-ತುಳಸಿ ಹೆಗಡೆ
ಅಣಕವಿದು ಸರಿಯೇ?
ಕಪ್ಪಾದ ಕೃಷ್ಣನಮ್ ನಮಿಸಿ ಪೂಜಿಸಲೆಂತು
ಕಪ್ಪಾದ ಮೈ ಬಣ್ಣ ಅಣಕಿಸಲ್ಕೆ
ತನ್ನ ತಾ ವೀಕ್ಷಿಸಲು
ಮನಸಿನ ಕತ್ತಲದು
ಕಾಣದದು ಕಾರ್ಮೋಡ
ತನ್ನ ಹೊಲಸೆ
ಅಣಕವಿದು ಸರಿಯೇ?
ದಪ್ಪಾದ ಗಣಪನಲ್ ಬೇಡುತಲಿ ಇಷ್ಟಾರ್ಥ
ಕಬ್ಬು ಮೋದಕವಿತ್ತು ಪ್ರಾರ್ಥಿಸಲ್ಕೆ
ತುಂಬಿದ ಮೈ ಕಂಡು
ಕಿಸಕಿಸನೆ ನಗುತಿರುವ, ಮನುಜನೇನಿನಗೊಂದು ಪ್ರಶ್ನೆ
ಅಣಕವಿದು ಸರಿಯೇ?
ಗಿಡ್ಡನೆಯ ವಾಮನನ ಅವತಾರಿ ಎಂದೆನುತ
ಬಾಗಿ ಶಿರವನು ಅವಗೆ
ಪ್ರಾರ್ಥನೆಯ ಗೈದು
ಕುಳ್ಳ ಕುಳ್ಳಿಯರೆನುತ ಅಪಹಾಸ್ಯ ಮಾಡುವರೇ
ಮನುಜನೇ ನಿನಗಿದೋ ಪ್ರಶ್ನೆ
ಅಣಕವಿದು ಸರಿಯೇ?

ತನ್ನ ನ್ಯೂನತೆಗಳಲಿ
ಸುಂದರತೆಯನು ಕಾಣಿ
ದೇವ ದೇವತೆಯರೇ ಇದಕುದಾಹರಣೆ
ನಿನಗಿಲ್ಲ ತಪ್ಪಹೊಣೆ
ಜಗವೇ ಮೌಢ್ಯದ ಕಣಜ
ನೀ ಚಂದ ನೀ ಚಂದ
ನೊಂದ ಮನವೇ






ಪ್ರಿಯ ತುಳಸಿ, ಚೆನ್ನಾಗಿ ಬರೆದಿದ್ದೀಯಾ
ದೇವ – ಮಾನವರ ಹೋಲಿಕೆಯೊಂದಿಗೆ.
ನೀನು ಹಾಕಿರುವ ಪ್ರಶ್ನೆ ಸಾರ್ವಕಾಲಿಕ..
ಜಗತ್ತು ಹೀಗೆಯೇ..