ಇಂದಿಗೂ ನೆನಪಿದೆ
ಸಾರಾ ಅಬೂಬಕ್ಕರ್
ನನ್ನ ಪ್ರಥಮ ಲೇಖನ “ಪತ್ರಿಕೆ”ಯಲ್ಲಿ ಪ್ರಕಟವಾದ ದಿನ ಇಂದಿಗೂ ನನಗೆ ನೆನಪಿದೆ. ಕನ್ನಡದ ಯಾವ ಪತ್ರಿಕೆಯೂ ನನಗೆ ಪ್ರೋತ್ಸಾಹ ನೀಡದೆ, ನನ್ನ ಸಾಹಿತ್ಯಾಸಕ್ತಿಯೇ ಕುಂದತೊಡಗಿದ್ದ ಆ ದಿನಗಳಲ್ಲಿ, ನನ್ನ ಮನದಾಳದ ಭಾವನೆಗಳನ್ನು, ಕಂಡು ಕೇಳಿದ ಹಲವಾರು ಘಟನೆಗಳನ್ನು ಹರಿಯಬಿಡಲು ಹಾದಿ ಕಾಣದೆ ತಳಮಳಗೊಳ್ಳುತ್ತಿದ್ದ ಆ ದಿನಗಳಲ್ಲಿ “ಲಂಕೇಶ್ ಪತ್ರಿಕೆ” ನನ್ನ ಕಣ್ಣಿಗೆ ಬಿತ್ತು. ಅಂದು ಓದಲಾರಂಭಿಸಿದ “ಪತ್ರಿಕೆ”ಯನ್ನು ಇಂದಿನವರೆಗೂ ಓದುತ್ತಲೇ ಇದ್ದೇನೆ. ಇಲ್ಲಿ ನನ್ನ ಮನದಾಳದ ಭಾವನೆಗಳನ್ನು ಹರಿಯಬಿಡಲು ನನಗೊಂದು ಹಾದಿಯೊದಗಬಹುದು ಎಂಬ ನಿರೀಕ್ಷೆಯೇನೂ ಆಗ ನನಗಿರಲಿಲ್ಲ.
“ನನ್ನ ಈ ಜನ ಒಂದಾಗಬೇಕು” ಎಂದು ಲಂಕೇಶ್ ಅವರು, ಎಲ್ಲಾ ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದಲಿತರಿಗೆ ಕರೆ ಕೊಟ್ಟಾಗ ನನ್ನ ಮನದಲ್ಲುಣಿಸಿದ ಭಾವನೆಗಳನ್ನು ಕಾಗದದಲ್ಲಿ ಮೂಡಿಸಿ ಲಂಕೇಶ್ ಅವರಿಗೆ ಕಳುಹಿಸಿಕೊಟ್ಟೆ. ಅದು ಪತ್ರಿಕೆಯಲ್ಲಿ ಪ್ರಕಟವಾಗುವ ನಿರೀಕ್ಷೆಯೇನೂ ನನಗಿರಲಿಲ್ಲ. ಆದರೆ ಸಂಪಾದಕರು ಈ ಲೇಖನವನ್ನು ಓದಿದರೂ ನನಗೆಷ್ಟೋ ತೃಪ್ತಿಯಾಗುತ್ತದೆ ಎಂದೂ ಅವರಿಗೆ ಪತ್ರ ಬರೆದಿದ್ದೆ. ಒಂದೇ ವಾರದೊಳಗೆ ಅವರು “ಪತ್ರಿಕೆ”ಯ ಮುಖಪುಟದ ಪ್ರಥಮ ಲೇಖನವಾಗಿ ನನ್ನ ಲೇಖನವನ್ನು ಪ್ರಕಟಿಸಿ, ನನ್ನನ್ನು ಪ್ರೋತ್ಸಾಹಿಸದಿದ್ದರೆ ಇಂದು ಸಾರಾ ಅಬೂಬಕ್ಕರ್ ಎಂಬ ಲೇಖಕಿ ಇರುತ್ತಿರಲಿಲ್ಲ ಎಂಬ ಮಾತುಗಳನ್ನು ನಾನು ಅಂದಿನಿಂದ ಇಂದಿನವರೆಗೆ ಹಲವಾರು ವೇದಿಕೆಗಳಲ್ಲಿ ಹೇಳುತ್ತಲೇ ಬಂದಿದ್ದೇನೆ.
ಕೇವಲ ಇಪ್ಪತ್ತು ವರ್ಷಗಳಲ್ಲಿ ನನ್ನಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡವರು ಬಹುಶಃ ಕರ್ನಾಟಕ ಸಾಹಿತ್ಯ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಜನರೂ ಇರಲಾರರೆಂದು ಅಹಂಕಾರದಿಂದ ಅಥವಾ ಮೇಲರಿಮೆಯಿಂದ ಹೇಳುತ್ತಿಲ್ಲ; ಇದಕ್ಕೆ ಕಾರಣ ಲಂಕೇಶ್ ಎಂದು ವಿನೀತಳಾಗಿಯೇ ಹೇಳುತ್ತಿದ್ದೇನೆ. ಈ ಪ್ರಶಸ್ತಿಗಳನ್ನು ಪಡೆಯುತ್ತಿದ್ದ ಎಲ್ಲಾ ಸಂದರ್ಭಗಳಲ್ಲೂ ನನ್ನ ಕಣ್ಣೆದುರು ಮೊತ್ತ ಮೊದಲು ಸುಳಿಯುತ್ತಿದ್ದ ಚಿತ್ರ ಲಂಕೇಶ್ ಅವರದೇ ಆಗಿತ್ತು.
ಲಂಕೇಶರ ಆಳವಾದ ಅಧ್ಯಯನ ಶೀಲತೆ ಕಣ್ಣ ಮುಂದೆ ಮತ್ತೊಮ್ಮೆ ಕಾಣುವಂತೆ ಮಾಡಿದಿರಿ ಸಾರಾ ಮ್ಯಾಮ್,,,,,,, ಸತ್ಯವನ್ನು ಯಾವುದೇ ಅಳುಕಿಲ್ಲದೆ ಎತ್ತಿ ಹಿಡಿದ ಮಹಾ ಮಾನವ
ಮೇಡಂ ವಂದನೆಗಳು
ನಿಮ್ಮ ಅನಿಸಿಕೆ ಓದಿ ಸಂತಸವಾಯಿತು ನಿಮ್ಮ ಅಬಿಪ್ರಾಯಕ್ಕೆ ನನ್ನ ಸಹಮತವಿದೆ. ಸಾರಾ ಅಬೂಬಕ್ಕರ್ ಮಾತ್ರವೆ ಅಲ್ಲ ಭಾನು ಮುಷ್ತಾಕ್, ವೈದೇಹಿ, ರೇಖಾರಾಣಿ ಮತ್ತು ಬಿ.ಟ.ಲಲಿತಾ ನಾಯಕ ಮುಂತಾದ ಲೇಖಕಿಯರನ್ನು ಪ್ರೋತ್ಸಾಹಿಸಿ ಬೆಳೆಸಿದ್ದು ಲಂಕೇಶ ಪತ್ರಿಕೆ ಅದರಂತೆ ಅನೇಕ ಹೊಸ ಲೇಖಕರನ್ನೂ ಕೂಡ.