ಇಮ್ತಿಯಾಜ್ ಬಿ. ಶಿರಸಂಗಿ
ಹದನಾಗಿ ಹಿಟ್ಟು ನಾದಿ ರೊಟ್ಟಿ ಬಡಿದು, ಮಕ್ಕಳಿಗೆಲ್ಲ ಉಣ ಬಡಿಸಿ ಅದ್ಯಾವ ಕಾಲವಾಯಿತು.
ಅವರು ಬದುಕಿದ್ದಾಗ ದಿನವೂ ರೊಟ್ಟಿಯಿಲ್ಲದೆ ಊಟವೇ ಮಾಡುತ್ತಿರಲಿಲ್ಲ.
ಎನುತ್ತಾ
ಅಕ್ಕಿ ಬಸಿದು ಗಂಜಿ ತಾಟಿಗಚ್ಚಿ ಮಕ್ಕಳಿಗೆಲ್ಲ ಉಣಿಸಿ ಹೊಲದ ಕೆಲಸಕ್ಕೆ ನಡೆದುಬಿಟ್ಟಳು..
ಸಾಹುಕಾರನ ಕಣ್ಣು ತಪ್ಪಿಸಿ ಹೇಗಾದರೂ ತಂದುಬಿಡುತ್ತೇನೆ ಇಂದು ಉಡಿಯಷ್ಟು ಜೋಳ.
ಅವನ ಎರಡು ಕಣ್ಣ್ಗಳು ನನ್ನ ಮೇಲೆಯೇ
ಥು ಇವನ ಜನ್ಮಕ್ಕಿಷ್ಟು,,,
ಅವರು ಸತ್ತಾಗ ಸ್ವಾರ್ಥದ ಕರುಣೆ ತೋರಿ
ನನ್ನ ಚಿತ್ತ ಕೆಡುವಿಕೊಳ್ಳುವ ಸಂಚು ಮಾಡಿದ್ದವನಲ್ಲವೇ ಈ ಮನೆಹಾಳs.
ನಾ ದೃಢವಾಗಿದ್ದರಿಂದ ಸರಿ ಹೋತು…
ಅಂದಿನಿಂದ ನನ್ನ ಸಣ್ಣ ತಪ್ಪನ್ನೆ ನಿರೀಕ್ಷಿಸುತ್ತಿದ್ದಾನಲ್ಲ..
ಕಾಮದ ಕನ್ನಡಕ ಧರಿಸಿದ ಅವನಿಗೆ ಕಾಣುವುದು
ಬರೀ
ನನ್ನ
ಮಾಂಸ ತುಂಬಿದ ತೊಗಲಿನ
ಮೊಲೆ, ಸೊಂಟ ತೊಡೆ ಇಡೀ ದೇಹ.
ಹಸಿದ ಹೊಟ್ಟೆ ಅವನಿಗೆ ಕಾಣುವುದೇ ಇಲ್ಲ
ಪಾಪಿ ಆತ…..
ಬಡವರ ಮನೆಯ ಮುಂದೆ ಅಲ್ಲವೇ
ಆಸೆಗಳು ಬೇಕಂತಲೇ ಮೆರವಣಿಗೆ ಹೋಗುವುದು.
ಇರಲಿ ಇರಲಿ
ನನ್ನ ಕಷ್ಟ ನನಗೆ,
ಯಾರಿಗೂ ಧೈರ್ಯವಿಲ್ಲ ಕೈ ಹಾಕಲು
ನನ್ನ ಸೆರಗಿಗೆ….
ಎಂದು ನಿಟ್ಟುಸಿರ ಬಿಟ್ಟಳು.
ಅದೇಗೋ ಕಣ್ಣು ತಪ್ಪಿಸಿ ಸೆರಗಲ್ಲಿ ಜೋಳ ತುಂಬಿಕೊಂಡು ಮನೆ ಸೇರಿದಾಗ,
ಕವಿದ ಮೋಡ…..
ಜೋಳ ಬೀಸಿ ರೊಟ್ಟಿ ಬಡಿದು ಮಕ್ಕಳಿಗೆ ಉಣಿಸಿ ಮಲಗುವ ವೇಳೆಗೆ,
ಮಿಂಚುತ್ತಿರುವ ಆಕಾಶ…..
ಗುಡುಗು ಸುತ್ತಲೂ
ಕಾರ್s ಗತ್ತಲು….
ಸೋರುತ್ತಿರುವ ಛಾವಣಿ…
ಧೋ ಧೋ
ಧಾರಾಕಾರ ಮಳೆ…
ಯಾವದೋ ಚೀಲ ಅಡ್ಡ ಮಾಡಿ ಮಡಿಲಲ್ಲಿ
ಮಕ್ಕಳಿಬ್ಬರನ್ನು ಮಲಗಿಸಿದ್ದಾಳೆ., ಬ್ರಹ್ಮಾಂಡದಲ್ಲಿ ಮಲಗಿದ ಮಕ್ಕಳಿಗೆ ಮಳೆ ಚಳಿಯ ಪರಿವಿಲ್ಲ
ಇಡೀ ರಾತ್ರಿ ಹೀಗೆ…
ಮುಂಜಾನೆ
ಸುತ್ತಲೂ,
ಮಂದ ಬೆಳಕು
ಚಿಲಿಪಿಲಿ ಸದ್ದು
ಉದಯಿಸುತ್ತಿರುವ ಸೂರ್ಯ….
ಮಡಿಲಲ್ಲಿ ಮಲಗೆದ್ದು ಮೈ ಮುರಿದ
ಮಕ್ಕಳಿಬ್ಬರೂ ಕಂಡಿದ್ದು,
ಗೋಡೆಗೆ ಆನಿಸಿ ಇನ್ನು ಮಲಗಿರುವ ಅಮ್ಮ
ಮತ್ತು
ತೂತಬಿದ್ದ ಛಾವಣಿಯಿಂದ, ರಾತ್ರಿ
ಅಮ್ಮ ಮಾಡಿದ್ದ ರೊಟ್ಟಿಯಂತೆ ಕಾಣುತ್ತಿರುವಸೂರ್ಯ…….
0 ಪ್ರತಿಕ್ರಿಯೆಗಳು