ರಘುನಾಥ, ಆರ್. ವಿಜಯರಾಘವನ್

‘ನಿವೇದಿತಾ ಪ್ರಕಾಶನ’ದ ಹೆಮ್ಮೆಯ ಪ್ರಕಟಣೆ ‘ನಾನು ಮೆಚ್ಚಿನ ನನ್ನ ಕತೆ’.

ನಾಲ್ಕು ಸಂಪುಟಗಳಲ್ಲಿ ಸಮಕಾಲೀನ ಕತೆಗಾರರ ಸುಮಾರು 150 ಕತೆಗಳು ಈ ಮಾಲೆಯಲ್ಲಿದೆ.

ಸ ರಘುನಾಥ್ ಹಾಗೂ ಆರ್ ವಿಜಯರಾಘವನ್ ಅವರು ಸಂಪಾದಿಸಿರುವ ಈ ಮಹತ್ವದ ಕೃತಿಯ ಬಗ್ಗೆ ಒಂದು ಕಣ್ಣೋಟ ಇಲ್ಲಿದೆ.

ಕೃತಿಯನ್ನು ಕೊಳ್ಳಲು-

ನಿವೇದಿತ ಪ್ರಕಾಶನ :
ನಂ. 3437, (1ನೇ ಮಹಡಿ), 4ನೇ ಮುಖ್ಯರಸ್ತೆ,
9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ
2ನೇ ಹಂತ, ಬೆಂಗಳೂರು-28
ಫೋನ್: 9448733323

ಕನ್ನಡ ಸಣ್ಣಕಥೆ ಸರಿಸುಮಾರು ಒಂದುನೂರ ಇಪ್ಪತ್ತೈದು ವರ್ಷಗಳ ಇತಿಹಾಸವನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಖಲಿಸಿಕೊಳ್ಳಲಿದೆ. 21ನೇ ಈ ಶತಮಾನದ ಎರಡನೇ ದಶಕದ ಕೊನೆಕೊನೆಯ ವರ್ಷಗಳವರೆಗಿನ ಸಾಹಿತ್ಯ ಚರಿತ್ರೆ ಬರೆಯುವುದಾಗಬೇಕಿದೆ. ಆ ಪ್ರವಾಹ ಕಾಲವಾಹಿನಿಯ ಮುಂದುವರಿಯುತ್ತಲೇ ಇರುವ ಹರಿವಾಗಿದೆ. ಈ ಹರಿವನ್ನು ಗುರುತಿಸಲು ಸಾಹಿತ್ಯಕ ಕಾಲ ಕನ್ನಡ ವಿಮರ್ಶೆಯನ್ನು ಕೂಗಿ ಕರೆಯುತ್ತಿದೆ. ಈ ಮಹತ್ಕಾರ್ಯ ಯಾರಿಂದ ನೆರವೇರಲಿದೆ ಎಂಬುದಕ್ಕೂ ಈ ಕಾಲ ಕಾಯುತ್ತಿದೆ. ಈ ಕಾಯುವಿಕೆಗೆ ಕಾರಣ ಪರಸ್ಪರರ ಓದಿನಲ್ಲಿ ನಿರ್ಮಾಣವಾಗಿರುವ ಆಳ ಕಂದರ. ಈ ಸನ್ನಿವೇಶದಲ್ಲಿ ಇದು ಬಹುದೊಡ್ಡದೂ, ಅಗತ್ಯವಾದುದೂ ಆದ ಕೆಲಸವಾಗಿದೆ.

ಕನ್ನಡ ನವೋದಯ, ಪ್ರಗತಿಶೀಲ, ನವ್ಯಸಾಹಿತ್ಯಗಳ ಕಾಲಘಟ್ಟದಲ್ಲಿ ಬಂದ ಕತೆಗಾರರ ಸಂಖ್ಯೆಯ ಹಲವುಪಟ್ಟು ಅಧಿಕ ಕತೆಗಾರರು ಬಂಡಾಯ-ದಲಿತ ಸಾಹಿತ್ಯೋದಯ ಕಾಲದಲ್ಲಿ ಹುಟ್ಟಿಬಂದರು. ತುರ್ತುಪರಿಸ್ಥಿತಿಯ ಅಂತ್ಯದ ಬಳಿಕ ಆದ ಭಾರತ ವಿಮೋಚನೆಯ ನಂತರವಂತೂ ಕನ್ನಡ ಸಾಹಿತ್ಯದ ತುಂಬ ಸರಳುಗಳು, ಬೂಟುಕಾಲುಗಳು ತುಂಬಿಹೋದವು.

ಇಂಥ ಅಸೂಕ್ಷ್ಮ ಕಸುಬುಗಾರಿಕೆಯು ಬಂಡಾಯ-ದಲಿತ ಚಳವಳಿಗಳಲ್ಲಿ ಕೂಡಾ ಮುಂದುವರಿದುದನ್ನು ನಾವು ಗಮನಿಸಬಹುದು. ಆದರೆ ಈ ಅಭಿವ್ಯಕ್ತಿಯ ಪ್ರಕ್ಷುಬ್ಧತೆಯ ನಡುವೆಯೂ ಕನ್ನಡದಲ್ಲಿ ಈ ಸರಣಿಗೆ ವಿರುದ್ಧವಾದ ಕತೆಗಳು ಸೃಷ್ಟಿಯಾದವು. ಲಿಂಗಬೇಧ, ಜಾತಿಬೇಧ, ಅಂತಸ್ತಿನ ಬೇಧಗಳನ್ನು ಹಿನ್ನೆಲೆಯಾಗಿಟ್ಟು ಬರೆದುಕೊಂಡು ಬಂದ ಕತೆಗಾರರು ಅದನ್ನೊಂದು ಯುಗವೆಂದು ಹೆಸರಿಸಬಹುದಾದಷ್ಟು ಕಥೆಗಳನ್ನು ರಚಿಸಿದ್ದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಲ್ಲಗಳೆಯಲಾಗದ ವಿದ್ಯಮಾನ.

ಇದರಿಂದ ಹೊಸ ಕತೆಗಾರರ ಅಭಿವ್ಯಕ್ತಿಗೆ ಅವಕಾಶ ದೊರೆತು ಸಣ್ಣಕಥೆಗಳ ಲೋಕ ವಿಸ್ತರಿಸಿಕೊಳ್ಳಲು ಕಾರಣವಾಯಿತು. ಯಾವೆಲ್ಲ ಭಾಷೆಗಳು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಜೀವಂತ ಹರಿವನ್ನು ಉಳಿಸಿಕೊಂಡಿರುತ್ತದೆಯೋ ಆ ಎಲ್ಲ ಭಾಷೆಗಳಲ್ಲಿಯೂ ಇದು ಸಂಭವವೇ ಆದುದು. ಇದು ಕನ್ನಡಕ್ಕಷ್ಟೇ ಸೀಮಿತವಾದುದಲ್ಲ.

ಕಾವ್ಯದಲ್ಲಿ ಉಕ್ಕಿ ಹೊನಲಾಗಿ ಹರಿದ ನವೋದಯ ಕತೆಗಾರಿಕೆಯಲ್ಲೂ ಬಹು ಮುಖ್ಯ ನದಿಯಾಗಬಹುದೆಂಬ ನಿರೀಕ್ಷೆಯಲ್ಲಿರುವಾಗಲೇ ತನ್ನ ಏರುಗತಿಯನ್ನು ತಗ್ಗಿಸಿಕೊಳ್ಳುತ್ತ ಹೋಗಿ ಪ್ರಗತಿಶೀಲ ಮಳೆಗಾಲದ ಉಪನದಿಯಾಗಿ ಸೇರಿಕೊಂಡು ಹರಿಯಿತು. ಆಗ ಹುಟ್ಟಿದ ನವ್ಯವು ಒಂದು ಸ್ವತಂತ್ರ ನದಿಯಾಗಿ ಹರಿಯುತ್ತ ಬಂದಿದೆ. ನವ್ಯೋತ್ತರವೆಂಬ ಹೆಸರಿನ ದೋಣಿಯಲ್ಲಿ ಈ ಎಲ್ಲದರ ಯಾನ ಮುಂದುವರೆದರೂ ಇದೇ ಅಭಿಧಾನದ ಮುಂದುವರಿಕೆಯಾಗಲಿಲ್ಲ. ಬದಲಿಗೆ ಅದು ಈವರೆಗಿನ ಕಥನ ಪರಂಪರೆಯ ಎಲ್ಲ ಸತ್ತ್ವವನ್ನೂ ಅರಗಿಸಿಕೊಂಡು ಬೆಳೆಯುತ್ತಲಿದೆ.

ಚಳವಳಿಗಳ ಪ್ರವಾಹದ ಸೆಳವು ಕುಗ್ಗುತ್ತ ಹೋದಂತೆಲ್ಲ ಸಾಹಿತ್ಯ ಹೊಸದಿಕ್ಕನ್ನು ಕಂಡುಕೊಳ್ಳಲು ಹುಡುಕಾಟ ನಡೆಸುತ್ತದೆ. ಹೀಗೆ ವಿದ್ಯಮಾನಗಳು ಘಟಿಸುತ್ತಿದ್ದಾಗ ಜಾಗತೀಕರಣದ ಬಿರುಗಾಳಿ ಬೀಸಿ ಬಂದಿತು. ಚದುರಿದ ಆಲೋಚನೆಗಳನ್ನು ಇದು ವ್ಯಾಪಾರೀಕರಣಗೊಳಿಸಿತು. ವಾದ, ಸಿದ್ಧಾಂತಗಳಿಗೆ ಧ್ವನಿಕೊಡುತ್ತಿದ್ದ ಅಕ್ಷರವನ್ನು ಕಾಂಚಾಣದ ಝಣತ್ಕಾರ ತನ್ನದಾಗಿಸಿಕೊಂಡಿತು.

ಅಕ್ಷರ ಮಾರಾಟಕ್ಕೆ ನಾವು ಸಿದ್ಧರಾದೆವು. ಕೃಷಿಯೂ ಸೇರಿದಂತೆ ಸಾಹಿತ್ಯವೂ ವಾಣಿಜ್ಯೀಕರಣಕ್ಕೆ ಒಳಗಾದುದೂ ಉಂಟು. ಕೆಲವು ಬರಹಗಾರರನ್ನು ಹೊರತುಪಡಿಸಿದರೆ ಅನೇಕರು ಈ ಪರಿಣಾಮದಿಂದ ಹೊರಬರುವ ಪ್ರಯತ್ನದಲ್ಲಿ ಹುಡುಕಿಕೊಂಡುದು ‘ಇಸಂ’ಗಳ ಆಚೆಗೆ ಇರುವ ಸ್ವಾತಂತ್ರ್ಯವನ್ನು. ಹೊಸ ತಲೆಮಾರಿನ ಕತೆಗಾರರಿಗೂ ಇದು ಮಾರ್ಗವಾಯಿತು.

ಸ್ವತಂತ್ರ ಮನೋಭಾವಕ್ಕೆ ದಕ್ಕಿದ ಜಾಗತೀಕರಣದ ಅನುಭವ, ಭಿನ್ನ ಸಾಮಾಜಿಕ ಪ್ರಜ್ಞೆ, ಗ್ರಹಿಕೆಯ ತೆಕ್ಕೆಗೆ ಬಂದ ರಾಜಕೀಯ, ಸಾಮಾಜಿಕ, ಆರ್ಥಿಕ ಜೀವವಿಧಾನಗಳು, ಶಿಕ್ಷಣ ಕಟ್ಟಿತಂದ ಜ್ಞಾನ-ವಿಜ್ಞಾನ ಇವರಲ್ಲಿ ವಿಶ್ವಪ್ರಜ್ಞೆಯನ್ನು ವಿಸ್ತರಿಸಿತಷ್ಟೇ ಅಲ್ಲ, ಪಶ್ಚಿಮದ ಪ್ರಭಾವದ ಎಲ್ಲ ಖಾಸಗೀ ಅನುಭವಗಳಿಗೂ ಮಾತು ದೊರೆಯಲಾರಂಭಿಸಿತು.

ಮಾತಿಗಿದ್ದ ಮುಜುಗರ ಕಡಿಮೆಯಾಯಿತು. ಈ ಎಲ್ಲ ಅರಿವನ್ನು ಈ ತಲೆಮಾರಿನ ಲೇಖಕರು ದಕ್ಕಿಸಿಕೊಳ್ಳುತ್ತ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳತೊಡಗಿದರು. ಕತೆಗಾರರಿಗೆ ಇದು ಶಕ್ತಿದ್ರವ್ಯವಾಯಿತು. ಇಂದು ಕನ್ನಡ ಸಣ್ಣ ಕಥೆಯೆಂದರೆ ಕತೆಗಾರನ ಬದುಕು ಮತ್ತು ಜಗತ್ತಿನ ಜೀವನೆಲೆಗಳ ಹುಡುಕಾಟ ಹಾಗು ಮೌಲ್ಯಗಳ ಪ್ರತಿಪಾದನೆ. ಇದಕ್ಕೆ ಉರವಲು ಸ್ವತಂತ್ರ ಮನೋಭಾವ, ಮುಕ್ತತೆ, ಹಾಗು ಅಭಿವ್ಯಕ್ತಿಯ ಲವಲವಿಕೆ. ಇದರೊಟ್ಟಿಗೆ ಕಂಡುಬರುವುದೆಂದರೆ ದೇವನೂರ ಮಹದೇವರು ಹೇಳಿದ ‘ನೆಲಕ್ಕೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಕರ ಎಂದಿಗೂ ವ್ಯರ್ಥವಲ್ಲ’ ಎಂಬ ನುಡಿಯಲ್ಲಿ ಸಾಮಾನ್ಯವೆನಿಸುವ, ಆದರೆ ಚಿಂತನೆಯಲ್ಲಿ ಅಸಾಮಾನ್ಯವೆನಿಸುವ ಅರಿವಿನಲ್ಲಿನ ನಂಬಿಕೆ.

ಬೇಂದ್ರೆ ಹೇಳಿದಂತೆ ಕನ್ನಡ ಕಾವ್ಯ ಹುಟ್ಟಿದ್ದು ‘ನಲ್’ ಧಾತುವಿನಿಂದ. ಇದು ಕನ್ನಡ ಸಣ್ಣಕಥೆಗಳಿಗೂ ಅನ್ವಯವಾಗುವ ಮಾತು. ಮಾಸ್ತಿಯವರ ಸಣ್ಣಕಥೆಗಳು ಈ ಮಾತನ್ನು ಸಮರ್ಥಿಸುತ್ತವೆ. ಅವರು ತೋರಿದ ಕಥನಸೌಖ್ಯವನ್ನು ಇಂದಿನ ಕಥೆಗಳಲ್ಲಿಯೂ ಮುಂದುವರಿಕೆಯಾಗಿ ಕಾಣುತ್ತೇವೆ.

ಬದುಕಿನ ಹಿತವನ್ನೇ ಯುವಕತೆಗಾರರ ಕಥೆಗಳಲ್ಲಿ ಕಾಣುತ್ತೇವೆ. ಹಿತವೆಂಬುದರಲ್ಲಿ ಸಮಾನತೆಯೂ ಇದ್ದುದ್ದೇ. ಸೌಖ್ಯ ಮತ್ತು ಹಿತಕ್ಕೆ ಲಿಂಗ ಭೇದವಿಲ್ಲ. ಇದು ಸಮಾನತೆಯ ಬೀಜಸಾರ. ವ್ಯಷ್ಟಿ, ಸಮಷ್ಟಿಗಳೆರಡರಲ್ಲಿಯೂ ಇದು ಇದ್ದುದೇ. ಇದು ಮೂಲವಾಗಿ ಅಂದಿಂದಿನ ಕಥೆಗಳಲ್ಲಿ ವ್ಯಕ್ತಿಗತವಾದುದು ಸಾಮಾಜಿಕವೂ ಆಗಿ ಪರಿಣಮಿಸುತ್ತಿದೆ. ಇಂತಹ ಕಥೆಗಳು ಈ ಸಂಕಲನದಲ್ಲಿವೆ.

ಕಾವ್ಯ, ಕಥೆ, ಕಾದಂಬರಿ, ನಾಟಕ, ಹೀಗೆ ವಿಭಾಗಿಸುವುದಕ್ಕಿಂತ ಒಟ್ಟು ಸಾಹಿತ್ಯ ಸೃಜನಗೊಳ್ಳುವುದು ಲೇಖಕನಿಂದಲೇ ಆದರೂ ಅದು ಜನಜೀವನದ್ದು. ಅದು ‘ನನಗಾಗಿ’ ಎಂದರೆ ಅದಕ್ಕೆ ಕಾಲದಲ್ಲಿ ಜೀವನ ಇರದು. ಇದನ್ನು ಕನ್ನಡ ಕತೆಗಾರರು ಬಲ್ಲವರಾಗಿದ್ದಾರೆ. ವಚನಕಾರರು ಹೆಚ್ಚಿಗೆ ಬಳಕೆಗೆ ತಂದ ‘ಹದುಳತನ’ದ ಹಂಬಲವನ್ನು ನಮ್ಮ ಕತೆಗಾರರು ಬಿಟ್ಟುಕೊಟ್ಟಿದ್ದಿಲ್ಲ.

ಇದು ಏಕಕಾಲದಲ್ಲಿ ವೈಯಕ್ತಿಕವೂ ಹೌದು, ಸಾಮಾಜಿಕವೂ ಹೌದು. ಇದು ಕನ್ನಡ ಕತೆಗಾರರು ಕಂಡುಕೊಂಡಿರುವ ನೆಲೆ. ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಕತೆಗಾರರು ಈ ನೆಲೆಯಲ್ಲಿಯೇ ಕಥೆಯ ಕಟ್ಟುಗಾರಿಕೆಯನ್ನು ತೋರಿದ್ದಾರೆ. ಈ ನೆಲೆಯಲ್ಲಿ ಗಾಂಧಿ, ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್ ಮುಂತಾದವರ ಚಿಂತನೆಗಳನ್ನು ಅಷ್ಟೇ ಅಲ್ಲ, ಹೊಸ ಚಿಂತನೆಯನ್ನೂ, ಸ್ತ್ರೀವಾದದಂತಹ ಬೀಜಗಳನ್ನೂ ಉಳಿಸಿಕೊಂಡಿದ್ದಾರೆ.

ಮಾನವೀಯತೆ, ಅದರೊಂದಿಗಿನ ಸಂಬಂಧಗಳನ್ನು ಕನ್ನಡ ಸಾಹಿತ್ಯ ಬಹುದೊಡ್ಡದಾಗಿ ಸ್ವೀಕರಿಸಿದ್ದು ಹೊಸ ಸಂಗತಿಯೇನಲ್ಲ. ಆದರೆ ಅದು ನವೋದಯದ ಆದರ್ಶಯುಗದಿಂದ ಇಂದಿಗೂ ಮುಂದುವರೆದಿದೆ.‌ ಮುಂಬರಿಯುವ ಲಕ್ಷಣಗಳು ಈ ಅತ್ಯಾಧುನಿಕ ಕಾಲದಲ್ಲಿಯೂ ಕಂಡುಬರುತ್ತಿದೆ. ಅಂದರೆ ಇದು ಸಾರ್ವಕಾಲಿಕ ಮೌಲ್ಯವೆಂದು ಕನ್ನಡ ಸಾಹಿತ್ಯಲೋಕ ಸರ್ವಾಂಗೀಕಾರವಾಗಿ ಸ್ವೀಕರಿಸಿದೆ. ಇದರ ನಿರಂತರ ನೋಟವಿರುವುದು ವಿಶ್ವಮಾನವತೆಯಲ್ಲಿ ಎಂಬುದು ಈ ಕಾಲಘಟ್ಟದ ಕತೆಗಾರರಲ್ಲಿಯೂ ಕಂಡುಬರುತ್ತಿದೆ.

ಮೊದಲ ಜಾಗತಿಕ ಯುದ್ಧ ಈ ತಿಳಿಯನ್ನು ಕಲಕಿತು. ಎರಡನೇ ವಿಶ್ವಸಮರ ಈ ಭಾವಮೌಲ್ಯವನ್ನು ಹಿಂಸಿಸಿತು. ಆದರೆ ಕನ್ನಡವೂ ಒಳಗೊಂಡ ಲೋಕಸಾಹಿತ್ಯ ಆ ಆತಂಕ ಹಾಗು ಹಿಂಸೆಗಳನ್ನು ಮೆಟ್ಟಿ ಮಾನವೀಯತೆಯನ್ನು ಸ್ಥಾಪಿಸಿತು. ಯುದ್ಧ ಬದುಕಲ್ಲ. ಅದು ಮಾನವೀಯತೆಯ ಹಿಂಸ್ರಕ ಎಂಬುದನ್ನು ಯುದ್ಧರಾಜಕೀಯದ ಮನಸ್ಸಿನಲ್ಲಿ ಕನ್ನಡ ಕಥನಪರಂಪರೆ ನಾಟಿತು ಎಂದು ಎದೆತಟ್ಟಿ ಸಾರಲಾಗದು. ಆದರೂ ತನ್ನ ಮಿತಿಯಲ್ಲಿ ಅದು ಶಾಂತಿಯುತ ಜೀವನದತ್ತ ಜಗತ್ತು ಮುಖಮಾಡುವಂತೆ ಪ್ರಯತ್ನ ಮಾಡಿತು. ಈ ಶಾಂತಿಪ್ರಿಯತೆಯ ಅಮೃತವಾಹಿನಿ ಆ ಈ ಕಾಲದ ಕನ್ನಡ ಸಣ್ಣಕಥೆಗಳ ಮೂಲಕವೂ ಹರಿಯುತ್ತಲೇ ಇದೆ.

‘ನಾನು ಮೆಚ್ಚಿದ ನನ್ನ ಕಥೆ’ಯಲ್ಲಿರುವ ಕಥೆಗಳ ಗ್ರಾಫ್‍ ರೇಖೆ ಕಥಾ ಪ್ರಕ್ರಿಯೆಯಲ್ಲಿ ಕನ್ನಡನುಡಿ ಸಾಧಿಸುತ್ತಿರುವ ವಿಕಾಸವನ್ನು ತೋರಿಸುತ್ತದೆ. ಅದರಲ್ಲಿ ಅದು ದೇಶ-ಕಾಲ-ಪರಿಸ್ಥಿತಿಗಳನ್ನು ಕಾಲಕಾಲಕ್ಕೆ ಪ್ರತಿಬಿಂಬಿಸುವುದನ್ನು ಕಾಣುತ್ತೇವೆ. ಕತೆಗಾರರು ತಮ್ಮ ಕಥನದಲ್ಲಿ ಸಾಧಿಸಿದ ಹಾಗು ಸಾಧಿಸುತ್ತಿರುವ ವಿಕಾಸವೂ ಅಲ್ಲಿ ಕಾಣದಿರದು.

ತನ್ನ ಯಾವ ಕಥೆ ಮೆಚ್ಚುಗೆಯ ಮೂಲಕ ತನ್ನನ್ನು ಪ್ರತಿನಿಧಿಸುತ್ತದೆ ಎಂದು ಕತೆಗಾರರು ತಿಳಿದಿರುವುದರಿಂದ ಆ ಕಥೆ ತನ್ನ ಪ್ರಾತಿನಿಧಿಕ ಕಥೆಯಾಗಿಯೂ ಕಂಡಿರುವ ಸಾಧ್ಯತೆಯಿದೆ. ಅಥವಾ ಈ ಮೂಲಕ ತನ್ನ ಪ್ರಾತಿನಿಧಿಕ ಕಥೆಯಾಗಬಹುದಾದ ಕಥೆಯತ್ತ ಸಾಗಲು ಇದು ಪ್ರೇರಕವಾದರೂ ಹೆಚ್ಚಲ್ಲ. ಅಂದರೆ ಈ ಮೂಲಕ ತನ್ನ ಕಥನ ವಿಕಾಸವನ್ನು ಕಂಡುಕೊಳ್ಳಬಹುದಾಗಿದೆ. ಹೇಗಾದರೂ ಕನ್ನಡ ಕಥಾಲೋಕಕ್ಕೆ ಲಾಭವೇ.

ನಮ್ಮ ಗ್ರಾಮೀಣ ಕತೆಗಾರರಿಗೆ ದೇವರು ಒಂದು ಮುಖ್ಯ ಸೌಕರ್ಯವಾಗಿ ಕಂಡಿದ್ದರೆ, ನಗರ ಕತೆಗಾರರಿಗೆ ಶಾಸ್ತ್ರೀಯ ಪರಿಜ್ಞಾನ ಸೌಕರ್ಯವಾಗಿ ಕಂಡಿದೆ. ಈ ಎರಡೂ ಸಂಪರ್ಕ ಅನುಕೂಲತೆಯಿಂದ ಅತ್ತಿಂದಲಿತ್ತ ಇತ್ತಿಂದಲತ್ತ ಪ್ರವಹಿಸಿರುವುದುಂಟು. ಇಂತಹ ಕಥೆಗಳಲ್ಲಿ ಅಸ್ತಿತ್ವದ ಪ್ರಶ್ನೆಗಳು, ಉತ್ತರಗಳು ಇವೆ. ಕಥನ ಶಿಲ್ಪದಲ್ಲಿ ಇವನ್ನು ಕಾಣಬಹುದು. ಗ್ರಾಮೀಣ ದೇವರುಗಳು ಆಚರಣೆಗಳು ನಂಬಿಕೆಯ ಮೂಲಕ ನಿಲ್ಲುತ್ತವೆ.

ವೈಚಾರಿಕತೆಯಲ್ಲಿ ಅವು ಪ್ರತಿಮೆಯೋ, ಸಂಕೇತವೂ ಆಗಿ ನಿಲ್ಲುವ ರೀತಿಯನ್ನು ಕನ್ನಡ ನಾಟಕ ಪರಂಪರೆಯಲ್ಲಿ ಮುಖ್ಯವಾಗಿ ಹಾಗೂ ಕಥನ ಪರಂಪರೆಯಲ್ಲಿ ಗಮನಾರ್ಹವಾಗಿ ಕಾಣುತ್ತೇವೆ. ಇದಕ್ಕೆ ಮಗ್ಗುಲಿನಲ್ಲಿ ಬರುವ ಚಿಂತನೆಗಳು ಕಥೆಗಳ ವೈವಿಧ್ಯತೆಗೆ ಕಾರಣವಾಗುವುದನ್ನು ಅಲ್ಲಗಳೆಯುವ ಹಾಗಿಲ್ಲ. ಗ್ರಾಮೀಣ ದೈವ ಹಾಗು ವಿಜ್ಞಾನ ಆಧಾರವೇ ಆಗುತ್ತ ಸಾಗಿವೆ. ಇಂದಿನ ಬೆಳೆ ಬಾಚುವ ಸಂಸ್ಕೃತಿಗೂ ಗ್ರಾಮೀಣ ಕೃಷಿ ಸಂಸ್ಕೃತಿಗೂ ನಡುವಿನ ಭಿನ್ನತೆ ಇರುವುದು ಇಲ್ಲಿಯೇ. ಇದನ್ನು ಕಥೆಗಳು ಸ್ಪಷ್ಟವಾಗಿ ಗುರುತಿಸುತ್ತವೆ.

ಜಾಗತೀಕರಣ ಪೂರ್ವದ ಹಾಗು ನಂತರ ಹುಟ್ಟಿಕೊಂಡ ಆಧುನಿಕ ಸಿದ್ಧಾಂತ, ವಾದ ಇಂತಹವುಗಳು ಎತ್ತುವ ಪ್ರಶ್ನೆಗಳು ಮತ್ತು ಮೂಲ ಸಂಸ್ಕೃತಿ ಹಾಗು ಸಂಸ್ಕೃತಿಗಳು ಎತ್ತುವ ಪ್ರಶ್ನೆಗಳು ಭಿನ್ನ ನೆಲೆಗಳಿಂದ ಬಂದವು. ಉತ್ತರಗಳೂ ಅಷ್ಟೇ.ಇವು ಸಮನ್ವಯಗೊಳ್ಳುವುದು ಸಾಮಾಜಿಕ ಸೌಖ್ಯದ ಆಕಾಂಕ್ಷೆಗಳಲ್ಲಿ. ಅಂದರೆ ಕಥೆಗಳು ಯಾವ ವಾದ, ಚಳವಳಿಯ ಮಾರ್ಗದ್ದೇ ಆಗಿರಲಿ ಅದು ಸಮಾನತೆಯ ಜೀವಪರ ನೆಲೆಯಲ್ಲಿ ಪರಸ್ಪರ ಬೆಂಬಲಿತವಾಗಿ ನಿಲ್ಲುತ್ತವೆ ಎಂಬುದಕ್ಕೆ ಅನೇಕ ರುಜುವಾತುಗಳು ಇಲ್ಲಿ ಸಂಕಲಿತವಾಗಿರುವ ಕಥೆಗಳಲ್ಲಿವೆ.

ಮಹಿಳೆಯರು, ಆದಿವಾಸಿ-ಅಲೆಮಾರಿ-ಜನಾಂಗದವರು, ಕೆಳಮಧ್ಯಮ ವರ್ಗದವರು ಶಿಕ್ಷಣದ ಮೂಲಕ, ಇಲ್ಲವೆ ಬೇರೆಯದಾದ ಜ್ಞಾನಾವರಣದ ಮೂಲಕ ಆಧುನಿಕತೆಯತ್ತ ತಮ್ಮ ಬದುಕು ಮತ್ತು ಆಲೋಚನೆಗಳನ್ನು ಕೊಂಡೊಯ್ಯುತ್ತಿದ್ದಾರೆ. ಇಲ್ಲಿನ ಜೀವನಾನುಭವಗಳನ್ನು ಹೇಳಿಕೊಳ್ಳುವ ಕಥೆಗಳಲ್ಲಿ ಜಾನಪದ, ಗ್ರಾಂಥಿಕ, ಈ ಎರಡರ ನಡುವಿನ ಶೈಲಿಗಳನ್ನು ಸಮನ್ವಯಗೊಳಿಸಿಕೊಂಡು ಕಥನಿಸುವುದು ಕನ್ನಡ ಕಥೆಗಳ ವೈಶಿಷ್ಟ್ಯವೆಂದು ಗುರುತಿಸಲು ಅನುಕೂಲ ಮಾಡಿಕೊಡುತ್ತಿವೆ. ಇದನ್ನು ಸಾಂಸ್ಕೃತಿಕ ಸಮನ್ವಯವೆಂದು ಹೇಳಬಹುದೆ ಎಂಬುದು ಆಲೋಚಿಸಬೇಕಾದ, ಚರ್ಚಿಸಬೇಕಾದ ವಿಚಾರ. ಇದಕ್ಕೆ ಈ ಸಂಕಲನ ಒಂದಿಷ್ಟಾದರೂ ನೆರವಾದುದಾದರೆ ಆ ಮಟ್ಟಿಗಿನ ಸಫಲತೆ ಇಲ್ಲಿನದೆಂದು ಭಾವಿಸುತ್ತೇವೆ.

ಸ್ತ್ರೀವಾದ, ಸ್ತ್ರೀಸಂವೇದನೆ, ಮಹಿಳಾ ಸಾಹಿತ್ಯ(ಕಥೆ) ಎಂಬ ವಾದಗಳು ಇರುವುದಾದರೂ ಕತೆಯಾಗಿ (ಸಾಹಿತ್ಯವಾಗಿ) ಪರಿಭಾವಿಸಿದಾಗ ಅವು ಕಥೆಗಳೇ ಹೊರತು ಮತ್ತೊಂದಲ್ಲ. ಪುರುಷ ಸಂವೇದನೆ ಮಹಿಳೆಯರಲ್ಲಿಯೂ, ಸ್ತ್ರೀ ಸಂವೇದನೆ ಪುರುಷರಲ್ಲಿಯೂ ಇದ್ದುದೆ ಆಗಿದೆ. ತನ್ನ ಹೆಸರನ್ನು ಗೌಪ್ಯಮಾಡಿ, ಹೆಣ್ಣಿನ ಹೆಸರಿನಲ್ಲಿ ಬರೆದಾಗ ಅಥವಾ ಹೆಣ್ಣು ಗಂಡಸಿನ ಹೆಸರಿನಲ್ಲಿ ಬರೆದಾಗ ಕಂಡ ಸಂವೇದನೆಯು ಹೆಸರು ಪ್ರಕಟವಾದಾಗ ಬದಲಾಗುವುದಾದರೂ ಹೇಗೆ? ಅವಕಾಶ, ಅನುಕೂಲ, ವಿಮರ್ಶೆ ಇಂಥವಲ್ಲಿ ಸಂಪೂರ್ಣ ಸಮಾನತೆ ಇರಬೇಕಷ್ಟೆ. ಇದಂತೂ ನಮ್ಮ ಮಹಿಳಾ ಕತೆಗಾರರರಿಗೆ ಇಂತಹ ಮಾತಿನ ಯಾವ ರಿಯಾಯತಿಗಳ ಅಗತ್ಯವೂ ಇಲ್ಲವೆಂಬುದು ಈ ಸಂಕಲನದ ಕಥೆಗಳು ಗಟ್ಟಿಯಾಗಿ ಸಾರುತ್ತವೆ.

ಕನ್ನಡ ಆಧುನಿಕ ಹಾಗು ಆಧುನಿಕಪೂರ್ವ ಕಥಾ ಪರಂಪರೆ ಹಾಗು ಕಥನ ಸಂಸ್ಕಾರಗಳನ್ನು ನಮ್ಮ ಕಥೆಗಾರರು ಮೈಗೂಡಿಸಿಕೊಂಡಿದ್ದಾರೆ ಎಂಬುದಕ್ಕೆ ಇಲ್ಲಿನ ಬಹುತೇಕ ಕತೆಗಾರರ ಕಥೆಗಳು ಪ್ರತ್ಯಕ್ಷ ಸಾಕ್ಷಿಗಳಾಗಿ ನಿಲ್ಲುತ್ತವೆ. ಈ ಪರಂಪರೆಯ ಅರಿವು ಮತ್ತು ಸಂಸ್ಕಾರ ಇತ್ತೀಚಿನ ಕತೆಗಾರರಲ್ಲಿ ಕುಡಿಯೊಡೆಯುತ್ತಿರುವುದನ್ನು ಅವರ ಕಥೆಗಳು ತೋರಿಸಿಕೊಡುತ್ತಿವೆ.

ಈವೊತ್ತಿನಲ್ಲಿ ಉತ್ತರಕರ್ನಾಟಕದ ಪ್ರಾಂತ್ಯದಲ್ಲಿ ಕಥಾ ಪ್ರಕಾರದಲ್ಲಿ ಅದ್ಭುತ ಬೆಳೆವಣಿಗೆ ಆಗುತ್ತಿರುವುದನ್ನು ಅಲ್ಲಿನ ಕತೆಗಾರರ ಕಥೆಗಳ ಮೂಲಕ ಗುರುತಿಸಬಹುದು. ಇಲ್ಲಿನ ಬಹಳಷ್ಟು ಕಥೆಗಾರರ ಕಥೆಗಳಲ್ಲಿ ಸಾಮಾಜಿಕ ಮತ್ತು ವೈಚಾರಿಕ ಸಂಘರ್ಷ ಹೆಚ್ಚಿಗೆ ಕಂಡುಬರುತ್ತದೆ. ಇಲ್ಲಿನ ಕಥೆಗಳಲ್ಲಿ ಅವು ವ್ಯಾಪಕವಾಗಿ ವ್ಯಕ್ತವಾಗಲು ಹಿನ್ನೆಲೆಯಾಗಿರುವ ರಾಜಕೀಯ ಹಾಗು ಆರ್ಥಿಕ ಅವಕಾಶಗಳಿಂದ ವಂಚಿತವಾಗಿರುವುದು ಮುಖ್ಯ ಕಾರಣವಾಗಿದೆ ಮತ್ತು ಅಲ್ಲಿನ ರೂಢಿಗತ ನಂಬಿಕೆಗಳು ಅಚಲವಾಗಿರುವುದೇ ಆಗಿದೆ. ಪರಿವರ್ತನೆಯ ಗಾಳಿಗೆ ಆ ಸಂಸ್ಕೃತಿ ಪ್ರತಿರೋಧವನ್ನು ಒಡ್ಡುತ್ತಿರುವುದನ್ನೂ, ಆ ಪ್ರತಿರೋಧದ ಕೋಟೆಯನ್ನು ಒಡೆಯಲು ಹೊಸ ಕಥೆಗಾರರು ಯತ್ನಿಸುತ್ತಿರುವುದನ್ನು ಇಲ್ಲಿನ ಕಥೆಗಳಲ್ಲಿ ಕಾಣಬಹುದು.

ಹಾಗೆ ನೋಡಿದರೆ ರಾಜಧಾನಿಯ ಸೆರಗಿಗೆ ಬರುವ ಪ್ರದೇಶಗಳೂ ಒಂದಲ್ಲ ಒಂದು ರೀತಿಯ ಅವಕಾಶ ವಂಚಿತವೇ ಆಗಿವೆ. ಇವುಗಳ ಎಡಬಲಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಇದನ್ನೇ ಆಧರಿಸಿ ಇಲ್ಲಿ ಕಥೆಗಳು ಸಂಕಲನಗೊಂಡಿದ್ದಿಲ್ಲ. ಇಲ್ಲಿ ಪ್ರಾಂತ್ಯವಾರು ವಿಂಗಡನೆಯೂ ಇಲ್ಲ. ಕಾರಣಗಳೇನೇ ಇದ್ದರೂ ಕನ್ನಡ ನಾಡಿನ ಮತ್ತು ಹೊರಗಿನ ಪ್ರದೇಶವಾಸಿಗಳು ಬರೆದ ಕಥೆಗಳು ಕನ್ನಡ ಕಥೆಗಳೇ ಹೊರತು ಬೇರೆಯಲ್ಲ.

ಪ್ರತಿಯೊಬ್ಬ ಕತೆಗಾರನೂ ಮೂಲತಃ ಕನ್ನಡ ಕತೆಗಾರನೇ. ಹಾಗೆ ಅವರ ಕಥೆಗಳೆಲ್ಲ ಕನ್ನಡ ಕಥೆಗಳೇ. ಇಲ್ಲಿನವೆಲ್ಲ ಮೊದಲಿಗೆ ಕನ್ನಡ ಕುಲದ ಜೀವನ ಹಾಗು ಸಂಸ್ಕೃತಿಯ ಕಥೆಗಳು. ಆ ಭಾವವೇ ವಿಸ್ತರಿಸಿ ಇಲ್ಲಿರುವ ಹಾಗು ಇವರು ಬರೆಯುವ ಕಥೆಗಳೆಲ್ಲ ಭಾರತೀಯ ಕಥೆಗಳೇ ಆಗಿವೆ. ಕಾಸರಗೋಡಿನಿಂದ ಮುಂಬೈವರೆಗೆ ಬರೆದ ಕಥೆಗಳಲ್ಲಿನ ವೈವಿಧ್ಯ, ಭಾಷಾ ಭಿನ್ನತೆ ನಿಜಕ್ಕೂ ಅಧ್ಯಯನ ಯೋಗ್ಯವಾದದ್ದು.

ಹಾಗೆಯೇ ಕೋಲಾರದಿಂದ ಬೀದರಿನವರೆಗೆ ಹಬ್ಬಿದ ಕಥೆಗಾರರಿಂದ ಬಂದ ಕತೆಗಳೂ, ಉತ್ತರ ಕರ್ನಾಟಕದಲ್ಲಿ ಕಥಾ ಸಾಹಿತ್ಯದ ಸೃಷ್ಟಿ ದಕ್ಷಿಣಕ್ಕಿಂತ ಹುಲುಸಾಗಿದೆ. ಹೊಸಬರ ಸಂಖ್ಯೆ ಗಣನೀಯವಾಗಿದೆ. ಜಾಗತೀಕರಣದ ವಿವೇಚನೆ ದಕ್ಷಿಣದಲ್ಲಿ ಜಾಸ್ತಿ. ಕರಾವಳಿಯ ಭಾಗದಲ್ಲಿನ ಕತೆಗಳು ಬದುಕನ್ನು ಕುರಿತು, ಪಲ್ಲಟಗಳನ್ನು ಕುರಿತು ಚಿಂತಿಸಿವೆ. ಒಟ್ಟಿನಲ್ಲಿ ಈ ಎಲ್ಲ ಕತೆಗಳೂ ಒಂದಿಲ್ಲೊಂದು ಬಗೆ ಇವತ್ತಿನ ಕತೆಗಳೇ ಆಗಿವೆ.

‍ಲೇಖಕರು Avadhi

November 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: