ಮಂಜುಳಾ ಪ್ರಸಾದ್ ಅವರ ‘ನಾನೂ ತಾಯಿಯೇ…!?’
ಈ ಕೃತಿಯ ಕುರಿತ ಧನು ಸುನಿಲ್ ಅವರ ಬರಹ ಇಲ್ಲಿದೆ.
-ಧನು ಸುನಿಲ್
‘ನಾನೂ ತಾಯಿಯೇ’ ಎನ್ನುವುದು ಶ್ರೀಮತಿ ಮಂಜುಳಾ ಪ್ರಸಾದ್ ಅವರ ಲೇಖನಿಯಿಂದ ಮೂಡಿಬಂದಿರುವ ಮೂರು ವಿಭಿನ್ನ ಹಾಗೂ ಮನಮಿಡಿಯುವ ಕಥೆಗಳ ಒಂದು ಸುಂದರ ಕೃತಿಯಾಗಿದೆ. ಮೂಲತಃ ಶಿಕ್ಷಕಿಯಾಗಿರುವ ಲೇಖಕಿ ಮಂಜುಳಾ ಅವರು ತಮ್ಮ ಬಿಡುವಿನ ಸಮಯವನ್ನು ಬಳಸಿಕೊಂಡು ಉತ್ತಮ ಬರಹಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ತಾಯ್ತನದ ಭಾವನೆಗಳು ಮತ್ತು ಹೆಣ್ಣಿನ ಬದುಕಿನ ವಿವಿಧ ಮಜಲುಗಳನ್ನು ಈ ಕಥೆಗಳಲ್ಲಿ ಕಾಣಬಹುದು.
ಈ ಕಾದಂಬರಿಯು ತಾಯ್ತನದ ವಿಭಿನ್ನ ಘಟ್ಟಗಳನ್ನು ಸೂಕ್ಷ್ಮವಾಗಿ ತೋರಿಸುತ್ತದೆ. ಕೇವಲ ಜನ್ಮ ನೀಡುವುದಷ್ಟೇ ತಾಯ್ತನವಲ್ಲ, ಅದನ್ನೂ ಮೀರಿದ ವಾತ್ಸಲ್ಯ, ತ್ಯಾಗ ಮತ್ತು ಪ್ರೀತಿ ತಾಯ್ತನದಲ್ಲಿರುತ್ತದೆ ಎಂಬುದನ್ನು ಲೇಖಕರು ಈ ಕೃತಿಯಲ್ಲಿ ಅತ್ಯಂತ ಭಾವುಕವಾಗಿ ಚಿತ್ರಿಸಿದ್ದಾರೆ. ಹೆಣ್ಣಿನ ಒಳಗಿನ ತಾಯ್ತನದ ಹಂಬಲ ಮತ್ತು ಅವಳು ಎದುರಿಸುವ ಸಂಘರ್ಷಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಕಾದಂಬರಿಯ ಭಾಷೆ ಸರಳವಾಗಿದ್ದು ಓದುಗರ ಹೃದಯವನ್ನು ನೇರವಾಗಿ ಮುಟ್ಟುತ್ತದೆ. ಸಮಾಜದಲ್ಲಿ ಹೆಣ್ಣು ಮತ್ತು ತಾಯಿಯಾಗಿ ಅವಳು ಪಡುವ ಸಂಕಟಗಳು, ಅವಳಿಗಾಗುವ ಅನ್ಯಾಯಗಳು ಹಾಗೂ ಅವಳ ಅಂತರಂಗದ ಶಕ್ತಿಯ ಚಿತ್ರಣವನ್ನು ಕಟ್ಟಿಕೊಡಲಾಗಿದೆ.
ಕಾದಂಬರಿಯಲ್ಲಿ ಬರುವ ಪಾತ್ರಗಳು ಕೇವಲ ಕಾಲ್ಪನಿಕ ಎನಿಸದೆ, ನಮ್ಮದೇ ಸಮಾಜದ ಜೀವಂತ ವ್ಯಕ್ತಿಗಳಂತೆ ಭಾಸವಾಗುತ್ತವೆ. ನಾನೂ ತಾಯಿಯೇ ಕಥೆಯಲ್ಲಿ ಬರುವ ನಾಯಕಿ ಭಾಗ್ಯಳ ದೌರ್ಭಾಗ್ಯ ಮನಸ್ಸನ್ನು ಕಲಕುತ್ತದೆ. ತಾನು ಮದುವೆಯಾಗದೆ ಬೇರೆಯವರ ಮಕ್ಕಳಿಗೆ ತಾಯಿ ಪ್ರೀತಿಯನ್ನು ಧಾರೆಯೆರೆದು ಒಬ್ಬಂಟಿಯಾಗುವ ಅವಳ ಪಾತ್ರವು ಮನಮುಟ್ಟುವಂತಿದೆ. ಒಬ್ಬ ಹೆಣ್ಣು ಮಗುವಿಗೆ ಜನ್ಮ ನೀಡದಿದ್ದರೂ ಹೇಗೆ ತಾಯಿಯಾಗಬಲ್ಲಳು, ಮತ್ತು ಸಮಾಜ ಅವಳನ್ನು ನೋಡುವ ದೃಷ್ಟಿಕೋನ ಹೇಗಿರುತ್ತದೆ ಎಂಬುದನ್ನು ಈ ಪುಸ್ತಕ ಓದುಗರಿಗೆ ಮನವರಿಕೆ ಮಾಡಿಕೊಡುತ್ತದೆ. ಸಮಾಜದ ಎಲ್ಲ ರೀತಿಯ ಕಟ್ಟುಪಾಡುಗಳು ಹಾಗೂ ಜನರ ಮನಸ್ಥಿತಿಯ ಬಗ್ಗೆ ಬೇಸರ ತರಿಸುತ್ತದೆ.
ಅವಧಿ ಮೀರುತ್ತಿರುವಾಗ…ಕಥೆಯಲ್ಲಿನ ಕಾವೇರಿಯನ್ನು ದತ್ತು ಕೊಟ್ಟು, ಅವಳ ಅಸ್ತಿತ್ವವನ್ನೇ ಕಿತ್ತುಕೊಂಡ ಪೋಷಕರ ಮನಸ್ಥಿತಿ ಎಷ್ಟು ಕಠೋರವೆನಿಸುತ್ತದೆ. ಹಣದ ಆಸೆಗೋ, ಮನೆಯ ಪರಿಸ್ಥಿತಿಗೋ ಕಟ್ಟುಬಿದ್ದು, ಪ್ರಪಂಚದ ಜ್ಞಾನವಿರದ ವಯಸ್ಸಿನಲ್ಲಿ ಒಂದು ಹೆಣ್ಣು ಮಗುವನ್ನು ದತ್ತು ಕೊಟ್ಟರು. ಹೆತ್ತ ತಾಯಿಯಾಗಿ ಒಮ್ಮೆಯೂ ಕೊರಗಲಿಲ್ಲ ಎಂಬುದು ಕಾವೇರಿಯ ತಾಯಿಗೆ ಅವಳ ಕೊನೆಗಾಲದಲ್ಲಿ ಅರಿವಿಗೆ ಬರುತ್ತದೆ.
ಬದುಕು…ಕಥೆಯಲ್ಲಿ ತಾಯಿಯಿಲ್ಲದ ಸಹನಾ, ಅಪ್ಪ ಮತ್ತು ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆಯುತ್ತಿದ್ದು, ವಸತಿ ಶಾಲೆಯನ್ನು ಸೇರಿದಾಗ, ಅಲ್ಲಿನ ಶಿಕ್ಷಕಿ ಸರಳಾ ಅವಳನ್ನು ಮಗಳಾಗಿ ಸ್ವೀಕರಿಸುವ ನಡೆ ಬಹಳ ಆಪ್ತವೆನಿಸುತ್ತದೆ.
ಈ ಕಥೆಗಳನ್ನು ಓದುತ್ತಾ ಹೋದಂತೆ ತಾಯ್ತನ ಎನ್ನುವುದು ಕೇವಲ ಜೈವಿಕ ಪ್ರಕ್ರಿಯೆಯಲ್ಲ, ಅದೊಂದು ಸುಪ್ತ ಮನದ ಭಾವನೆ ಎಂಬುದು ಓದುಗನಿಗೆ ಅರ್ಥವಾಗುತ್ತದೆ. ಭಾವನಾತ್ಮಕ, ಹೃದಯ ಸ್ಪರ್ಶಿ ಕಾದಂಬರಿಗಳನ್ನು ಇಷ್ಟಪಡುವ ಪ್ರತಿಯೊಬ್ಬರೂ ಓದಲೇಬೇಕಾದ ಉತ್ತಮ ಕೃತಿ ಇದಾಗಿದೆ.






0 Comments