ಬಿ ಶ್ರೀನಿವಾಸ ಅವರ ‘ಸೊಂಡೂರಿನ ಕಗ್ಗತ್ತಲೆಯ ಕಥನಗಳು’
ಈ ಕೃತಿಯನ್ನು ‘ದಿನಮಾನ’ ಪ್ರಕಾಶನ ಪ್ರಕಟಿಸಿದೆ.
ಈ ಕೃತಿಯ ಕುರಿತು ನಾಮದೇವ ಕಾಗದಗಾರ ಅವರು ಬರೆದ ಬರಹ ಇಲ್ಲಿದೆ.
-ನಾಮದೇವ ಕಾಗದಗಾರ
ಗಣಿಗಾರಿಕೆಯ ರಕ್ತಸಿಕ್ತ ಲಾಭದಲ್ಲಿ ಮೌನವಾದ ಊರುಗಳ ರಕ್ತ ಕಣ್ಣೀರು ತೋರಿಸುವ “ಸೊಂಡೂರಿನ ಕಗ್ಗತ್ತಲೆಯ ಕಥನಗಳು”:
”ಬಿಸಿಲು ಸೀಮೆಯ ಮಲೆನಾಡು” ಎಂಬ ಅನ್ವರ್ಥ ನಾಮದಿಂದ ಕರೆಯಲ್ಪಡುತ್ತಿದ್ದ ಬಳ್ಳಾರಿ ಜಿಲ್ಲೆಯ ಸೊಂಡೂರು, ಇಂದು ಕೇವಲ ಕೆಂಪು ಧೂಳಿನಿಂದ ಆವೃತವಾದ ಗಾಯದ ಮುದ್ದೆಯಂತೆ ಭಾಸವಾಗುತ್ತಿದೆ.
ಹಾವೇರಿ ಹಾಗೂ ರಾಣೇಬೆನ್ನೂರು ನ್ಯಾಯಾಲಯದ ಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ, ಪ್ರಸ್ತುತ ದಾವಣಗೆರೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಶ್ರೀನಿವಾಸ ರವರು ಕಟ್ಟಿಕೊಟ್ಟಿರುವ ‘ಸೊಂಡೂರಿನ ಕಗ್ಗತ್ತಲೆಯ ಕಥನಗಳು’ ಎಂಬ ಕೃತಿ ಕೇವಲ ಅಕ್ಷರಗಳ ಗುಚ್ಛವಲ್ಲ; ಅದು ಆಧುನಿಕ ನಾಗರಿಕತೆಯು ಪ್ರಕೃತಿ ಮತ್ತು ಮನುಷ್ಯತ್ವದ ಮೇಲೆ ನಡೆಸಿದ ಬರ್ಬರ ದಾಳಿಯ ದಾಖಲೆಯ ಪುಸ್ತಕ;
ನೆಮ್ಮದಿಯಿಲ್ಲದ ನಾಳೆಗಳ ಬಗ್ಗೆ ಎಚ್ಚರಿಸುವ ಈ ಕೃತಿ, ಇಂದಿನ ಓದುಗನ ಮನಸ್ಸನ್ನು ಗಾಸಿಗೊಳಿಸುವುದರ ಜೊತೆಗೆ ವ್ಯವಸ್ಥೆಯ ಕ್ರೂರತೆಗೆ ಸಾಕ್ಷಿ ನುಡಿಯುತ್ತದೆ.
ಸಂಡೂರಿನ ಪರ್ವತ ಶ್ರೇಣಿಗಳು ಕೇವಲ ಕಲ್ಲುಗಳ ರಾಶಿಯಲ್ಲ, ಅವು ಇಲ್ಲಿನ ಜೀವಸಂಕುಲದ ಪಾಲಿನ ಆಧಾರಸ್ತಂಭಗಳು. ಕಬ್ಬಿಣದ ಅದಿರನ್ನು ಕಬಳಿಸುವ ಹಪಾಹಪಿಯಲ್ಲಿ ಸಬಲರು ನಡೆಸಿದ ಗಣಿಗಾರಿಕೆ ಇಲ್ಲಿನ ಪರಿಸರ ಸಮತೋಲನವನ್ನು ನುಚ್ಚುನೂರು ಮಾಡಿದೆ. ಗಣಿಗಾರಿಕೆಯ ಪರಿಣಾಮವಾಗಿ ಉಂಟಾದ ‘ಸಾಂಸ್ಕೃತಿಕ ದಾಳಿ’ ಭಯ ಹುಟ್ಟಿಸುತ್ತದೆ. ಒಂದು ಊರಿನ ಸಂಸ್ಕೃತಿ ಕೇವಲ ಹಬ್ಬ-ಹರಿದಿನಗಳಲ್ಲಿಲ್ಲ, ಅದು ಅಲ್ಲಿನ ಮಣ್ಣು, ಮರ ಮತ್ತು ಕೆರೆಕಟ್ಟೆಗಳೊಂದಿಗೆ ಬೆಸೆದುಕೊಂಡಿರುತ್ತದೆ. ಈ ಸಂಪನ್ಮೂಲಗಳನ್ನು ಲೂಟಿ ಮಾಡಿದಾಗ, ಕೇವಲ ಗಣಿ ಅಗೆಯಲ್ಪಡುವುದಿಲ್ಲ, ಬದಲಾಗಿ ಒಂದು ಇಡೀ ಸಮುದಾಯದ ಅಸ್ಮಿತೆಯೇ ನಾಶವಾಗುತ್ತದೆ ಎಂಬುದನ್ನು ಅಪ್ಪಟ ಜೀವಪರ ನಿಲುವಿನ ಶ್ರೀನಿವಾಸ ರವರು ಇಲ್ಲಿಯ ಕಥಾನಕಗಳಲ್ಲಿ ಪ್ರತಿಪಾದಿಸಿದ್ದಾರೆ..
ರಾಜಕೀಯ ವರ್ಗ, ಉದ್ಯಮಿಗಳು ಮತ್ತು ಆಡಳಿತಶಾಹಿಯ ಅಧಿಕಾರಿವರ್ಗದ ಅಪವಿತ್ರ ಮೈತ್ರಿಯಿಂದ ಸಂಡೂರಿನ ನೈಸರ್ಗಿಕ ಸಂಪತ್ತು ಹಗಲು ದರೋಡೆಯಾಗಿರುವುದು ಈ ಕೃತಿಯಲ್ಲಿ ತೀವ್ರವಾಗಿ ಪ್ರತಿಫಲಿಸಿದೆ. “ಸಂಪನ್ಮೂಲಗಳು ಇರುವುದೇ ನಮ್ಮ ಭೋಗವಿಲಾಸಕ್ಕೆ” ಎಂಬ ಅಹಂಕಾರದ ಮನಸ್ಥಿತಿ, ಒಂದು ಪ್ರದೇಶವನ್ನು ಹೇಗೆ ಸ್ಮಶಾನವಾಗಿಸಬಹುದು ಎಂಬುದಕ್ಕೆ ಸೊಂಡೂರು ಕನ್ನಡಿ ಹಿಡಿದಿದೆ. ಇದು ಕೇವಲ ಒಂದು ಪ್ರದೇಶದ ಕಥೆಯಲ್ಲ, ಇಡೀ ಜಗತ್ತಿನ ಕಾರ್ಪೊರೇಟ್ ದಾಹದ ಸಂಕೇತವಾಗಿದೆ.
ಗಣಿಗಾರಿಕೆಯ ಧೂಳು ಮನುಷ್ಯರ ಶ್ವಾಸಕೋಶಕ್ಕೆ ಮಾತ್ರವಲ್ಲ, ಈ ನೆಲದ ನೆಮ್ಮದಿಗೂ ವಿಷ ಉಣಿಸಿದೆ. ರಕ್ತದಂತಹ ಕೆಂಪು ಮಣ್ಣಿನ ಮಿಶ್ರಣದಿಂದ ನೀರಿನ ಕಲ್ಮಶ ಮತ್ತು ವಾಯು ಮಾಲಿನ್ಯದಿಂದಾಗಿ ಮನೆಮನೆಗಳು ರೋಗರುಜಿನಗಳ ತಾಣವಾಗಿವೆ.
ಜೀವನೋಪಾಯವಿಲ್ಲದೆ, ಉಸಿರಾಡಲು ಗಾಳಿಯಿಲ್ಲದೆ ಜನ ಸಮುದಾಯಗಳು ತಮ್ಮ ಮೂಲನೆಲೆ ಬಿಟ್ಟು ಗುಳೆ ಹೋಗಿರುವ ಮನಕಲುಕುವ ಕಥಾನಕಗಳಿವೆ.
ಗಣಿ ಧೂಳಿನ ನಡುವೆ ಮಕ್ಕಳ ಬಾಲ್ಯ ಕಮರಿ ಹೋಗಿದೆ, ಶಾಲೆಯ ಹೊಸ್ತಿಲು ತುಳಿಯಬೇಕಾದ ಪಾದಗಳು ಅನಿವಾರ್ಯವಾಗಿ ಬದುಕಿನ ಸಂಕಷ್ಟಕ್ಕೆ ಸಿಲುಕಿವೆ. ಅಜ್ಜ-ಮುತ್ತಜ್ಜರ ನೆನಪುಗಳು, ಹಳ್ಳಿಯ ಸೊಗಡು, ಆಚರಣೆಗಳು ಎಲ್ಲವೂ ಯಾಂತ್ರಿಕ ಅಬ್ಬರದ ನಡುವೆ ಕಣ್ಮರೆಯಾಗಿವೆ. ಊರುಗಳು ಇಂದು ಸ್ಮಶಾನ ಮೌನಕ್ಕೆ ಶರಣಾಗಿವೆ.
ಲೇಖಕರು ಈ ಕೃತಿಯ ಮೂಲಕ ಕೇವಲ ನೋವನ್ನು ಹಂಚಿಕೊಂಡಿಲ್ಲ, ಬದಲಾಗಿ ಸಮಾಜದ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವ ಕೆಲಸ ಮಾಡಿದ್ದಾರೆ. ಇಲ್ಲಿನ ಒಂದೊಂದು ಕಥೆಯೂ ಒಂದು ದುರಂತ ನಾಟಕದಂತಿದೆ. ಅಭಿವೃದ್ಧಿ ಎನ್ನುವುದು ಮನುಷ್ಯನನ್ನು ಮತ್ತು ಪ್ರಕೃತಿಯನ್ನು ಸಂರಕ್ಷಿಸಬೇಕೇ ಹೊರತು, ಅವರನ್ನು ಬಲಿಪೀಠಕ್ಕೆ ತಳ್ಳಬಾರದು ಎಂಬ ಗಂಭೀರ ಸಂದೇಶ ಇಲ್ಲಿ ಅಡಗಿದೆ.
”ಸೊಂಡೂರಿನ ಕಗ್ಗತ್ತಲೆಯ ಕಥನಗಳು” ನಮಗೆ ನಾಳೆಯ ಭೀಕರತೆಯ ಬಗ್ಗೆ ಮುನ್ಸೂಚನೆ ನೀಡುವ ಕೃತಿಯಾಗಿದೆ. ನಾವು ಎಚ್ಚೆತ್ತುಕೊಳ್ಳದಿದ್ದರೆ, ಪ್ರತಿ ಊರೂ ಸೊಂಡೂರಿನಂತೆಯೇ ಮೌನವಾಗುವ ದಿನಗಳು ದೂರವಿಲ್ಲ. ಶ್ರೀನಿವಾಸ ರವರ ಈ ಕೃತಿ ಸಂಚಲನ ಮೂಡಿಸಬೇಕಾದ, ಪ್ರತಿಯೊಬ್ಬರೂ ಓದಿ ಮರುಗಬೇಕಾದ ಮತ್ತು ಯೋಚಿಸಬೇಕಾದ ಆಳವಾದ ನೋವಿನ ದಸ್ತಾವೇಜು ಆಗಿದೆ..
”ಸಂಡೂರಿನ ಈ ಕಗ್ಗತ್ತಲೆಯ ಕಥನಗಳು ಕೇವಲ ಕೆಂಪು ಧೂಳಿನ ವ್ಯಥೆಯಲ್ಲ; ಇದು ಅಭಿವೃದ್ಧಿಯ ಹೆಸರಿನಲ್ಲಿ ಆಹುತಿಯಾದ ಅಸಂಖ್ಯಾತ ಜೀವಗಳ ಆರ್ತನಾದ. ಮಣ್ಣಿನ ಗರ್ಭವನ್ನು ಬಗೆದವರು ಕೋಟಿಗಳ ಅರಮನೆ ಕಟ್ಟಿದರು, ಆದರೆ ಅದೇ ಮಣ್ಣನ್ನು ನಂಬಿದವರು ಇಂದು ಉಸಿರಿಗಾಗಿ ಪರದಾಡುತ್ತಿದ್ದಾರೆ. ಪ್ರಕೃತಿಯ ಮೇಲಿನ ಈ ಅತ್ಯಾಚಾರ ನಿಲ್ಲದಿದ್ದರೆ, ನಾಳೆ ನಮ್ಮ ಇಡೀ ನಾಗರಿಕತೆಯೇ ಇತಿಹಾಸದ ಕಸದ ಬುಟ್ಟಿಗೆ ಸೇರುವುದರಲ್ಲಿ ಸಂಶಯವಿಲ್ಲ. ನೆನಪಿರಲಿ, ಭೂಮಿಯ ಸಂಪತ್ತು ನಮ್ಮ ಹಸಿವಿಗಾಗಿಯೇ ಹೊರತು ಹಪಾಹಪಿಗಲ್ಲ!”
ಈ ಕೃತಿಗೆ ಮುನ್ನುಡಿ ಬರೆದಿರುವ ಪುರುಷೋತ್ತಮ ಬಿಳಿಮಲೆಯವರು ಹೇಳಿದಂತೆ ಪರಿಸರ ನಾಶದ ಬಗೆಗೆ ಇಷ್ಟೊಂದು ಹೃದಯಂಗಮವಾದ ಈ ಕೃತಿ ಅರ್ಥವಾಗಬೇಕಾದರೆ ಧ್ಯಾನಿಸಿ ಓದಬೇಕು..






ಅರ್ಥಪೂರ್ಣ ವಿಮರ್ಶೆ.