–ವನಜಾಕ್ಷಿ ಎಸ್ ಮರಳಕುಂಟೆ
ಬಂಡಿಯೊಳಗಣ ಬದುಕು
ಬದುಕಿನ ಚಕ್ರವನ್ನು ಎಲ್ಲರೂ ದೂಡುವವರೇ,
ಕೈ ಕಾಲ್ಗಳಿಗೆ ಸದಾ ಒಂದಿಲ್ಲೊಂದು ಕೆಲಸ ಹಚ್ಚಿ
ಸಂಸಾರ ನೊಗವ ಹೆಗಲಿಗೇರಿಸಿಕೊಂಡು,
ಸಿಟ್ಟು-ಸೆಡವು, ಹಸಿವು-ನೋವುಗಳ ಮೆಟ್ಟಿ ಎಳೆಯುವ ಬಂಡಿಯವರೇ..
ಒಮ್ಮೆ ಹಿಂಭಾರ, ಇನ್ನೊಮ್ಮೆ ಮುಂಭಾರವಾಗಿ
ಒಂದೇ ಎತ್ತಿನ ದುಡಿಮೆಗೆ ಕೈಗಾಯಗಳಾಗಿ
ಸರಿತೂಗಿಸಲು ಬರುವ ಜೊತೆಗಾತಿಗೆ ಕೈ ಚಾಚಿ
ಕುಸಿಯುವ ಮುನ್ನ ಬಾಚಿ
ಸಂಭಾಳಿಸುವವರೇ..
ಒಮ್ಮೆ ಹಳ್ಳ, ಒಮ್ಮೆ ಕೊಳ್ಳ
ಒಮ್ಮೆ ಮರಳು, ಒಮ್ಮೆ ಗುಡ್ಡ
ದಾರಿ ಇದ್ದಂತೆ ದೂಡಿ
ದುಃಖದಲಿ ಕುದ್ದು, ಕಣ್ಣೀರ ಬೆರಸಿ,
ಇರುವುದನೆ ಹಂಚಿ ತಿಂದು
ಬಂಡಿದೂಡುವವರೆ..
ನಿತ್ಯ ಕಾಯಕ, ಮರೆಯಲಿಲ್ಲ ಕ್ಷಣಕ
ರಟ್ಟೆ ಮುರಿದು ರೊಟ್ಟಿ ತಿನ್ನಿಸುವುದ
ನೋವ ನುಂಗಿ ನಗುವ ಹಂಚುವುದ
ಅಹಂ ಅನ್ನೇ ಮೆಟ್ಟಿ ಕಾರುಣ್ಯ ಮೆರೆಯುವುದ
ಬದುಕಿನ ಚಕ್ರವನು ಎಲ್ಲರೂ ದೂಡುವವರೇ
ಎಲ್ಲರದೂ ಬಂಡಿ, ದಾರಿ, ಗುರಿ ಭಿನ್ನಭಿನ್ನ…






ಅದಕ್ಕೆ ತಾನೆ ಬದುಕು ಜಟಕಾ ಬಂಡಿ ಎಂದದ್ದು ಡಿ.ವಿ.ಜಿ.
ಕವಿತೆ ನಮ್ಮದೇ ಬದುಕಿನ ವಿಶ್ಲೇಷಣೆ ಎನ್ನುವಂತಿದೆ. ಹೆಚ್ಚು ಹೆಚ್ಚು ಬರೆಯಿರಿ