-ಪ್ರೊ ಸಿ ಎಸ್ ಆನಂದ
ಸ್ವಾಭಿಮಾನದ ಸಮುದ್ರ ಅಂಬೇಡ್ಕರ್
ಭವ್ಯ ಭಾರತ ರಾಷ್ಟ್ರದ ಅಮರ ಜೀವಚೇತನ
ಮೂಡಣದ ಮುಗಿಲಲ್ಲಿ ಬೆಳಗುವ ಸೂರ್ಯನಾದೆ
ನೀನಾದೆ ಜಗದ ಮಹಾಮಾನವತಾವಾದಿ
ಧ್ವನಿ ಇರದವರಿಗೆ ಧೈರ್ಯ ತುಂಬಿದ ಧೀಮಂತ
ದೀನ -ದಲಿತರ ಬದುಕಿಗೆ ನೀನು ಹೊಂಗಿರಣವಾದೆ
ಭಾರತ ದೇಶದ ಹೆಮ್ಮೆಯ ಜ್ಞಾನ ಸಮುದ್ರ
ಅದಕ್ಕೆಂದೆ ನಿನ್ನ ಹುಟ್ಟು ಹಬ್ಬದ ದಿನವ
ವಿಶ್ವ ಸಂಸ್ಥೆ ಘೋಷಿಸಿದೆ ಜಗದ ಜ್ಞಾನ ದಿನವೆಂದು
ಊರು – ಕೇರಿಗಳ ಗೋಳು ಕಾಡು – ಮೇಡಿನ ಬಾಳು ನೋಡಿ ನೊಂದೆ
ಮಣ್ಣಿಗಂಟಿದ ಬದುಕುಗಳ ಬಾಳಿನಲ್ಲಿ ಬೆಳಕು ತಂದೆ
ಸಮಸಮಾಜದ ಕನಸು ಕಂಡ ಕನಸುಗಾರ
ಸಂವಿಧಾನ ಶಿಲ್ಪಿಯಾದೆ ವಿಶ್ವಕ್ಕೆಲ್ಲ ಬೇಕಾದೆ
ಬೆಳಕು ಬತ್ತಿದ ಎದೆಗಳಿಗೆ ಬೆರಗಿನ ಅಕ್ಷರ ತೋರಿಸುತ
ಶಿಕ್ಷಣ -ಸಂಘಟನೆ-ಹೋರಾಟದ ಮಂತ್ರ ಬೋಧಿಸಿದೆ
ಬದುಕಲ್ಲಿ ಕಷ್ಟಗಳೆಷ್ಟೇ ಬಂದರೂ ಕುಗ್ಗಲಿಲ್ಲ
ಹೋರಾಟದ ಬೆವರ ದಾರಿಯ ನಡೆದು ನಡೆಯುತ್ತ
ಛಲವಿದ್ದಲ್ಲಿ ಫಲವಿದೆ ಬಲವಿದ್ದಲ್ಲಿ ಗೆಲುವಿದೆಯೆನ್ನುತ
ಓದು -ಬರಹದ ಹವ್ಯಾಸದಲಿ ಹಣೆಬರಹ ಬದಲಿಸಿಕೊಂಡೆ
ಜ್ಞಾನದಲಿ ಯಾರಿಗೂ ನಿಲುಕದಷ್ಟು ಎತ್ತರಕೆ ಬೆಳೆದೆ
ಸ್ವಾತಂತ್ರ್ಯ – ಸ್ವಾಭಿಮಾನದ ಪಾಠ ಹೇಳಿದೆ
ಸಂವಿಧಾನವೇ ಸುಭದ್ರ ಆಡಳಿತದ ಕೈ ದೀವಿಗೆಯನ್ನುತ
ಭಾರತದ ಉಜ್ವಲ ಭವಿಷ್ಯಕ್ಕೆ ಬೃಹತ್ ಸಂವಿಧಾನ ರಚಿಸಿದೆ
ಬುದ್ಧಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿಯನ್ನುತ
ಎಲ್ಲರ ಹೃದಯದಲಿ ನೀನು ಮನೆಯ ಮಾಡಿದೆ
ಸಾಮಾಜಿಕ ಸಮಾನತೆಯ ಸಂದೇಶ ಸಾರುತ
ಮೌನವೇ ಮಾತಾದ ಮಹಾ ಬುದ್ಧನ ನಸುನಗೆ ಕಂಡು
ಬೌದ್ಧ ಮತವ ಸ್ವೀಕರಿಸಿ ಬುದ್ಧನ ಮಾನವೀಯತೆ ಮೆರೆದೆ






0 Comments