ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮತ್ತು ಪ್ರೆಸ್ ಕ್ಲಬ್ ಮಾಜಿ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್(66) ಬೆಂಗಳೂರಿನಲ್ಲಿ ನಿಧನರಾದರು. ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶೇಷವಾಗಿ ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದ್ದ ಗುಡಿಹಳ್ಳಿ, ಪ್ರಜಾವಾಣಿ ಪತ್ರಿಕೆಯಲ್ಲಿ ಸುಧೀರ್ಘ ಅವಧಿಗೆ ಕೆಲಸ ಮಾಡಿದವರು.
ಪತ್ರಕರ್ತರ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ದುಡಿದವರು. ಕೆಯುಡಬ್ಲ್ಯೂಜೆ ಸಂಘಟನೆಯಲ್ಲಿ ಅವರ ಸೇವೆ ಮರೆಯಲಾಗದು ಎಂದು ಶ್ಲಾಘಿಸಿರುವ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೆಯುಡಬ್ಲ್ಯೂಜೆ ಪ್ರಾರ್ಥಿಸಿದೆ.
–ಶಿವಾನಂದ ತಗಡೂರು
ಮಂಗಳವಾರ ಮನೆಗೆ ಹೋಗಿ ಗುಡಿಹಳ್ಳಿಯನ್ನು ಮಾತನಾಡಿಸಿ ಧೈರ್ಯ ತುಂಬಿ ಬಂದ ಸಮಾಧಾನವಷ್ಟೆ ಉಳಿಯಿತು. ಎಲ್ಲಕ್ಕಿಂತ ಮುಖ್ಯವಾಗಿ ಆತ ಬಹುದೊಡ್ಡ ಅಂತಃಕರಣದ ಮನುಷ್ಯ. ಸಾವಿರಾರು ಮಂದಿಯ ಕಷ್ಟಕ್ಕೆ ಸಹಾಯಹಸ್ತ ಚಾಚಿದ ಹಿರಿಯ ಗೆಳೆಯ.
–ಬಿ ಎಂ ಹನೀಫ್
ಗುಡಿಹಳ್ಳಿ ಮೈಸೂರಲ್ಲಿ ಸಿಗುತ್ತಿದ್ದರು. ನಮಗೆ ಗೊತ್ತಿಲ್ಲದ ರಂಗಭೂಮಿಯ ಕತೆಗಳನ್ನು ಹೇಳುತ್ತಿದ್ದರು. ನಾವೆಲ್ಲರೂ ಕಡೆಗಣಿಸಿದ ರಂಗಭೂಮಿಯ ಹಿರಿಯ ನಟಿಯರ ಬದುಕಿನ ಚಿತ್ರ ಕಟ್ಟಿಕೊಡುತ್ತಿದ್ದರು. ಅವರ ಹಲವಾರು ಪುಸ್ತಕಗಳನ್ನು ಓದಿದ್ದೇನೆ. ಕೆಲವೇ ತಿಂಗಳ ಹಿಂದೆ ಒಂದು ಪುಸ್ತಕ ತಂದು ಕೊಟ್ಟಿದ್ದರು. ನೆನಪು ಅಮರ
–ಜೋಗಿ
ಒಂದೆರಡು ವಾರಗಳ ಹಿಂದೆ ಮಾತನಾಡಿದ್ದರು. ಆಘಾತಕಾರಿ ವಿಷಯ ಇದು… ಅವರ ಶಿಫ್ಟ್ನಲ್ಲಿ ಕೆಲಸ ಮಾಡಿದ್ದೆ. ಡೆಸ್ಕ್ನಲ್ಲಿದ್ದಾಗ. ಆ ಸಲುಗೆ ಈ ವರೆಗೂ ಉಳಿಸಿಕೊಂಡು ಬಂದಿದ್ದರು. ನನ್ನ ಬಾಬುಮಾಮಾನ (ಚಂದ್ರಶೇಖರ ವಸ್ತ್ರದ) ಸ್ನೇಹಿತರು. ಹಂಗಾಗಿ ಎಲ್ಲರ ಬಗ್ಗೆಯೂ ವಿಚಾರಿಸಿಕೊಂಡರು. ಫೋನ್ ಇಡಬೇಕಾದ್ರ ‘ಕಾಳಜಿ ತೊಗೊರಿ ಸರ್’ ಅಂತಂದಿದ್ದಕ್ಕ ಮತ್ತ ಹತ್ನಿಮಿಷ ಮಾತಾಡಿದ್ರು. ಹೆಣ್ಮಕ್ಕಳು ಇದ್ರ ಹಿಂಗ ಹೇಳ್ತಾರ ಅಂತ… ಅಗ್ದಿ ಅಂತಃಕರುಣಿ… ಛೆ… ಒಂಥರಾ ಸಂಕಟ… ಇದು..
–ರಶ್ಮಿ ಎಸ್
0 ಪ್ರತಿಕ್ರಿಯೆಗಳು