“ಬಸವಣ್ಣನಿಗೊಂದು ಪ್ರಿಂಟಿಂಗ್ ಪ್ರೆಸ್ ಬೇಕಿತ್ತು”
ಕಿ ರಂ ನಾಗರಾಜ
ಒಮ್ಮೆ ಲಂಕೇಶ್ ತುಂಬ ಗೆಲುವಿನ ಮೂಡ್ ನಲ್ಲಿ ಇದ್ದರು. ಬೇರೆ ಬೇರೆ ಮಾತುಗಳ ನಡುವೆ ನನ್ನನ್ನು “ಬಸವಣ್ಣನಿಗೆ ಏನು ಬೇಕಾಗಿತ್ತು ಗೊತ್ತೇನಯ್ಯ?” ಎಂದರು. ಅವರ ಪ್ರಶ್ನೆಯನ್ನೇ ನನ್ನ ಪ್ರಶ್ನೆ ಮಾಡಿಕೊಂಡು “ಏನು ಬೇಕಾಗಿತ್ತು ಹೇಳಿ ಸಾರ್” ಎಂದೆ. ದೀರ್ಘವಾಗಿ ಸಿಗರೇಟ್ ಎಳೆಯುತ್ತ “ನೋಡಯ್ಯ, ಬಸವಣ್ಣನಿಗೆ ಆ ಕಾಲಕ್ಕೇ ಒಂದು ಪ್ರಿಂಟಿಂಗ್ ಪ್ರೆಸ್ ಬೇಕಾಗಿತ್ತಯ್ಯ, ಅಷ್ಟೆ” ಅಂದರು.
ಅವರ ಮಾತು ನನ್ನನ್ನು ಹೊಕ್ಕು ಅನೇಕ ದಿಕ್ಕುಗಳಲ್ಲಿ ಯೋಚಿಸಲು ಶುರು ಮಾಡಿದೆ. ಬಸವಣ್ಣ ಆ ಕಾಲಕ್ಕೇ ದಿನಪತ್ರಿಕೆಯ, ವಾರಪತ್ರಿಕೆಯ ಸಂಪಾದಕನಾಗಿ ತಾನು ಹೇಳೋದನ್ನ ಹೇಳಿ ತನ್ನ ಸುತ್ತಣ ಸಮಾಜ, ಅದರಾಚೆಗೂ ತನ್ನ ಸಂವಾದ ಮಾಡುತ್ತಿದ್ದನೆಂದೂ ಆ ಹೊತ್ತು ಅವನು ಮಾಡಿದ ಸಂಘಟನೆ ಹೆಚ್ಚು ತೀವ್ರವಾಗಿ ಎಲ್ಲ ಕಡೆ ಹರಡುವ ಹಾಗೆ ಮಾಡುತ್ತಿದ್ದನೆಂದೂ ನಾನು ಮನಸ್ಸಿನಲ್ಲೇ ಅಂದುಕೊಂಡೆ.
ಬಸವಣ್ಣನವರಿಗೆ ಸಿಕ್ಕದ ಪ್ರಿಂಟಿಂಗ್ ಪ್ರೆಸ್ ನನಗೆ (ಲಂಕೇಶ್) ಸಿಕ್ಕಿದೆ. ನಾನೂ ಕೂಡ ಅದೇ ದಾರಿಯಲ್ಲಿ, ಅದಕ್ಕಿಂತ ಭಿನ್ನವಾಗಿ ಅಂಥ ಕೆಲಸ ಮಾಡ್ತಾ ಇದೀನಿ ಅನ್ನೋ ನಿಲುವು ಅವರದಿರಬಹುದು ಎಂದು ಯಾವಾಗಲೂ ಯೋಚಿಸುತ್ತೇನೆ. ಲಂಕೇಶ್ ಗೆ ಬರೆಯುವ ಬರವಣಿಗೆ, ಅದರ ಶಕ್ತಿ, ಮಾಂತ್ರಿಕತೆಯ ಅರಿವು ಅಪಾರವಾದದ್ದು. ಪರಿಮಿತಿಯಲ್ಲಿ ಪರಿಣಾಮ ಕಟ್ಟಿಕೊಡುವುದು ಹೇಗೆ ಎಂಬ ಯೋಚನೆ ಅವರದಾಗಿತ್ತು.
ಭಾವುಕತೆಗೆ ಕಡಿವಾಣ ಹಾಕಿ, ಸರಳ ಮಾತುಗಳ ಕರುಣೆಯಲ್ಲಿ ಕರಗಿಸುವುದನ್ನು ಖಡಾಖಂಡಿತವಾಗಿ ವಿರೋಧಿಸುತ್ತಿದ್ದ ಅವರ ಧ್ವನಿ ರಾಜಕೀಯ ಅಧಿಕಾರಕ್ಕಿಂತ ಬರವಣಿಗೆಯ ಶಕ್ತಿ ಹೆಚ್ಚು ಪರಿಣಾಮಕಾರಿಯಾದದ್ದು ಎಂಬುದನ್ನು ತಮ್ಮ ಬರಹಗಳ ಮೂಲಕ ಮಿಂಚಿಸಿದವರು ಅವರು.
ಏಕೀಕರಣೋತ್ತರದ ಕಳೆದ ಇಪ್ಪತ್ತೈದು ವರ್ಷಗಳು ನಾಡಿನ, ದೇಶದ ಚರಿತ್ರೆಯಲ್ಲಿ ತುಂಬ ಮಹತ್ವದ ಕಾಲ ಯಾವುದು ಅರ್ಥಪೂರ್ಣ? ಯಾವುದು ನಿರರ್ಥಕ? ಎಂಬ ದ್ವಂದ್ವಗಳ ಸುತ್ತ ಚಲಿಸುತ್ತಿರುವ ಈ ಸಂದರ್ಭದಲ್ಲಿ ಅವರ ಪ್ರಯೋಗ, ಸಾಧನೆ, ಸಿದ್ಧಿ ಇವುಗಳು ನಮ್ಮನ್ನು ಹೆಚ್ಚು ವಿಷಾದ ಮನಸ್ಸಿನವರನ್ನಾಗಿಯೂ ಆ ಮೂಲಕ ಗಂಭೀರ ಕ್ರಿಯೆಗಳತ್ತ ತೊಡಗುವವರನ್ನಾಗಿಯೂ ರೂಪಿಸಬೇಕಾಗಿದೆ.
anubhava mantapada punarnirmanada aase iddirABAHUDU LANKESHGE