-ಎಂ.ವಿ. ಶಶಿಭೂಷಣ ರಾಜು
ಎಲ್ಲರೂ ಹೊರಡುತ್ತಾರೆ
ಎಲ್ಲರೂ ಹೊರಡುತ್ತಾರೆ,
ಕೆಲವರು ಮೌನವಾಗಿ,
ಕೆಲವರು ಶಬ್ದ ಮಾಡುತ್ತಾ,
ಮತ್ತೆ ಕೆಲವರು ಯಾರಿಗೂ ತಿಳಿಯದೆ,
ಸುಳಿವೇ ನೀಡದೆ.
ಆದರೂ ವೇದ್ಯವಾಗುತ್ತದೆ
ಅವರ ಇಲ್ಲದಿರುವಿಕೆ.
ಸಮಯ ಮುನ್ಸೂಚನೆ ನೀಡುವುದಿಲ್ಲ,
ಸಮಯದ ಅರಿವು ಎಲ್ಲರಿಗೂ ಇದೆ;
ಆದರೂ, ನಾವೇ ನಿರಂತರ ಎಂದು ಬೀಗುತ್ತೇವೆ.
ಹೊರಡುವವರ ನೆನಪು ಕಾಡುತ್ತದೆ,
ಆದರೆ, ಹೊರಡಲು ತಯಾರಾಗುತ್ತಿರುವವರೊಂದಿಗೆ
ಕಳೆಯುವ ಒಂದು ಕ್ಷಣ
ಎದೆ ತುಂಬುತ್ತದೆ ಸದಾ.
ಸರದಿಯಲ್ಲಿ ಎಲ್ಲರೂ ನಿಲ್ಲಲೇಬೇಕು,
ಆ ಸರದಿ ಮುಗಿಯುವುದೇ ಇಲ್ಲ.
ಆದರೆ ಆ ಸರದಿಯಲ್ಲಿ ಜೊತೆಗಿರುವವರಿಗೆ
ಒಂದು ಮಂದಹಾಸ ಬೀರಿದರೆ ಸಾಕು,
ಪಯಣ ಸಾಗುತ್ತದೆ ಹಿತವಾಗಿ.






0 Comments