ನನ್ನ ಕಥನದೊಳಗೆ ನಾನು ಕಂಡಷ್ಟು
ದೇವನೂರ ಮಹಾದೇವ
ಮುಖಪುಟ ಚಿತ್ರ: ಇರ್ಶಾದ್ ಮೂಡಬಿದ್ರಿ
“ದಿಕ್ಕಿಲ್ಲದವನಂತೆ ಕತ್ತಲಲ್ಲಿ ನಡೆದಂತೆ ನಾನಿಟ್ಟ ಹೆಜ್ಜೆಗಳೇ ನನಗೆ ದಿಕ್ಕು ತೋರಿಸಿದವೇನೊ ಅನ್ನಿಸುತ್ತದೆ. ಮುಂದೆ ಹೆಚ್ಚೆಚ್ಚು ಮೌಖಿಕವೂ ಜಾನಪದೀಯವೂ ಆಗುತ್ತೇನೆ. ಹಾಗೆ ನನ್ನ ಭಾಷೆ ಹೆಚ್ಚು ಮೌಖಿಕವಾಯ್ತು ಎಂದರೆ ಅದು ಯಥಾವತ್ತಾಗಿ ಮೌಖಿಕವೂ ಅಲ್ಲ.
ಯಾವುದನ್ನು ಮೂಡಿಸಬೇಕಾಗಿದೆಯೊ ಆ ವಸ್ತು, ಆ ಜೀವ ಆಲಿಸಿ ಅದರ ನುಡಿತಕ್ಕೆ ಅಕ್ಷರ ಕೊಡುವ ಪ್ರಯತ್ನದಂತೆ ಭಾಷೆ ನನ್ನ ಕಥನಗಳಲ್ಲಿ ಉಂಟಾಗುತ್ತದೆ. ಹಾಗಾದರೆ ಇದು ಹೊಸ ಪ್ರಯೋಗವೇ?
ಪೊಲೀಸ್ ಲಾಕಪ್ನಲ್ಲಿ ನಾನು ಮೊದಲ ಕತೆ ಬರೆದೆ. ಸಾಧಾರಣವಾದ ಆ ಕತೆಯ ಹೆಸರು ‘ಕತ್ತಲ ತಿರುವು’ ಅಂತ. ನನ್ನ ಅಪ್ಪ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದರು.
ನಾನು ಪಿಯುಸಿಯಲ್ಲಿ ಇಂಗ್ಲಿಷ್ ಮತ್ತು ವಿಜ್ಞಾನದಲ್ಲಿ ಫೇಲಾಗಿದ್ದೆ. ನಾನು ಫೇಲಾಗಲು, ಕತೆ ಪುಸ್ತಕಗಳನ್ನು ಓದುವ ನನ್ನ ಹವ್ಯಾಸವೇ ಕಾರಣ ಎಂದು ಪಠ್ಯಪುಸ್ತಕಗಳ ಜತೆ ನನ್ನನ್ನು ಲಾಕಪ್ಗೆ ಕೂಡಿ ಹಾಕಿದರು. ಅಲ್ಲೆ ನನ್ನ ಮೊದಲ ಕತೆ ಹುಟ್ಟಿತು.
ಆಗ ನವ್ಯ ಸಾಹಿತ್ಯ ಉತ್ತುಂಗ ಸ್ಥಿತಿಯಲ್ಲಿ ಇತ್ತು. ವಿದ್ಯಾರ್ಥಿಯಾಗಿದ್ದ ನನ್ನ ಒಡನಾಟವೂ ಕೂಡ ಪ್ರಮುಖ ನವ್ಯ ಸಾಹಿತಿಗಳ ಜೊತೆಗೇ ಇತ್ತು. ಈ ಪ್ರಭಾವದಲ್ಲಿ ಸಿಲುಕಿ ಮೂರ್ನಾಲ್ಕು ಕತೆಗಳನ್ನೂ ಬರೆದೆ. ಅವು ಹುಟ್ಟಿದ ಕತೆ ಅನ್ನಿಸುತ್ತಿರಲಿಲ್ಲ.
ಕಟ್ಟಿದ ಕತೆ ಅನ್ನಿಸುತ್ತಿದ್ದವು. ಈ ಅತೃಪ್ತಿಯಲ್ಲಿ ವಿದ್ಯಾರ್ಥಿ ದೆಸೆಯಲ್ಲೆ ಮತ್ತೆ ಮೂರು ಕತೆಗಳನ್ನು ಬರೆದೆ. ಆ ಮೂರು ಒಂದೊಂದು ಥರ. ಒಂದು ವರದಿಗೆ ಹತ್ತಿರವಿರುವಂತೆ, ಮತ್ತೊಂದು ಕೇಂದ್ರವೂ ಇಲ್ಲದ ಕತೆ, ಹೀಗೆ. ಆದರೆ ಮೂರಕ್ಕೂ ಒಂದು ಸಾಮಾನ್ಯತೆ ಇತ್ತು. ಅವು ವ್ಯಕ್ತಿ ಕೇಂದ್ರಿತ ಕತೆಗಳಾಗದೆ ಬದಲಾಗಿ ಸಮುದಾಯದ ಕತೆಯಾಗಲು ಹವಣಿಸುತ್ತಿದ್ದವು.
ಈ ಕತೆಗಳ ಮೂಲಕ ನಾನಿಟ್ಟ ಹೆಜ್ಜೆಗಳು ವ್ಯಕ್ತಿ ಪ್ರಜ್ಞೆಯಿಂದ ಸಮುದಾಯ ಪ್ರಜ್ಞೆಗೆ ನನ್ನನ್ನು ಸ್ಥಳಾಂತರಿಸಿಬಿಟ್ಟವು. ಇರಲಿ, ತಮಾಷೆ ಎಂದರೆ ದಲಿತ ಸಾಹಿತ್ಯ ಪರಿಕಲ್ಪನೆ ಮರಾಠಿ ಸಾಹಿತ್ಯದ ಮೂಲಕ ಭಾರತದಲ್ಲಿ ಪ್ರಚಲಿತವಾಗುವ ಮುನ್ನವೇ ಮೇಲಿನ ಕತೆಗಳು ಪ್ರಕಟವಾಗಿದ್ದವು. ತದನಂತರ ಇವು ದಲಿತ ಕತೆಗಳು ಎಂದು ಹೆಸರು ಪಡೆದವು. ಅದನ್ನೂ ಮೀರಿ ಕನ್ನಡದ ಪ್ರಾತಿನಿಧಿಕ ಉತ್ತಮ ಕತೆಗಳ ಸಾಲಿಗೂ ಸೇರಿದವು.
ಈ ಕತೆಗಳಾಗಲಿ, ಆ ನಂತರ ಬರೆದ ‘ಒಡಲಾಳ’, ‘ಕುಸುಮಬಾಲೆ’ಗಳಾಗಲಿ ಕನ್ನಡ ಸಾಹಿತ್ಯದಲ್ಲಿ ಯದ್ವಾತದ್ವಾ ಪ್ರಯೋಗಗಳು ಎಂದು ಸ್ವೀಕರಿಸಲ್ಪಟ್ಟಿವೆ. ಆದರೆ ಅವನ್ನು ನಾನು ಬರೆಯುವ ಗಳಿಗೆಗಳಲ್ಲಿ ಪ್ರಜ್ಞಾಪೂರ್ವಕವಾಗಿ ಪ್ರಯೋಗ ಎಂದು ಪ್ರಯತ್ನಪಟ್ಟೆನೆ? ನಾನು ಆ ಗಳಿಗೆಗಳಿಗೆ ಹಿಂದಕ್ಕೆ ಹೋಗಿ ಹುಡುಕಿದರೂ ಆ ಪ್ರಯೋಗ ಎಂಬುದು ನನಗೆ ಕಾಣಲಿಲ್ಲ.
ಲ್ಯಾಟ್ವೀಯನ್ ಲೇಖಕಿ ಇಂಗಾ ಅಬ್ಲೆ ಅವರ– ‘ವ್ಯಕ್ತಿಯೊಬ್ಬ ತನ್ನ ಭಾಷೆಯಲ್ಲಿ ನೀರಲ್ಲಿರುವ ಮೀನಿನಂತೆ ಇರುತ್ತಾನೆ/ಳೆ. ಹಾಗಾಗೇ ಲೇಖಕರಿಗೆ ತಮ್ಮ ಕಲಾಕೃತಿ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ’ ಎಂಬ ಮಾತು ನಿಜವಿರಬೇಕು. ಅದನ್ನು ನಾನೀಗ ಅನುಭವಿಸುತ್ತಿದ್ದೇನೆ.
ಇರಲಿ, ದಿಕ್ಕಿಲ್ಲದವನಂತೆ ಕತ್ತಲಲ್ಲಿ ನಡೆದಂತೆ ನಾನಿಟ್ಟ ಹೆಜ್ಜೆಗಳೇ ನನಗೆ ದಿಕ್ಕು ತೋರಿಸಿದವೇನೊ ಅನ್ನಿಸುತ್ತದೆ. ಮುಂದೆ ಹೆಚ್ಚೆಚ್ಚು ಮೌಖಿಕವೂ ಜಾನಪದೀಯವೂ ಆಗುತ್ತೇನೆ. ಹಾಗೆ ನನ್ನ ಭಾಷೆ ಹೆಚ್ಚು ಮೌಖಿಕವಾಯ್ತು ಎಂದರೆ ಅದು ಯಥಾವತ್ತಾಗಿ ಮೌಖಿಕವೂ ಅಲ್ಲ. ಯಾವುದನ್ನು ಮೂಡಿಸಬೇಕಾಗಿದೆಯೊ ಆ ವಸ್ತು, ಆ ಜೀವ ಆಲಿಸಿ ಅದರ ನುಡಿತಕ್ಕೆ ಅಕ್ಷರ ಕೊಡುವ ಪ್ರಯತ್ನದಂತೆ ಭಾಷೆ ನನ್ನ ಕಥನಗಳಲ್ಲಿ ಉಂಟಾಗುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ಕಿಸಿ
The link is not working. Please make the link `illi klikkisi’ work. Thanks.
thanks for bringing to our notice. the link is working now