ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿನ ಮಳೆಯಲ್ಲಿ ಕುವೆಂಪು ಸಮಗ್ರ ಕಾವ್ಯದಲ್ಲಿನ ಮಳೆಗಾಲದ ಮರ್ಮವನ್ನು, ವೈಭವವನ್ನು ಸಾರುವ ಕವಿತೆಗಳನ್ನು ಓದಿದ ಅನುಭವವನ್ನು ಹಂಚಿಕೊಂಡಿದ್ದಾರೆ.
ಬಿಸಿ ಕಡುಬು ಮತ್ತು ಕೋಳಿ ಸಾರಿನ ಊಟ…
|ಕಳೆದ ಸಂಚಿಕೆಯಿಂದ ।
ಸದ್ಯ ಅಂದು ಹೇಮಾಂಗಣದ ಅಂಗಳ ಸಾಗರದಂತೆ ಇರಲಿಲ್ಲ. ರೌದ್ರಾವತಾರ ಕಡಿಮೆಯಾದ ಕಾರಣ ನೀರು ಹೆಚ್ಚು ನಿಲ್ಲದೆ ಹರಿದು ಹೋಗುತ್ತಿತ್ತು. ಮಳೆ ಇನ್ನು ಕಡಿಮೆಯಾಗಬಹುದು ಎಂಬುದು ನನ್ನ ಊಹೆಯಾಗಿತ್ತು. ಅಷ್ಟರಲ್ಲಿ ಕವಿಶೈಲದ ಕಾವಲುಗಾರ ಮಾನಪ್ಪ ಬಂದ.
‘ಏನು ಮಾನಪ್ಪ ಸಮಾಚಾರ? ಮಳೆ ಸಾಕಾ?’ ಎಂದೆ. ‘ಅಯ್ಯೋ ಸಾಕಾಗಿದೆ ಸಾರ್ ನಿಮಗೆ ಗೊತ್ತಾ? ಇವತ್ತು ಬೆಳಗ್ಗೆಯಿಂದ ತೀರ್ಥಹಳ್ಳಿ ಶಿವಮೊಗ್ಗ ರಸ್ತೆ ಬಂದ್ ಆಗಿದೆ. ತುಂಗಾ ನದಿಯ ನೀರು ಮಂಡಗಳಲೆ ಪಕ್ಷಿಧಾಮವೂ ಸೇರಿದಂತೆ ಅನೇಕ ಕಡೆ ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬಹಳಷ್ಟು ಕಡೆ ರಸ್ತೆ ಮುಳುಗಿದೆ. ಎಂಥ ಮಾಡ್ತರೋ ಗೊತ್ತಿಲ್ಲಪ್ಪ’ ಎಂದು ಮಳೆ ಅವಾಂತರವನ್ನು ಮಾನಪ್ಪ ಬಣ್ಣಿಸಿದ.
ಹಿಂದಿನ ಕೆಲವು ವರ್ಷಗಳಲ್ಲಿ ಎಷ್ಟೋ ಬಾರಿ ಹೀಗೆಯೇ ರಸ್ತೆ ಮುಳುಗಿ ಸಂಚಾರ ರದ್ದಾಗುತ್ತಿದ್ದುದನ್ನು ನಾನೂ ಪತ್ರಿಕೆಯಲ್ಲಿ ಓದುತ್ತಿದ್ದೆ. ಅಂಥ ಸಂದರ್ಭಗಳಲ್ಲಿ ಮಂಡಗಳಲೆಯ ಪುಟ್ಟ ಪಕ್ಷಿಧಾಮವೂ ಮುಳುಗುತ್ತದೆ. ಈಗ ನನ್ನ ಧ್ಯಾನವೆಲ್ಲ ಆ ಪಕ್ಷಿಧಾಮದ ನೀರ ನಡುವಿನ ಗಡ್ಡೆಗೆ ಕೇಂದ್ರೀಕೃತವಾಯಿತು.
ದೂರದ ದೇಶಗಳಿಂದ ಬಿಚ್ಚಿದ ರೆಕ್ಕೆಯನ್ನು ಮುಚ್ಚದೇ ಸಾವಿರಾರು ಮೈಲು ದೂರ ಹಾರಿ ಬರುವ ಪಕ್ಷಿಗಳು ಮಂಡಗದ್ದೆಯ ತುಂಗಾ ನದಿಯ ನಡುಗಡ್ಡೆಗೆ ಬಂದು ತಂಗುತ್ತವೆ. ತುಂಗಾನದಿಯ ಹರಿವಿನ ನಡುವೆ ಮೈತಳೆದಿರುವ ನಡುಗಡ್ಡೆಗಳಲ್ಲಿ ಬೆಳೆದಿರುವ ವಿವಿಧ ಬಗೆಯ ಮರಗಳಲ್ಲಿ ಗೂಡು ಕಟ್ಟುತ್ತವೆ.
ಅವು ಕೇವಲ ಮೇವು ಅರಸಿ ಬರುವುದಿಲ್ಲ. ಆ ನಡುಗಡ್ಡೆಯಲ್ಲಿ ತಮ್ಮ ಸಂತಾನಾಭಿವೃದ್ಧಿಯನ್ನೇ ಮಾಡಿಕೊಳ್ಳುತ್ತವೆ. ಪುಟ್ಟ ಮರಿಗಳ ರೆಕ್ಕೆ ಬಲಿಯುವವರೆಗೆ ಅಲ್ಲೇ ನೆಲೆ ನಿಂತು, ಆಹಾರ ಹುಡುಕುವ ಕ್ರಮಗಳನ್ನು ಕಲಿಸಿ ಮತ್ತೆ ಮರಿಗಳ ಜೊತೆ ತಮ್ಮ ದೂರದ ನೆಲಕ್ಕೆ ಹಿಂತಿರುಗುತ್ತವೆ.
ನೀರ ನಡುವಿನ ಜಾಗ ಸುರಕ್ಷಿತವಷ್ಟೇ ಅಲ್ಲ, ಮೀನು ಮಿಡತೆ ಮುಂತಾಗಿ ಸಮೃದ್ಧ ಆಹಾರವೂ ಸಿಗುತ್ತದೆ ಎಂಬ ಕಾರಣವೇ ಹಕ್ಕಿಗಳ ಈ ವಲಸೆಗೆ ಕಾರಣ. ಆದರೆ ಅವು ಸುರಕ್ಷ ಎಂದು ಭಾವಿಸಿದ ಜಾಗ ಒಮ್ಮೊಮ್ಮೆ ಈ ರೀತಿ ಕೈಕೊಡುತ್ತದೆ.
ನಿರಂತರ ಮಳೆಗೆ ಉಂಟಾಗುವ ಪ್ರವಾಹ ಗಿಡಮರ ಬಳ್ಳಿಗಳನ್ನೂ ಸುತ್ತುವರಿದು ಹಕ್ಕಿ ಮರಿಗಳ ಸಮೇತ ಗೂಡುಗಳನ್ನು ಕೊಚ್ಚಿಕೊಂಡು ಹೋಗುತ್ತದೆ. ಬದುಕುಳಿದ ಹಕ್ಕಿಗಳು ಒಡನಾಡಿಗಳು ಮತ್ತು ಮಕ್ಕಳನ್ನು ಕಳೆದುಕೊಂಡ ದುಃಖ ದುಮ್ಮಾನದಲ್ಲಿಯೇ ತಮ್ಮ ತಾಯ್ನಾಡಿಗೆ ತೆರಳುತ್ತವೆ. ಇಷ್ಟೆಲ್ಲದರ ನಡುವೆಯೂ ಹಕ್ಕಿಗಳ ಈ ನಿಗೂಢ ವಲಸೆ ಮುಂದುವರಿದೇ ಇರುತ್ತದೆ.
ಸುಧಾಕರ ಅಂದು ಸಂಜೆಗೆ ನನ್ನ ಆಫೀಸಿಗೆ ಬಂದು ‘ಸಾರ್ ಇವತ್ತು ಊಟ ತರುವುದು ಸ್ವಲ್ಪ ತಡವಾಗುತ್ತದೆ, ಮನೆಯಲ್ಲಿ ನೆಂಟರು ಬಂದಿದ್ದಾರೆ’ ಎಂದು ಹೇಳಿ ಹೋಗಿದ್ದ. ಮಧ್ಯಾಹ್ನ ಅವನ ಕ್ಯಾಂಟಿನ್ನಲ್ಲೇ ಚೆನ್ನಾಗಿ ತಿಂದಿದ್ದರಿಂದ ಹೊಟ್ಟೆ ಹಸಿಯುವ ಪ್ರಶ್ನೆ ಇರಲಿಲ್ಲ. ‘ಆಯ್ತು, ಸಾವಕಾಶ ವಾಗಿ ಬಾ ಮಾರಾಯ’ ಎಂದಿದ್ದೆ.
ಮತ್ತೆ ಕಗ್ಗತ್ತಲು, ಜಡಿ ಮಳೆ, ಅದೇ ನೀರವತೆ, ಓದಲು ಬರೆಯಲು ಕರೆಂಟ್ ದೀಪಗಳಿಲ್ಲ. ಹೆಚ್ಚು ಕಡಿಮೆ ಹತ್ತನೇ ತರಗತಿವರೆಗೆ ಸೀಮೆಎಣ್ಣೆ ಬುಡ್ಡಿ ದೀಪದ ಬೆಳಕಿನಲ್ಲಿಯೇ ಓದಿದ್ದ ನನಗೆ ಅಥವಾ ನನ್ನ ಹಾಗೇ ಎಷ್ಟೋ ಜನಕ್ಕೆ ಇಂದು ಕರೆಂಟ್ ಇಲ್ಲದಿದ್ದರೆ ಜೀವನವೇ ಇಲ್ಲ. ಕರೆಂಟ್ ಅಷ್ಟೇ ಅಲ್ಲ, ಆಧುನಿಕತೆಯ ಅದೆಷ್ಟೋ ಆವಿಷ್ಕಾರಗಳು ನಮ್ಮನ್ನು ಅಸಹಾಯಕರನ್ನಾಗಿ ಮಾಡಿಬಿಟ್ಟಿವೆ.
ಮೊಬೈಲ್ ಇಲ್ಲದೆ ಈಗ ಜೀವನ ಉಂಟೆ? ಸದ್ಯ ನನ್ನ ಅದೃಷ್ಟಕ್ಕೆ ಕುಪ್ಪಳಿಯಲ್ಲಿ ಮೊಬೈಲ್ ಕೆಲಸ ಮಾಡುತ್ತಿಲ್ಲ. ಕವಿಶೈಲದ ನೆತ್ತಿಗೆ ಹೋದರೆ ಅಲ್ಲಿ ಒಂದಿಷ್ಟು ಸಿಗ್ನಲ್ ಸಿಗುತ್ತದೆ. ಬೆಳಗಿನ ವಾಕಿಂಗ್ನಲ್ಲಿ ಹೆಂಡತಿ ಮಕ್ಕಳಿಗೆ ಒಂದು ಪೋನ್ ಹೊಡೆದರೆ ಮುಗಿಯಿತು. ಇನ್ನು ಇಡೀ ದಿನ ಅದರ ಅಸಂಗತ ಗಲಾಟೆ ಇರುವುದಿಲ್ಲ.
ಟಿ ವಿ ನೋಡಿಯಂತೂ ಕೆಲವು ತಿಂಗಳುಗಳೇ ಕಳೆದು ಹೋಗಿವೆ. ಇವೆಲ್ಲ ಇಲ್ಲದೆಯೂ (ಅಥವಾ ಇಲ್ಲದಿರುವುದರಿಂದಲೇ) ನಾನೆಷ್ಟು ಸಂತೋಷ ವಾಗಿದ್ದೇನಲ್ಲಾ ಎಂದು ನನಗನ್ನಿಸಿತು!
ಅತಿಥಿ ಗೃಹದ ನನ್ನ ಕೊಠಡಿಯಲ್ಲಿ ಕಿಟಕಿಗೆ ಅಭಿಮುಖವಾಗಿ ಕುಳಿತು ಆ ಅಗಾಧ ಕತ್ತಲನ್ನು, ಹನಿಗಳ ಸಪ್ಪಳವನ್ನು, ಹೆಂಚಿನ ದೋಣಿಗಳಲ್ಲಿ ಹರಿಯುವ ನೀರ ಸಂಗೀತವನ್ನು ಪರೋಕ್ಷವಾಗಿ ಆಲಿಸುತ್ತಾ ಆಧುನಿಕ ಆವಿಷ್ಕಾರಗಳ ಒಳಿತು ಕೆಡಕುಗಳ ಶೇಕಡಾವಾರು ಪಟ್ಟಿಯನ್ನು ಮನಃಪಟಲದಲ್ಲಿ ಮೂಡಿಸಿಕೊಳ್ಳುತ್ತಾ ಕುಳಿತ ನನಗೆ ರಾತ್ರಿ ಹತ್ತು ಗಂಟೆಯಾದದ್ದು ಗಮನಕ್ಕೇ ಬಂದಿರಲಿಲ್ಲ.
ಸುಧಾಕರನ ಟಾರ್ಚ್ ಬೆಳಕು ಮಳೆ ಹನಿಗಳನ್ನು ಭೇದಿಸಿಕೊಂಡು ನನ್ನನ್ನು ಸಮೀಪಿಸಿತು. ರೈನ್ ಕೋಟನ್ನು ತೆಗೆದು ಕೊಡವುತ್ತಾ ‘ಸಾರಿ ಸಾರ್ ಲೇಟ್ ಆಯ್ತು’ ಎನ್ನುತ್ತಾ ತಾನೇ ತಂದಿದ್ದ ಸ್ಟೀಲ್ ತಟ್ಟೆಯಲ್ಲಿ ಊಟ ಬಡಿಸತೊಡಗಿದ. ಪಾತ್ರೆಯ ಮುಸುಕು ತೆಗೆಯುತ್ತಿದ್ದಂತೆಯೇ ಕೋಳಿ ಸಾರಿನ ಗಮಲು ಮೂಗಿನ ಹೊಳ್ಳೆಗೆ ನುಗ್ಗಿ ಇಡೀ ದೇಹ ಚೈತನ್ಯ ಪೂರ್ಣವಾಯಿತು.
ಅದು ಸುಧಾಕರನ ಕ್ಯಾಂಟೀನ್ ಊಟವಲ್ಲ, ಬದಲಾಗಿ ಅವರ ಮನೆಯಲ್ಲಿ ಮಾಡಿದ ಬಿಸಿ ಕಡುಬು ಮತ್ತು ಕೋಳಿ ಸಾರಿನ ಅಪ್ಯಾಯಮಾನ ಊಟ. ಮಳೆಯ ವಾತಾವರಣ ಊಟದ ಹಿತವನ್ನು ಮತ್ತಷ್ಟು ಹೆಚ್ಚಿಸಿತ್ತು.
ಕೋಳಿಸಾರು ಕಡುಬನ್ನು ಮನಸಾರೆ ತಿಂದು ಗಡದ್ದು ನಿದ್ದೆಗೆ ಜಾರಿದ್ದ ನನಗೆ ಸರಿಸುಮಾರು ರಾತ್ರಿ ಒಂದು ಗಂಟೆ ಸಮಯಕ್ಕೆ ಮತ್ತೆ ಎಚ್ಚರವಾಯಿತು. ಕಿವಿಯಗಲಿಸಿ ಕೇಳಿದರೆ ಮತ್ತದೇ ಬಿರು ಮಳೆ, ಅದೇ ಸುರಿವ ನೀರು, ಬ್ಯಾಟರಿ ಬೆಳಕಿನ ನೋಟದಲ್ಲಿ ಅದೇ ನೀರಿನ ಸಾಗರ.
ನಿದ್ದೆ ಬರುವಂತೆ ತೋರಲಿಲ್ಲ. ಮೊಂಬತ್ತಿಯನ್ನು ಹಚ್ಚಿದೆ. ಕುವೆಂಪು ಸಮಗ್ರ ಕಾವ್ಯವನ್ನು ಬಿಚ್ಚಿ ಮಳೆಗಾಲದ ಮರ್ಮವನ್ನು ವೈಭವವನ್ನು ಸಾರುವ ಕವಿತೆಗಳನ್ನು ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಓದಿಕೊಳ್ಳತೊಡಗಿದೆ.
ಮೋಡಗಳು
ಪ್ರಕೃತಿ ಕಲೆಗಿಂ ಮಿಗಿಲೆ ನರಕೃತಿಯ ಕಲೆ? ನೋಡ,
ಆಶ್ವೀಜದಾಕಾಶದಮೃತ ಚಿತ್ರದ ಶಾಲೆ
ಸೃಷ್ಟಿ ಶಿಲ್ಪಿಯ ಹೃದಯಪಿಂಡ ಕುಂಡ ಜ್ವಾಲೆ
ಕಡೆದಿಟ್ಟ ಕೃತಿಗಳಿಂ ಭೀಮರಮ್ಯಂ! ಮೋಡ
ಅರಳೆರಾಸಿಗಳಂತೆ, ಬೆಣ್ಣೆ ಬಂಡೆಗಳಂತೆ,
ಘೇನ ಮೃದು ರಜತಗಿರಿ ಶಿಖರ ಪದ್ಮಗಳಂತೆ,
ಕಡೆದ ಹಾಲ್ಗಡಲೆದ್ದು ಸಾಲ್ಗೊಂಡಲೆಗಳಂತೆ
ಶೋಭಿಸಿವೆ, ಶರದಭ್ರ ಶುಭ್ರಚಿಂತೆಗಳಂತೆ!
ಆವ ಕವಿಗಾವ ಶಿಲ್ಪಿಯ ಕೌಶಲಕೆ ಸಾಧ್ಯ
ಈ ಬೃಹತ್, ಈ ಮಹತ್, ಈ ರೂಪವೈವಿಧ್ಯ?
ಬರಿಯ ಮೋಡಗಳಲ್ಲ ಇವು ಬಿಳಿಯ ಆತ್ಮಗಳ್,
ಕ್ರಿಸ್ತ ಬುದ್ಧರ ಪೋಲ್ವ ವಿಶ್ವದ ಮಹಾತ್ಮಗಳ್:
ಹಿಂದೆ ಬಂದುವೊ ಮುಂದೆ ಬರಲಿಹವೊ ಪ್ರಾಣಗಳ್,
ಧ್ಯಾನಗಳ್, ಭಾವಗಳ್, ಲೋಕ ಕಲ್ಯಾಣಗಳ್!
ಕಾರಿರುಳು–ಕಾರ್ಮಿಂಚು
ಕಾಂತಿಯ ಕೊಲ್ಲುವ ಕಾಳಿಯ ಕಾಯದ
ಕಪ್ಪನು ಕರೆದುದು ಕಾರಿರುಳು;
ಕಾಳಿಯ ಕಂಗಳ ಕೋಪದ ಕಿಡಿಗಳ
ಜೋತಿಯ ಜರೆದುದು ಕಾರ್ಮಿಂಚು.
ಕಾಳಿಯು ಉಟ್ಟಿಹ ಕುರುಡಿನ ಸೀರೆಯ
ಕಾಳಿಯು ತೊಟ್ಟಿಹ ಕೈಗಳ ಬಳೆಗಳ
ಕುಡಿಮಿಂಚಾದುದು ಕಾರ್ಮಿಂಚು.
ಕಾಳಿಯು ಕೆದರಿದ ಕೇಶದ ಕೂರಾ-
ದೊಡ್ಡಂತಾದುದು ಕಾರಿರುಳು;
ಕಾಳಿಯು ಮುಡಿದಿಹ ಕಿಚ್ಚಿನ ಮುಗುಳಿನ
ಥಳಕಂತೆಸೆದುದು ಕಾರ್ಮಿಂಚು.
ಕಾಳಿಯ ಸಿಟ್ಟಿನ ಕಾಳ ಕರಾಳದ
ಮೊಗದೊಲು ಮೆರೆದುರು ಕಾರಿರುಳು;
ಕಾಳಿಯ ಆಸ್ಯದ ಹಾಸ್ಯದ ಹಾಸ ವಿ-
ಲಾಸವ ಹೋಲಿತು ಕಾರ್ಮಿಂಚು.
ಮುಂಗಾರು
ಪಡುವಲ ಕಡಲಿನ ಮಿಂಚನು ಗುಡುಗನು ನುಂಗಿ ಬಸಿರಿನಲಿ, ಮುಡಿಗೆದರಿ,
ಮುಂಗಾರಸುರಿಯು ರಕ್ಕಸವಜ್ಜೆಗಳಿಕ್ಕುತ ಬಂದಳು ಬಲು ಗದರಿ!
ಗುಟುರನು ಹಾಕಿತು ಮುಂಗಾರ್ ಗೂಳಿ!
ಘೀಳಿಟ್ಟೊರಲಿತು ಘನಘಟೆಯಾಳಿ!
ಬುಸುಗುಟ್ಟಿತು, ಬೀಸಿತು ಬಿರುಗಾಳಿ!
ಸುತ್ತಲು ಮುತ್ತಿತು ಕಾರ್ಮೋಡ!
ಹರಿಯುವ ಹಾವಿನ ತೆರದಲಿ ಕತ್ತಲೆ ಮೆಲ್ಲನೆ ನುಂಗಿತು ಮಲೆನಾಡ!
ಹಿಂಜರಿದುರಿಬಿಸಿಲಂಜುತಲಡಗಿತು, ರವಿಮಂಡಲ ಕಣ್ಮರೆಯಾಯ್ತು;
ಕಾಳಿಯ ಕೇಶದ ತಿಮಿರವು ಮುಸುಗಿತು, ಶಾಂತಿಯು ಗಲಭೆಗೆ ಸೆರೆಯಾಯ್ತು.
ಕೈ ಹೊಂಬಳೆಗಳ ಹೊಸ ಹೊಗರಂತೆ,
ಮಿಂಚುಗಳೆಸೆದುವು ಗೊಂಚಲಲಿ!
ಹೊಳೆದುವು, ಅಳಿದುವು, ಸುಳಿಸುಳಿದಲೆದುವು ಮುತ್ತುವ ಮೋಡಗಳಂಚಿನಲಿ!
ಜಡಿಮಳೆ
ಮುಸಲ ವರ್ಷ ಧಾರೆ
ಮುಗಿಲಿನಿಂದ ಸೋರೆ
ಕುಣಿವ ನವಿಲು ನನ್ನ ಮನಂ,
ನಲ್ಮೆಯುಕ್ಕಿ ಮೀರೆ!
ಹಸುರು ಬಯಲ ಮೇಲೆ
ಬಾಣ ಜಾಲದೋಲೆ
ಮಳೆಯ ಹನಿಗಳೆರಗಲೊಡಂ
ತುಂತುರಾವಿ ಲೀಲೆ!
ತಲೆಯ ಕೆದರಿ ಕಾಳಿ
ಕುಣಿವ ತರೆನ ತಾಳಿ
ಪವನ ಹರಿಯು ಗರ್ಜಿಸಿಹಂ
ವಿಪಿನ ಕರಿಯ ಸೀಳಿ!
ನೀರು, ನೀರು, ನೀರು!
ಕಾರುತಿಹುದು ಕಾರು!
ನೋಡುತಿರುವ ಕವಿ ನಯನಂ
ನಂದದಿಂದೆ ನೀರು!
ಬಹುಶಃ ಕುವೆಂಪು ಬಾಲ್ಯ ಕಾಲದಲ್ಲಿ ಕಂಡ ಆ ಅಸದೃಶ ಮಳೆ ಇಂದು ಇಲ್ಲವೇನೋ. ಕುವೆಂಪು ಮತ್ತು ಅವರ ಹಿರಿಯರು ಮಳೆರಾಯನ ಅದೆಷ್ಟು ಅವತಾರಗಳನ್ನು ಕಂಡಿರಬಹುದು.
ಈ ಮಳೆರಾಯ ಎಷ್ಟು ಹಿತಕಾರಿಯೋ ಅಷ್ಟೇ ಅಪಾಯಕಾರಿಯೂ ಹೌದು. ಮಳೆರಾಯನ ಸೌಮ್ಯ ವೇಷಗಳೆಷ್ಟೋ ಬಣ್ಣದ ವೇಷಗಳೂ ಅಷ್ಟೆ. ಅವನೆಷ್ಟು ಸುಂದರನೋ ಅಷ್ಟೇ ಭೀಭತ್ಸಕನೂ ಹೌದು.
ಆದರೆ ಇಂದು ಬದುಕಿರುವ ಹಿರಿಯರು ಹೇಳುವಂತೆ ಅಂದಿನ ಆ ಕಾಲದಲ್ಲಿ ಬೀಳುತ್ತಿದ್ದ ಮಳೆ ಈಗಿಲ್ಲ. ಬಂದರೆ ಒಮ್ಮೆಲೇ ಸೇಡು ತೀರಿಸಿಕೊಳ್ಳುವಂತೆ ಸುರಿದು ಏನೆಲ್ಲ ಅನಾಹುತ ಸೃಷ್ಟಿಸುತ್ತದೆ. ಇಲ್ಲದಿದ್ದರೆ ಕುಡಿಯುವ ನೀರಿಗೂ ಅಭಾವ ತಂದಿಡುತ್ತದೆ.
ನಿಯತವಾದ ಮಾರುತಗಳು ಈಗೀಗ ದಿಕ್ಕು ತಪ್ಪುತ್ತಿವೆ. ಪರಿಸರ ತಜ್ಞರ ಪ್ರಕಾರ ಇದು ಕಾಡಿನ ನಾಶದ ಪರಿಣಾಮ. ವಿಜ್ಞಾನಿಗಳ ಪ್ರಕಾರ ಭೂಖಂಡದ ಶಾಖ ಹೆಚ್ಚುತ್ತಿರುವ ಪರಿಣಾಮ. ಒಟ್ಟಿನಲ್ಲಿ ಎಲ್ಲವೂ ನನಗಾಗಿ ಎಂಬ ಮನುಷ್ಯನ ಅಹಂಕಾರ ಹಾಗೂ ಅವನ ತಣಿಯದ ದಾಹ ಈ ಮಲೆನಾಡನ್ನೂ ಆಪೋಷನ ತೆಗೆದುಕೊಳ್ಳುತ್ತಿದೆ.
।ಮುಂದಿನ ವಾರಕ್ಕೆ..।
ಕುಪ್ಪಳ್ಳಿಗೆ ಹೋಗಿ ಮಳೆಯಲ್ಲಿ ಮಿಂದು ಬಂದಂತಾಯಿತು
ಕುಪ್ಪಳ್ಳಿಗೆ ಹೋಗಿ ಮಳೆಯಲ್ಲಿ ಮಿಂದಂತಾಯಿತು