-ಗೀತಾ ದೊಡ್ಮನೆ
ನಡೆ ನುಡಿ ನಿಷ್ಕಲ್ಮಷ, ಪರಿಶುಭ್ರ ಆಂತರ್ಯ,
ಸರಳ, ಸುಂದರ-ಬಹಿರಂಗ ವ್ಯವಹಾರ,
ಅಸ್ಖಲಿತ ಉಚ್ಚಾರ, ನಾದವೇ ಶೃಂಗಾರ..
ಹಣೆಯ ಮೇಲಿನ ಕುಂಕುಮವೋ, ವಿಭೂತಿಯೋ –
ಯೋಗ-ಸಾಧಕಿಯಂಥ ದಿವ್ಯತೇಜ!
ತಲೆ-ತಲಮಾರುಗಳ ತಣಿಸಿ
ನಾದದೊರತೆಯಲಿ ಮಣಿಸಿ
ತನ್ಮಯತೆಯಲಿ ಕುಣಿಸಿ
ರಾಗದಲಿ ಜಗವೇ ನೆನೆವಂಥ ವಿರಾಗಿಯಂತೆ!
ಒಂದು ಮುಗುಳುನಗೆಯಲರಳಿ,
ಕೋಟಿ ಎದೆಗಳ ಮೀಟಿ,
ನಗು. ನಲಿವು, ನೋವು, ಭಾವುಕತೆಯುಕ್ಕಿಸುವ –
ಧ್ವನಿ-ಮೃದಂಗ!, ಜಲ-ತರಂಗ.. –
ಅದು- ಮೊರೆವ ಭಾವದೀಟಿ!!
ಧ್ವನಿ ಸಂಚಾರಕೆ
ಗಗನವೇ ಎಲ್ಲೆ; ಮುಗಿಲೇ ಎಲ್ಲೆ!
ತೀಕ್ಷ್ಣವೋ – ಕೆಂಡ ಸಂಪಿಗೆ;
ಮೃದುಲವೋ – ಜಾಜಿ ಮಲ್ಲಿಗೆ!
ಕಸ್ತೂರಿ ಕನ್ನಡಕೆ ಅಭಿಮಾನದಿಂಪಾಗಿ – ಇಂಬಾದೆ..
ಹಲವೆಷ್ಟೋ ಭಾಷೆಗಳ ಚೆಲುವ ಮುತ್ತಾದೆ
ನೂರಾರು ಪಾತ್ರಗಳ ಶಾರೀರ – ಸಂಜೀವ,
ಲೋಕದನುದಿನದ ಜಂಜಡವ
ಮರೆಸುವಂತಾಡಿ, ಹಾಡಿ,
ನಗುವ ನಯನಗಳು, ಕಾತರ ತುಂಬಿದ ನಯನಗಳು,
ಕರೆವ ಕೋಗಿಲೆಗಳು, ಹೂವಾದ ಜೀವಗಳು..
……… ಎಷ್ಟೆಂದು ಲೆಕ್ಕವಿಲ್ಲ..
ಬಣ್ಣನೆಗೆ ಅಷ್ಟೊಂದು ದಕ್ಕದಲ್ಲ..
ಸ್ವರಗಳನುರಣನವಷ್ಟೂ.. ಉಳಿದಿದೆ!
ಸ್ವರಗಳನುರಣವನಷ್ಟೇ .. ಉಳಿಸಿದೆ!..
……..
ನಾಡು ಎಂದೂ ಮರೆಯದ,
ನಾದಪ್ರಪಂಚದಿಂದ ಎಂದೂ ಮರೆಯಾಗದ,
ಗಾನರೂಪ ಎಸ್. ಜಾನಕಿ ಅವರಿಗೆ ಭಾವಪೂರ್ಣ ನುಡಿನಮನ.






0 Comments