೨೦೨೬ ನೇ ಸಾಲಿನ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿಯು ನಭಾ ಅವರ ‘ಹುಟ್ಟಿಬಂದಿ ಎಲ್ಲಮ್ಮನಾಗಿ..’ ಎಂಬ ಕಥೆಯ ಹಸ್ತಪ್ರತಿಗೆ ದೊರೆತಿದೆ. ಕಥೆಗಾರರಾದ ಚನ್ನಪ್ಪ ಅಂಗಡಿ ಮತ್ತು ಗಾಯತ್ರಿ ರವಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ಈ ಪುರಸ್ಕಾರವು ಐದು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ. ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಹಾಗೂ ಶ್ರೀಮತಿ ವಿಜಯಾ ಅಗಸನಕಟ್ಟೆ ಸಹಯೋಗದಲ್ಲಿ ನಡೆವ ಸತತ ಒಂಬತ್ತನೇ ವರ್ಷದ ಸ್ಪರ್ಧೆಯಿದಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ ಜೂನ್ ತಿಂಗಳಲ್ಲಿ ನೆರವೇರಿಸಲಾಗುವುದು ಎಂದು ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಥೆಗಾರ್ತಿಯ ಪರಿಚಯ:
ನಭಾ, ಮೂಲತಃ ಧಾರವಾಡದವರಾಗಿದ್ದು ಸಧ್ಯ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಪ್ರಿಂಟ್ ಮೇಕಿಂಗ್ ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. ಚಿತ್ರಕಲೆ ಇವರ ಪ್ರಧಾನ ಅಭಿವ್ಯಕ್ತಿ ಮಾಧ್ಯಮವಾಗಿದ್ದರೂ ಸಾಹಿತ್ಯದಲ್ಲೂ ಬಾಲ್ಯದಿಂದಲೇ ಆಸಕ್ತಿ ಹೊಂದಿದ್ದು, ಕವಿತೆ ಕತೆ ಬರೆಯುತ್ತಿದ್ದಾರೆ. ಇವರ ‘ಚಿಟ್ಟೆ’ ಕವನ ಸಂಕಲನಕ್ಕೆ ಕರ್ನಾಟಕ ಬಾಲವಿಕಾಸ ಅಕೆಡೆಮಿಯ ಮಕ್ಕಳ ಚಂದಿರ ಪ್ರಶಸ್ತಿ ದೊರೆತಿದೆ. ಪ್ರಜಾವಾಣಿ ವರ್ಣಚಿತ್ರ ಬಹುಮಾನವೂ ಬಂದಿದೆ. ಇವರು ಹತ್ತಾರು ಕನ್ನಡ ಕೃತಿಗಳಿಗೆ ಮುಖಪುಟ ರಚಿಸಿದ್ದು, ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಇವರ ವರ್ಣಚಿತ್ರಗಳು ಪ್ರಕಟವಾಗಿವೆ. ಇತ್ತೀಚೆಗೆ ಇವರು ಸೃಜನಶೀಲ ವಿಭಾಗದಲ್ಲಿ ‘ಟೋಟೊ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಇದೀಗ ಇವರ “ಹುಟ್ಟಿಬಂದಿ ಎಲ್ಲಮ್ಮನಾಗಿ” ಕಥೆಗೆ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಸ್ಪರ್ಧೆ-೨೦೨೬ ರ ಬಹುಮಾನ ಲಭಿಸಿದೆ.






0 Comments