ರಂಗಭೂಮಿಗೆ ತನ್ನನ್ನು ತಾನು ಅರ್ಪಿಸಿಕೊಂಡು ಬದುಕನ್ನು ಸವೆಸಿದ ಸಾಧಕರನ್ನು ಗುರುತಿಸಿ, ಮುಂದಿನ ತಲೆಮಾರಿಗೆ ಅವರನ್ನು ಪರಿಚಯಿಸಿ, ಗೌರವಿಸುವ ನಿಟ್ಟಿನಲ್ಲಿ, ನಟನದ ಅಧ್ಯಕ್ಷರಾಗಿದ್ದ ಶ್ರೀ ಎನ್.ಸುಬ್ರಹ್ಮಣ್ಯಂ ಅವರ ಗೌರವಾರ್ಥ ಕೊಡಮಾಡಲ್ಪಡುವ ಪ್ರತಿಷ್ಟಿತ ‘ನಟನ ಪುರಸ್ಕಾರ’ವನ್ನು ಈ ಬಾರಿ ರಂಗಭೂಮಿಯಲ್ಲಿ ಬಹುಕಾಲ ಜೀವನ ಸವೆಸಿ ಸಿನಿಮಾ, ಕಿರುತೆರೆ ಕ್ಷೇತ್ರದಲ್ಲಿ ಬಹು ದೀರ್ಘವಾಗಿ ತೊಡಗಿಕೊಂಡಿರುವ ಕನ್ನಡ ರಂಗಭೂಮಿಯ ಹಿರಿಯ ಕಲಾವಿದೆಯಾದ ಡಾ. ರಾಮೇಶ್ವರೀ ವರ್ಮಾ ಅವರಿಗೆ ಸಮರ್ಪಿಸಲಾಗುತ್ತಿದೆ.
ಸ್ಮರಣಿಕೆ, ಅಭಿನಂದನಾ ಪತ್ರ, ಮತ್ತು ನಗದು ಹಣವನ್ನು ಗಣ್ಯರು, ಪೋಷಕರು, ಮಕ್ಕಳ ನಡುವೆ ಹಿರಿಯ ಕಲಾವಿದೆಗೆ ನೀಡಲಾಗುವುದು. ಈ ಹಿಂದೆ ಈ ಪ್ರಶಸ್ತಿಗೆ ಭಾಜನರಾದವರೆಂದರೆ ಶ್ರೀಮತಿ ಲಕ್ಷ್ಮಿಬಾಯಿ ಏಣಗಿ ಬಾಳಪ್ಪ, ರಂಗಭೂಮಿ ಕಲಾವಿದೆ ಎಂ.ಎನ್.ಲಕ್ಷ್ಮಿದೇವಿ, ಸುಭದ್ರಮ್ಮ ಮನ್ಸೂರ್, ಆರ್.ಟಿ.ರಮಾ, ಗುಬ್ಬೀ ಕಂಪನಿಯ ಹಿರಿಯ ಕಲಾವಿದೆ ಶ್ರೀಮತಿ ಶಾಂತಮ್ಮ, ಶ್ರೀಮತಿ ಇಂದಿರಮ್ಮ, ಜಯಲಕ್ಷ್ಮಿ ಪಾಟೀಲ್, ಶ್ರೀಮತಿ ರಾಧಾ – ರುಕ್ಮಿಣಿ ಮುಂತಾದ ಅನೇಕ ಹಿರಿಯ ಕಲಾವಿದರು ಈ ಪುರಸ್ಕಾರ ಸ್ವೀಕರಿಸಿದ ಹಿರಿಯರು.
ಏಪ್ರಿಲ್ ೧೪ ಮಂಗಳವಾರ ಬೆಳಗ್ಗೆ ಕೃಷಮೂರ್ತಿಪುರಂನಲ್ಲಿರುವ ಬಿ.ಎಸ್.ಎಸ್. ವಿದ್ಯೋದಯ (ಭಗಿನಿ ಸೇವಾ ಸಮಾಜ) ಶಾಲೆಯ ಆವರಣದಲ್ಲಿ ನಡೆಯಲಿರುವ ಮಂಡ್ಯ ರಮೇಶ್ ಅವರ ನಟನ ಸಂಸ್ಥೆಯ ೨೪ನೇ ವರ್ಷದ `ರಜಾ-ಮಜಾ’ ಮಕ್ಕಳ ಬೇಸಿಗೆ ಶಿಬಿರದ ಆರಂಭದ ಸಂಭ್ರಮದಲ್ಲಿ ‘ನಟನ ಪುರಸ್ಕಾರ ೨೦೨೬’ನ್ನು ಸಮರ್ಪಿಸಲಾಗುವುದು.






0 Comments