ಅರಗಿಸಿಕೊಂಡವರು
ಡಿ ಜಿ ನಾಗರಾಜ ಹರ್ತಿಕೋಟೆ
ಕಾರ್ಮಿಕರಿವರಂತೆ…
ತುತ್ತು ಅನ್ನಕ್ಕಾಗಿ ಅಲೆದವರು
ವಿರಮಿಸದೆ ದುಡಿದವರು
ನೋವನ್ನೇ ಉಂಡವರು
ಒಂಥರಾ ಅಸಾಮಾನ್ಯರು
ಏನಾದರೇನಂತೆ..
ಬೇಗುದಿಯ ಬಿಸಿಯಲ್ಲಿ
ಬೇಳೆ ಬೇಯಿಸಿಕೊಳ್ಳುವವರಿಗೆ
ನೊಂದು ಬೆಂದವರಾವ ಲೆಕ್ಕ
ತಾವು ಬೆಳೆಯುವುದಷ್ಟೇ ಪಕ್ಕಾ
ದುರಂತವೆಂದರೆ….
ಬದುಕು ಲೆಕ್ಕಾಚಾರದ ಸಂತೆ
ಕಾರ್ಮಿಕರದು ಬವಣೆಗಳ ಕಂತೆ
ಬೆವರ ಹನಿಗೆ ನಿಜದ ಬೆಲೆಯಿಲ್ಲ
ಲೆಕ್ಕವಿಲ್ಲದವರಿಗೆ ದನಿಯಿಲ್ಲ
ವಿಪರ್ಯಾಸವೆಂದರೆ…
ಮಹಲಲಿರುವವಗೆ ಮಾತ್ರ ಕಾರುಬಾರು
ಮಹಲು ಕಟ್ಟಿದವನಿಗಿಲ್ಲ ಸೂರುಪಾರು
ನೆರಳಸುಖಿಗಳಿಗೆ ಎಲ್ಲವೂ ಲಭ್ಯ
ಬಿಸಿಲ ಶ್ರಮಿಕರಿಗದೋ ಅಲಭ್ಯ
ವಾಸ್ತವವೆಂದರೆ…
ಕಾಯಕದಲ್ಲಿ ಕೈಲಾಸ ಕಂಡವ
ಕರ್ಮದಲಿ ಧರ್ಮವ ಕಂಡವ
ಭೋಗಿಯಲ್ಲವನು ತ್ಯಾಗಿ
ನಾಡು ಕಟ್ಟಿದ ನಿಜಯೋಗಿ
ತುಂಬಾ ಅರ್ಥಗರ್ಭಿತ ಕವಿತೆ.. ಇಂದಿನ ವಾಸ್ತವಿಕತೆಗೆ ಹಿಡಿದ ಕನ್ನಡಿ ಕೂಡ..
ಕಾರ್ಮಿಕರ ಕಷ್ಟ ಇನ್ನೆಷ್ಟಿದೆ ಪಾಪ? ಕವನ ಚನ್ನಾಗಿ ಮೂಡಿದೆ ಬ್ರೋ
ಮಹಲಲಿರುವವರಿಗೆ ಮಾತ್ರ ಕಾರುಬಾರು, ಮಹಲ ಕಟ್ಟಿದವರಿಗಿಲ್ಲ ಸೂರುಪಾರು _ ವಾಸ್ತವತೆಯ ಕಣ್ತೆರೆಸುವ ಸಾಲು, ಕವನ ಚೆನ್ನಾಗಿದೆ