ಬದರಿನಾಥ್ ಪಳವಳ್ಳಿ
ಪರಿಸರವು ಚಹರೆಗಳು
ಮಂಕು ಕವಿದಂತೆ ಗೋಚರಿಸಿ
ತಳಮಳದಿ ಅಟಮಟಿಸಿದ್ದೆ,
ಯಾಕಿನಿತು ಜಿಡ್ಡು ಓ ಕರ್ತಾ
ಹರಳೆಣ್ಣೆ ಲೇಪಿತವೇಕಿದು
ಜಗದ ನಗು ಗ್ರೀಸುಗ್ರಸ್ತ!
ನಸೀಬುಗೇಡಿಗೆ ಕೈಗತ್ತದು
ಮರದ ಬುಡವಗೆದರೂ
ಕಂತೆ ಕಂತೆ ರೊಕ್ಕದ ಚೀಲ,
ಕಾಡುಗಳ್ಳನೆಂದೋ ಬಚ್ಚಿಟ್ಟ
ಸಿಕ್ಕವನಿಂದು ತಾ ಗೋಳಿಟ್ಟ
ಈಗವು ಅಮಾನ್ಯ ನೋಟು
ನಿನ್ನ ಲೀಲೆಗಳ ಮರ್ಮ
ಸಾಪ್ತಾಹಿಕದ ಪದಬಂಧ,
ಮೇಲಿಂದ ಕೆಳಗಿನ ಸಾಲು
ಪಟ್ಟನೆ ಅರ್ಥವಾಗದ ರಚನೆ
ಕಾಯಬೇಕು ಮರು ವಾರಕೆ
ನಡುವಣ ಅಡ್ಡಲ ಪದಕೂ
ಪ್ರಶ್ನೆ ಪುಂಖಾನು ಪುಂಖ,
ತಿಕ್ಕಿಯೇ ತಿಕ್ಕಿದೆ ನೇತ್ರದ್ವಯ
ನನ್ನ ನೋಟದ ಮೇಲೇ
ಡೌಟಾವರಸಿ ದೌಡು ತೆಗೆದೆ,
ಬಡಿದೆ ಕಣ್ಣ ವೈದ್ಯರ ಕದವ
ಕಣ್ಣೀರು ರಸೀತಿ ತುಂಬುವಾಗ
ನಸು ನಕ್ಕ ನೇತ್ರ ತಜ್ಞ,
ಧೂಳುಮಯ ಕನ್ನಡಕವ
ಸಿಂಪಡಿಸಿ ಒರೆಸಿ ಕೈಗಿಟ್ಟ!
0 ಪ್ರತಿಕ್ರಿಯೆಗಳು