ಕೇಂದ್ರ ಸಾಹಿತ್ಯ ಅಕಾಡೆಮಿಯು ನೀಡುವ ಅನುವಾದ ಪುಸ್ತಕ ಪ್ರಶಸ್ತಿಗೆ ಹಿರಿಯ ಲೇಖಕರಾದ ಡಾ ಗುರುಲಿಂಗ ಕಾಪಸೆ ಅವರು ಭಾಜನರಾಗಿದ್ದಾರೆ.
ಡಾ ಕಾಪಸೆ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ವಿ ಸ ಖಾಂಡೇಕರ್ ಅವರ ‘ಒಂದು ಪುಟದ ಕಥೆ’ ಯು ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಆಯ್ಕೆಯಾಗಿದೆ. ‘ಒಂದು ಪುಟದ ಕಥೆ’ (ಮೂಲದಲ್ಲಿ ‘ಏಕಾ ಪಾನಾಚಿ ಗೋಷ್ಠ)ಯು ಖಾಂಡೇಕರ್ ಅವರ ಆತ್ಮಕಥೆಯಾಗಿದೆ.
ಪ್ರಶಸ್ತಿಯು ೫೦ ಸಾವಿರ ರೂ, ಹಾಗೂ ಸ್ಮತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ದೆಹಲಿಯಲ್ಲಿ ಜರುಗಲಿದೆ.
ಹಿರಿಯ ಲೇಖಕರಾದ ಡಾ ಬಸವರಾಜ ಕಲ್ಗುಡಿ, ಬಿ ಆರ್ ಲಕ್ಷ್ಮಣರಾವ್ ಹಾಗೂ ಡಾ ಸುಬ್ಬು ಹೊಲೆಯಾರ್ ಅವರು ತೀರ್ಪುಗಾರರಾಗಿದ್ದರು. ಡಾ ಸರಜೂ ಕಾಟ್ಕರ್ ಅವರು ಈ ಬಹುಮಾನದ ಸಮಿತಿಯ ಸಂಚಾಲಕರಾಗಿದ್ದರು.
ಖಾಂಡೇಕರ್ ಅವರು ಮರಾಠಿಯ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಲೇಖಕರು. ಅವರ ‘ಯಯಾತಿ ‘ ಎಂಬ ಕೃತಿಗೆ ಜ್ಞಾನಪೀಠ ಪ್ರಶಸ್ತಿಯು ಬಂದಿತ್ತು.
ಡಾ ಕಾಪಸೆಯವರು ಅನುವಾದಿಸಿದ ಖಾಂಡೇಕರ್ ಅವರ ಆತ್ಮಕಥೆಯು ಕಳೆದ ಶತಮಾನದ ಭಾರತದ ಅದರಲ್ಲಿಯೂ ಮಹಾರಾಷ್ಟದ ಕೊಂಕಣ ಭಾಗದ ಸಾಮಾಜಿಕ, ಆರ್ಥಿಕ, ರಾಜಕೀಯ ,ಜಾತೀಯ ಸ್ಥಿತಿಗತಿಗಳ ಸಮಗ್ರವಾದ ವಿವರಣೆ ನೀಡುತ್ತದೆ. ವಿಶೇಷವೆಂದರೆ ಖಾಂಡೇಕರ್ ಅವರು ಕರ್ನಾಟಕದ ಅದರಲ್ಲೂ ಬೆಳಗಾವಿ ಜಿಲ್ಲೆಯ ಅಳಿಯ. ಖಾನಾಪುರ ತಾಲೂಕಿನ ಅಸೋಗಾ ಗ್ರಾಮದ ಮಣೇರಿಕರ್ ಕುಟುಂಬದ ಉಷಾ ಅವರು ಖಾಂಡೇಕರ್ ರ ಹೆಂಡತಿ. ಮದುವೆಗಾಗಿ ಅವರು ಮಹಾರಾಷ್ಟ್ರದ ರತ್ನಾಗಿರಿಯಿಂದ ಅಸೋಗಾ ಗ್ರಾಮದ ವರೆಗೆ ಚಕ್ಕಡಿ ಕಟ್ಟಿಕೊಂಡು ಬಂದ ವಿವರಗಳನ್ನು ಕೃತಿಯಲ್ಲಿ ನೀಡಿದ್ದಾರೆ.
0 ಪ್ರತಿಕ್ರಿಯೆಗಳು