ಚಿನ್ಮಯ ಹೆಗ್ಡೆ
ಅಜ್ಜ ಸಾಕಿದಂತೆ ನಾನು
ದನ ಸಾಕಲಿಲ್ಲ.
ಕೆಚ್ಚಲಿಗೆ ಕೈಹಚ್ಚಿ
ಸಾಲು ಕೂತ ಪಾತ್ರೆ ತುಂಬ
ಹಾಲು ಕರೆಯಲಿಲ್ಲ,
ನೊರೆಯ ರುಚಿ ಮರೆಯಲಿಲ್ಲ.
ಕೈಯಾರೆ ಕರಡಿ ನೀರುಮಾಡಿ
ಗೋಬರ್ ಗ್ಯಾಸಿನ ಟ್ಯಾಂಕಿಗೆ
ಸಗಣಿ ಹರಿಸಲಿಲ್ಲ,
ವಾಸನೆಯ ಸಹಿಸಲಿಲ್ಲ.
ಬೆರಣಿ ತಟ್ಟಲಿಲ್ಲ
ಗೊಬ್ಬರ ಹರಡಲಿಲ್ಲ
ಹೊರೆಗಟ್ಟಲೆ ಹುಲ್ಲು ಕೊಯ್ದು
ಹೊತ್ತು ತರಲಿಲ್ಲ.
ಕರುವಿನ ಅಟ್ಟೆ ಕೆತ್ತಲಿಲ್ಲ
ಆಗಾಗ ನೇವರಿಸಿದರೂ
ಮೈ ತೊಳೆಸಲಿಲ್ಲ
ಅಷ್ಟೇನೂ ಉಣುಗು ತೆಗೆಯಲಿಲ್ಲ.
ನಾನು ದನ ಸಾಕಲಿಲ್ಲ,
ಆದರೆ
ದನ ಸಾಕುವುದೆಂದರೆ
ಪುರಾಣ ಪಠಿಸುವುದಲ್ಲ
ಭಾಷಣ ಬಿಗಿಯುವುದಲ್ಲ
ಭಕ್ತಿಯಿಂದ ಕುಣಿಯುವುದಲ್ಲ
ಹೊಂಚು ಹಾಕುವುದಲ್ಲ
ಸಗಣಿ ಬಳಿಯುವುದಲ್ಲ
ಶಿಸ್ತು ಕಾಯುವುದಲ್ಲ
ದ್ವೇಷ ಬಿತ್ತುವುದಲ್ಲ
ಧರ್ಮ ಕರ್ಮಗಳಲ್ಲ
ಅಟ್ಟಾಡಿಸಿ ರಸ್ತೆ ಮಧ್ಯೆ
ಬಡಿದು ಕೊಲ್ಲುವುದಲ್ಲ
ಕವಿತೆ ಬರೆಯುವುದೂ ಅಲ್ಲ…
ದನ ಸಾಕುವುದೆಂದರೆ
ಮನೆ ಪಕ್ಕ ಕೊಟ್ಟಿಗೆಯಲ್ಲಿ
ದನ ಸಾಕುವುದು
ಅಷ್ಟೆ.
Excellent
Thank you sir…